ಎಲ್ಲೆಲ್ಲೂ ಶಿವನಾಮ ಸ್ಮರಣೆ
Team Udayavani, Mar 5, 2019, 6:36 AM IST
ಬೆಂಗಳೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಸೋಮವಾರ ನಗರದ ಶಿವನ ದೇವಾಲಯಗಳು ಭಕ್ತರಿಂದ ತುಂಬಿ ತುಳುಕಿದವು. ಬೆಳಗ್ಗೆಯಿಂದಲೇ ಉಪವಾಸ ವ್ರತ, ಪೂಜೆ ಕೈಗೊಂಡ ಭಕ್ತರು, ದೇವಸ್ಥಾನಗಳಲ್ಲಿ ವಿವಿಧ ವಿಶೇಷ ಅಲಂಕಾರಗಳಲ್ಲಿ ಮಿಂದೆದ್ದ ಪರಮೇಶ್ವರನನ್ನು ನೋಡಿ ಪುನೀತರಾದರು. ಬೆಳಗ್ಗೆಯಿಂದ ಸಂಜೆವರೆಗೂ ದೇವಸ್ಥಾನಗಳಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತಾದಿಗಳು, ರಾತ್ರಿ ಶಿವನ ನಾಮಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾಗರಣೆಯಲ್ಲಿ ನಿರತರಾದರು.
ನಗರದ ಪ್ರಮುಖ ಶಿವ ಸನ್ನಿಧಿಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯ, ಮಾರುಕಟ್ಟೆಯ ಶ್ರೀ ಕೋಟೆ ಜಲಕಂಠೇಶ್ವರ ದೇವಾಲಯ, ಹಳೇ ಮದ್ರಾಸ್ ರಸ್ತೆಯಲ್ಲಿರುವ ಶಿವೋಹಂ ಶಿವ ದೇವಸ್ಥಾನ, ಚಾಮರಾಜಪೇಟೆಯ ರಾಮೇಶ್ವರ, ಕೆ.ಆರ್.ರಸ್ತೆಯ ಉಮಾಮಹೇಶ್ವರ ದೇವಸ್ಥಾನ ಸೇರಿದಂತೆ ಎಲ್ಲಾ ಶಿವನ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಅಭಿಷೇಕ, ರುದ್ರಾಭಿಷೇಕ ಮಾಡಿ ಬಿಲ್ವಪತ್ರೆ ಅರ್ಪಿಸಿ ಪೂಜಿಸಲಾಯಿತು.
ಆನಂತರ ನಿರಂತರವಾಗಿ ಮಹಾಮಂಗಳಾರತಿ, ಶಿವ ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ಉಪನ್ಯಾಸ ನಡೆದವು. ಹಬ್ಬದ ಹಿನ್ನೆಲೆ ದೇವಸ್ಥಾನಗಳಲ್ಲಿ ಹಗಲು ರಾತ್ರಿ ಭೇದವಿಲ್ಲದೇ ಭಕ್ತರ ದಂಡು ನೆರೆದಿತ್ತು. ದೇವಸ್ಥಾನಗಳಲ್ಲಿ ವಿಭೂತಿ, ಹೂವು, ಹಣ್ಣುಗಳಿಂದ ಅಲಂಕೃತನಾದ ನೀಲಕಂಠನನ್ನ ಕಂಡು ಭಕ್ತಾಧಿಗಳಿಂದ ಸತ್ಯಂ ಶಿವಂ ಸುಂದರಂ… ಸರ್ವಂ ಶಿವ ಮಯಂ… ಓಂ ನಮಃ ಶಿವಾಯ ನಾಮ ಸ್ಮರಣೆಗಳು ಕೇಳಿಬಂದವು. ಸೋಮವಾರ 6 ಗಂಟೆಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ದೇವಾಲಯಗಳು ತೆರೆದಿದ್ದವು.
ಗವಿಗಂಗಾಧರೇಶ್ವರ ದೇವಾಲಯ: ಗವಿಪುರದ ಗವಿಗಂಗಾದರೇಶ್ವರ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಅಭಿಷೇಕ ಆರಂಭವಾಯಿತು. ಈ ದೇವಸ್ಥಾನ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು, ದಕ್ಷಿಣಾಭಿಮುಖವಾಗಿ ಇರುವ ದೇವಾಲಯವೂ ಆಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳ ದಂಡು ದೇವಸ್ಥಾನಕ್ಕೆ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿನಿಂತು ದರ್ಶನ ಪಡೆದರು.
ಸಚಿವ ರೇವಣ್ಣ ಕುಟುಂಬ ಸಮೇತರಾಗಿ ಗಂಗಾದರೇಶ್ವರನ ದರ್ಶನ ಪಡೆದರು. ಸಂಜೆ ಅದಮ್ಯ ಚೇತನ ವತಿಯಿಂದ ದೇವಾಲಯಕ್ಕೆ ಬಂದಿದ್ದ ಎಲ್ಲಾ ಭಕ್ತಾಧಿಗಳಿಗೂ ಪಾನಕ, ಪಲಹಾರ ವಿತರಿಸಲಾಯಿತು. ರಾತ್ರಿ ಪೂರ್ತಿ ಶಿವ ಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಮಲ್ಲೇಶ್ವರದ ಕಾಡುಮಲ್ಲೇಶ್ವರ, ಕನ್ನಿಕಾ ಪರಮೇಶ್ವರಿ, ಹನುಮಂತನಗರದ ಶೇಷ ಗಣಪತಿ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಸೋಮವಾರ ಅದ್ದೂರಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯಗಳಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಶಿವನಿಗೆ ಹಾಲು, ಮೊಸರು, ಎಳನೀರುಗಳಿಂದ ಅಭಿಷೇಕ ಮಾಡಲಾಯಿತು.
ಶಿವಲಿಂಗ, ಶಿವನ ಮೂರ್ತಿ ಜತೆ ದೇವಸ್ಥಾನವನ್ನು ಸಹ ಹೂವು ಹಣ್ಣು ದಾನ್ಯಗಳಿಂದ ವಿಜೃಂಭಣೆಯಿಂದ ಅಲಂಕಾರಗೊಳಿಸಲಾಗಿತ್ತು. ಹಳೇ ಮದ್ರಾಸ್ ರಸ್ತೆಯಲ್ಲಿರುವ ಶಿವನ ದೇವಾಲಯಕ್ಕೆ ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಸಾವಿರಾರು ಭಕ್ತರು ಆಗಮಿಸಿದ್ದರು.
ಬಸವನಗುಡಿಯಲ್ಲಿರುವ ಕಾಳಹಸ್ತೇಶ್ವರ ದೇವಾಲಯ, ಬೇಡರ ಕಣ್ಣಪ್ಪ ದೇವಾಲಯ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ಮಾರುಕಟ್ಟೆಯ ಶ್ರೀ ಕೋಟೆ ಶ್ರೀ ಜಲಕಂಠೇಶ್ವರ ದೇವಾಲಯದಲ್ಲಿ ಯಾಮ ಪೂಜೆ, ಕಬ್ಬನ್ ಉದ್ಯಾನದ ಈಶ್ವರ ದೇವಸ್ಥಾನದಲ್ಲಿ ಅಖೀಲ ಭಾರತ ಹಿಂದೂ ಮಹಾಸಭಾ ವತಿಯಿಂದ ಸಂಜೆ 5ಕ್ಕೆ ಸೈನಿಕರ ರಕ್ಷಣೆ ಹಾಗೂ ದೀರ್ಘಾಯಸ್ಸಿಗೆ ಮೃತ್ಯುಂಜಯ ಹೋಮ ನಡೆಯಿತು.
ಜಾಗರಣೆ ಜೋರು: ನಗರದ ಪ್ರಮುಖ ದೇವಾಲಯ, ಸಂಘ ಸಂಸ್ಥೆಗಳಿಂದ ಶಿವರಾತ್ರಿ ಹಿನ್ನೆಲೆ ಜಾಗರಣೆ ನಡೆಯಿತು. ಶಿವನ ಸ್ಮರಣೆಯ ಸಂಗೀತ ಸೇವೆ, ಭಜನೆ, ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ಸಿರೂರು ಪಾರ್ಕ್ನಲ್ಲಿ ನಗೆಹಬ್ಬ, ಮಾಗಡಿ ರಸ್ತೆ ಮಾಚೋಹಳ್ಳಿಯಲ್ಲಿರುವ ಶ್ರೀ ಜೋಡಿ ವೀರಭದ್ರೇಶ್ವರ ರುದ್ರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸವಿತಕನ ಹಳ್ಳಿ ಬ್ಯಾಂಡ್ ಸಂಗೀತ ಕಾರ್ಯಕ್ರಮ,
ವಿಶೇಷ ಜಾದೂ ಪ್ರದರ್ಶನ, ಮಲ್ಲಗಂಬ ಪ್ರದರ್ಶನ, ವಿವೇಕ ನಗರದ ವಣ್ಣಾರ್ ಪೇಟ್ನ ಕಾಶಿ ವಿಶ್ವನಾಥರ ದೇವಸ್ಥಾನದಲ್ಲಿ ಭಕ್ತಿಸುಧೆ, ಜೆ.ಪಿ.ನಗರ 7ನೇ ಹಂತದ ಆರ್.ಬಿ,ಐ ಬಡಾವಣೆಯ ಸೋಮೇಶ್ವರ ಸಭಾಭವನದಲ್ಲಿ ಸುಕನ್ಯಾ ಕಲ್ಯಾಣ ಯಕ್ಷಗಾನ ಪ್ರಸಂಗ,ಜೆ.ಪಿ.ನಗರ 7ನೇ ಹಂತದ ಆರ್.ಬಿ,ಐ ಬಡಾವಣೆಯಿಂದ ಉದಯ ಕಲಾ ನಿಕೇತನ ವತಿಯಿಂದ ಕೃಷ್ಣಪ್ರಿಯ ಕನಕ ನೃತ್ಯರೂಪಕ ಪ್ರಸ್ತುತಪಡಿಸಲಾಯಿತು.
ರೋಬೋಟ್ ಶಿವಪುರಾಣ: ಮಲ್ಲೇಶ್ವರನಲ್ಲಿರುವ ವಾಸವಿ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಂಘವು ವಿಭಿನ್ನವಾಗಿ ಶಿವ ಆರಾಧನೆಯನ್ನು ಮಾಡಿತು. ದೇಗುಲ ಆಗಮಿಸುವ ಭಕ್ತ ವೃಂದಕ್ಕೆ ಕೆಲವು ಪುರಾಣ ಕಥೆಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ಗುಹಾಂತರ ನಾಗಲಿಂಗೇಶ್ವರ ಸ್ವಾಮಿ ಹಾಗೂ ಶಿವನ ವೈಭವಯುತ ಆಕರ್ಷಕ ಸೆಟ್ ನಿರ್ಮಾಣ ಮಾಡಲಾಗಿತ್ತು.
ಸಾಮಾನ್ಯವಾಗಿ ಪುರಾಣದ ಪ್ರಕಾರ ಗಣೇಶ ಹಾಗೂ ಸುಬ್ರಮಣ್ಯನಿಗೆ ಒಂದು ಪಂದ್ಯ ಏರ್ಪಡಿಸಿ, ಯಾರು ಮೊದಲು ಪ್ರಪಂಚ ಸುತ್ತಿ ಬರುತ್ತಾರೋ ಅವರಿಗೆ ಫಲ ನೀಡುತ್ತೇವೆಂದು ಹೇಳಿರುತ್ತಾರೆ. ಬುದ್ದಿವಂತ ಗಣೇಶ ತನ್ನ ತಂದೆ ತಾಯಿಯನ್ನು ಸುತ್ತಿ ಪ್ರಪಂಚ ಸುತ್ತಿ ಬಂದಾಯ್ತು ಎಂದು ಹೇಳುತ್ತಾನೆ ಈ ಕತೆಯನ್ನು ರೋಬೋಟಿಕ್ ಮಾದರಿಯಲ್ಲಿ ಮಾಡಲಾಗಿತ್ತು. ಭಕ್ತಾಧಿಗಳು ಈ ಮಾದರಿ ಕಣ್ತುಂಬಿಕೊಂಡು ಸಂತಸಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ