ಗಾಳಿ-ಮಳೆಗೆ ಐವರು ಬಲಿ, ಹಲವರಿಗೆ ಗಾಯ
Team Udayavani, May 12, 2017, 10:37 AM IST
ಬೆಂಗಳೂರು: ರಾಜ್ಯದ ಹಲವೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 7 ಸೆಂ.ಮೀ. ಮಳೆ ಸುರಿಯಿತು. ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಸಿಡಿಲು ಬಡಿದು ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಬಿರುಸಿನ ಮಳೆ, ಗಾಳಿಗೆ ಬಸ್ ನಿಲ್ದಾಣದ ಎದುರಿನ ಪಾನ್ ಶಾಪ್ ಮುಂದೆ ಆಲದ ಮರ ಉರುಳಿ ಬಿದ್ದು ರಸ್ತೆ ಬದಿ ವ್ಯಾಪಾರಿಯೊಬ್ಬ ಮೃತಪಟ್ಟಿದ್ದಾನೆ.
ಇಫ್ತಾರ್ ಮಹ್ಮದರಕ ಕಿತ್ತೂರ (22) ಮೃತ. ಚಿತ್ರದುರ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಯುವಕ ಹಾಗೂ ಕೋಳಿಫಾರಂ ಗೋಡೆ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಜೋಗಿಹಟ್ಟಿ ಗ್ರಾಮದ ತಿಪ್ಪೇಸ್ವಾಮಿ (25) ಸಿಡಿಲು ಬಡಿದು ಮೃತಪಟ್ಟವ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಮಳೆಯಿಂದ ಕೋಳಿಫಾರಂ ಗೋಡೆ ಕುಸಿದು ಗೋವಿಂದಪ್ಪ (65) ಎಂಬುವರು ಮೃತಪಟ್ಟಿದ್ದಾರೆ.
ಚಾಮರಾಜನಗರದಲ್ಲಿ ಗುರುವಾರ ಬೆಳಗಿನ ಜಾವ ಭರ್ಜರಿ ಮಳೆ ಸುರಿಯಿತು. ಕಳೆದ 10 ವರ್ಷಗಳ ಅವಧಿಯಲ್ಲಿ ಒಂದೇ ದಿನದಲ್ಲಿ ಸುರಿದ ಭಾರಿ ಮಳೆ ಇದಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ನಾಗರಿಕರು ಪರದಾಡುವಂತಾಯಿತು. ಯಾದಗಿರಿ ತಾಲೂಕಿನ ಹಳಗೇರಾ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು 20 ಕುರಿ ಮೃತಪಟ್ಟಿವೆ.