ಮಣ್ಣಿನ ಗಣಪನೇ ಭಕ್ತರ ಫೇವರಿಟ್!
Team Udayavani, Aug 25, 2019, 3:10 AM IST
ಬೆಂಗಳೂರು: ಕೇವಲ ಎಂಟು ವರ್ಷಗಳ ಹಿಂದಿನ ಮಾತು. ನಗರದಲ್ಲಿ ಪ್ರತಿಷ್ಠಾಪನೆ ಆಗುತ್ತಿದ್ದ ಗಣೇಶ ಮೂರ್ತಿಗಳ ಸಂಖ್ಯೆ 12-14 ಲಕ್ಷ. ಇದರಲ್ಲಿ “ಪರಿಸರ ಸ್ನೇಹಿ’ಗಳ ಸಂಖ್ಯೆ ಕೇವಲ ಎರಡು ಲಕ್ಷ. ಉಳಿದವು ಪರಿಸರಕ್ಕೆ ಮಾರಕವಾಗಿದ್ದವು. ಆದರೆ, ಇಂದು ಇವುಗಳ ಸಂಖ್ಯೆ ಉಲ್ಟಾ ಆಗಿದೆ. ಇದು ನಗರದ ಜನರಲ್ಲಿ ಉಂಟಾದ ಪರಿಸರ ಕಾಳಜಿಯ ಫಲಶ್ರುತಿ.
2011ರಲ್ಲಿ ನಗರದ ಮಟ್ಟಿಗೆ ಪಿಒಪಿ ಗಣೇಶನ ಅಬ್ಬರ ಜೋರಾಗಿತ್ತು. ಹಾಗಾಗಿ, ಆಸುಪಾಸು ವರ್ಷಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಸಂಖ್ಯೆ 10ರಿಂದ 12 ಲಕ್ಷ ಇತ್ತು. ಈಗ ಜನರಲ್ಲಿ ಜಾಗೃತಿ ಉಂಟಾಗಿದೆ. ಪರಿಣಾಮ 10ರಿಂದ 12 ಲಕ್ಷ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತಿದೆ. ಅಂದರೆ, ಶೇ.80ರಷ್ಟು ಮಣ್ಣಿನ ಮೂರ್ತಿಗಳನ್ನು ಇಡಲಾಗುತ್ತಿದೆ. ಕೆರೆ, ಕಲ್ಯಾಣಿಗಳು, ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜನೆಯಾಗುವ ಗಣೇಶನ ಮೂರ್ತಿಗಳ ಸಮೀಕ್ಷೆಯನ್ನು ವಿವಿಧ ಸಂಘಟನೆಗಳು ಮಾಡಿದ್ದು, ಅವುಗಳು ನೀಡಿದ ಮಾಹಿತಿ ಇದಾಗಿದೆ.
2011ಕ್ಕೆ ಹೋಲಿಸಿದರೆ ನಗರದಲ್ಲಿ ಮಣ್ಣಿನ ಗಣಪತಿಗಳ ಸಂಖ್ಯೆ ಆರುಪಟ್ಟು ಹೆಚ್ಚಳವಾಗಿದೆ. ಪ್ರಸ್ತುತ ಸುಮಾರು 12-14 ಲಕ್ಷ ಮಣ್ಣಿನ ಗಣೇಶ ಮೂರ್ತಿಗಳು ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುತ್ತಾರೆ. ಅದರಲ್ಲಿ ಶೇ. 95ರಷ್ಟು ಮಣ್ಣಿನ ಗಣೇಶ ಮೂರ್ತಿಗಳಿರಲಿವೆ. ಸಾಮೂಹಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಸಂಖ್ಯೆ ಒಂದೂವರೆ ಲಕ್ಷ ದಾಟಿದ್ದು, ಇದರಲ್ಲಿ ಶೇ. 20 ರಷ್ಟು ಗಣೇಶ ಪಿಒಪಿ ಗಣೇಶಗಳಿವೆ. ಒಟ್ಟಾರೆ ವಿವಿಧ ಕಡೆ ಬರುವ ಮಣ್ಣಿನ ಗಣೇಶ ಮೂರ್ತಿಯಿಂದ 600 ಟನ್ಗೂ ಅಧಿಕ ಮಣ್ಣು ಬೆಂಗಳೂರು ಸೇರುತ್ತಿದೆ ಎನ್ನುತ್ತಾರೆ ಫ್ರೆಂಡ್ ಆಫ್ ಲೇಕ್ ಸಂಘಟನೆಯ ರಾಮ್ಪ್ರಸಾದ್.
ಬೆಂಗಳೂರಿನ ಜನಸಂಖ್ಯೆ 1.20 ಕೋಟಿ. ಇದರಲ್ಲಿ 34 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಸುಮಾರು 12ರಿಂದ 13ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಳೆದ ವರ್ಷ ಪಾಲಿಕೆ ವ್ಯಾಪ್ತಿಯಲ್ಲಿ 1.34 ಲಕ್ಷ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅದರಲ್ಲಿ 16 ಸಾವಿರ ಪಿಒಪಿ ಗಣೇಶ ಮೂರ್ತಿಗಳಿದ್ದವು. ಈ ಬಾರಿ ಈ ಸಂಖ್ಯೆ ಇನ್ನು ಕಡಿಮೆಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಗಣೇಶ ಮೂರ್ತಿ ತಯಾರಕರು ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳಿಂದ ಮಣ್ಣನ್ನು ತೆಗೆಯಬಹುದು. ನಗರದಲ್ಲಿ ಮೂರ್ತಿ ತಯಾರಿಕೆಗೆ ಮಣ್ಣಿನ ಅಭಾವವಿದ್ದು, ಈ ಬಗ್ಗೆ ಯಾವುದೇ ಮಾನದಂಡಗಳಿಲ್ಲ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಗಣೇಶ ಮೂರ್ತಿ ತಯಾರಿಕರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಕೆಂಗೇರಿ, ಹನುಮಂತನಗರ, ಮಾಗಡಿ ರಸ್ತೆ, ಕನಕಪುರ ರಸ್ತೆ ಬಳಿ ಕಲಾವಿದರು ಸಾವಿರಾರು ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಬೆಂಗಳೂರು ಸುತ್ತಲಿನ ದೇವನಹಳ್ಳಿ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಿಂದ ಮಾತ್ರವಲ್ಲ; ಶಿವಮೊಗ್ಗದಿಂದಲೂ ಮಣ್ಣಿನ ಮೂರ್ತಿಗಳು ಬರುತ್ತಿವೆ.
ಸಾಮಾಜಿಕ ಜಾಲತಾಣ ಮಾತ್ರವಲ್ಲದೇ, ಬಿಬಿಎಂಪಿ, ಜಲಮಂಡಳಿ, ರೋಟರಿ, ಫ್ರೆಂಡ್ ಆಫ್ ಲೇಕ್ ಸಂಘಟನೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ನಡೆಸಿದರ ಪರಿಣಾಮ ಹಂತ-ಹಂತವಾಗಿ ಮಣ್ಣಿನ ಗಣೇಶ ಮೂರ್ತಿ ಬಗ್ಗೆ ಒಲವು ತೋರಿದ್ದಾರೆ. ಪಿಒಪಿ ಗಣೇಶ ಮೂರ್ತಿ ಕೆರೆಯಲ್ಲಿ ವಿಸರ್ಜಿಸಿದರೆ ವರ್ಷವಾದರೂ ಕರಗುವುದಿಲ್ಲ. ಮಣ್ಣಿನ ಗಣೇಶ ಮೂರ್ತಿ ಒಂದು ಗಂಟೆಯಲ್ಲಿ ಸಂಪೂರ್ಣ ಕರಗಲಿದೆ ಎಂದು ಚಿತ್ರಕಲಾ ಪರಿಷತ್ತಿನ ಪ್ರಾಧ್ಯಾಪಕ ಹಾಗೂ ಸ್ವತಃ ಕಲಾವಿದರಾದ ಕೆ. ವಿಶಾಲ್ ತಿಳಿಸಿದರು.
ಆಕರ್ಷಕ ರಿಯಾಯಿತಿ: ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಘ-ಸಂಸ್ಥೆಗಳು ವಿವಿಧ ಆಕರ್ಷಕ ರಿಯಾಯಿತಿ ನೀಡುತ್ತಿವೆ. ಸಮರ್ಪಣ ಸಂಸ್ಥೆ 11ರಿಂದ 19 ಇಂಚಿನ ಗಣೇಶ ಮೂರ್ತಿಗಳಿಗೆ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳನ್ನು ಹಾಕುತ್ತಿದ್ದು, ಅದೃಷ್ಟ ಪರೀಕ್ಷಿಸಿಕೊಳ್ಳಿ ಎಂದು ಜನರನ್ನು ಆಕರ್ಷಿಸಲಾಗುತ್ತಿದೆ. ರೋಟರಿ ಬೆಂಗಳೂರು ಗ್ರೀನ್ ಸಿಟಿ ಎಂಬ ಸಂಸ್ಥೆ ಮಣ್ಣಿನ ಗಣೇಶ ಮೂರ್ತಿ ಕೊಂಡುಕೊಂಡರೆ ಹೂವಿನಕುಂಡ ಉಚಿತವಾಗಿ ನೀಡುವ ಮೂಲಕ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಲು ಆಕರ್ಷಿಸುತ್ತಿದೆ.
ಶಿವಮೊಗ್ಗದಿಂದ ಬರ್ತಿವೆ ಮೂರ್ತಿಗಳು: ಮಣ್ಣಿನ ಗಣೇಶ ಮೂರ್ತಿಗಳಿಗಾಗಿ ಬೆಂಗಳೂರಿನಿಂದ ಬೇಡಿಕೆ ಬರುತ್ತಿವೆ. ಕಳೆದ ವರ್ಷ ಹತ್ತು ಮೂರ್ತಿಗಳಿಗೆ ಆರ್ಡರ್ ಬಂದಿತ್ತು. ಈ ವರ್ಷ ಮೂರುಪಟ್ಟು ಅಂದರೆ 30 ಗಣೇಶ ಮೂರ್ತಿಗೆ ಬೇಡಿಕೆಗಳು ಬಂದಿವೆ. ಈಗಾಗಲೇ ಮೂರ್ತಿಗಳ ತಯಾರಿಕೆ ನಡೆದಿದೆ. ಈ ಗಣೇಶ ಮೂರ್ತಿಗಳು ಕನಿಷ್ಠ 4 ಅಡಿ ಎತ್ತರವಿದ್ದು, 80ರಿಂದ 90 ಕೆಜಿ ತೂಗುತ್ತವೆ. ಕಳೆದ ನಾಲ್ಕೈದು ವರ್ಷದಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಆರ್ಥಿಕಮಟ್ಟವೂ ಸುಧಾರಿಸಿದೆ. ಒಂದು ಮೂರ್ತಿಯನ್ನು 12 ಸಾವಿರದಿಂದ 15 ಸಾವಿರ ರೂ.ಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ 25 ವರ್ಷಗಳಿಂದ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿರುವ ಪರಶುರಾಮ್.
ಪ್ರಸಕ್ತ ವರ್ಷ ಮಣ್ಣಿನ ಮೂರ್ತಿಗಳಿಗೆ ಭಾರಿ ಬೇಡಿಕೆ ಇದ್ದು, 4 ಇಂಚಿನಿಂದ 5 ಅಡಿವರೆಗೆ ಒಂದು ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ನಗರದಲ್ಲಿ ಮಣ್ಣಿನ ಕೊರತೆ ಎದುರಾಗಿದ್ದು, ಮಾಗಡಿಯಿಂದ ಮಣ್ಣನ್ನು ತರಿಸಲಾಗುತ್ತಿದೆ.
-ರಮೇಶ್, ಗಣೇಶ ಮೂರ್ತಿ ಕಲಾವಿದ.
ಮಣ್ಣಿನ ಗಣೇಶನ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಲಕ್ಷಾಂತರ ಮಣ್ಣಿನ ಗಣೇಶ ಮೂರ್ತಿಗಳು ಬೇಕಾಗಿರುವುದರಿಂದ ಶಿವಮೊಗ್ಗದಿಂದಲೂ ಮೂರ್ತಿಗಳು ಬರುತ್ತವೆ. ಬಹುತೇಕ ಮೂರ್ತಿಗಳು ಬೆಂಗಳೂರು ಸುತ್ತಲಿನ ಹಳ್ಳಿಗಳಿಂದ ಬರುತ್ತವೆ.
-ಕೆ.ವಿಶಾಲ್, ಚಿತ್ರಕಲಾ ಪರಿಷತ್ತು
* ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್