ಮುಖ್ಯಮಂತ್ರಿಯಾಗಿದ್ದಾಗ ನೆನಪಾಗಲಿಲ್ಲವೇ: ರೆಡ್ಡಿ
Team Udayavani, Feb 11, 2018, 6:25 AM IST
ಬೆಂಗಳೂರು: ಕೊಳಗೇರಿಯಲ್ಲಿ ಬಿಜೆಪಿ ನಾಯಕರ ವಾಸ್ತವ್ಯದ ಹಿಂದೆ ಮತ ಗಳಿಕೆಯ ಗಿಮಿಕ್ ಅಷ್ಟೇ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಮೂರು ವರ್ಷ ಮುಖ್ಯಮಂತ್ರಿ ಆಗಿದ್ದರು. ಆಗ ನೆನಪಿಗೆ ಬಾರದ ಕೊಳಗೇರಿ ನಿವಾಸಿಗಳ ಬಗ್ಗೆ ಈಗ ಒಮ್ಮೆಲೆ ಕಾಳಜಿ ಹುಟ್ಟಿರುವುದು ಮತ ಗಳಿಕೆಯ ಗಿಮಿಕ್ ಅಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸ್ಲಂ ಬಾಲಕನೊಬ್ಬನನ್ನು ದತ್ತು ಪಡೆಯುವುದಾಗಿ ಹೇಳಿದ್ದರು. ಬಾಲಕನ ಎಲ್ಲಾ ಖರ್ಚು-ವೆಚ್ಚ ಭರಿಸುವುದಾಗಿಯೂ ಹೇಳಿದ್ದರು. ಆದರೆ, ಆ ನಂತರ ಬಾಲಕನನ್ನು ನಡುರಸ್ತೆಯಲ್ಲೇ ಬಿಟ್ಟುಹೋದರು. ಹೀಗೆ ಬರೀ ಸುಳ್ಳು ಹೇಳಿಕೊಂಡೆ ಯಡಿಯೂರಪ್ಪ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಎಂದರು.
ಶ್ರೇಷ್ಠ ಹಿಂದೂಗಳು
ಈ ಹಿಂದೆ ರಾಜೀವ್ ಗಾಂಧಿ ದೇವಾಲಯಕ್ಕೆ ಹೋಗುತ್ತಿದ್ದರು. ರಾಹುಲ್ ಗಾಂಧಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಬಿಜೆಪಿ ನಾಯಕರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ವಾಸ್ತವವಾಗಿ ಬಿಜೆಪಿಯವರಿಗಿಂತಲೂ ನಾವೇ ಶ್ರೇಷ್ಠ ಹಿಂದೂಗಳು ಎಂದರು.