ಸ್ನೇಹಿತರಿಬ್ಬರ ನಡುವಣ ಜಗಳ ಕೊಲೆಯಲ್ಲಿ ಅಂತ್ಯ
Team Udayavani, Feb 12, 2019, 6:37 AM IST
ಬೆಂಗಳೂರು: ಕುಡಿತದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕೆಂಗೇರಿ ಸ್ಯಾಟಲೈಟ್ ಟೌನ್ ನಿವಾಸಿ ವರುಣ್ (25) ಕೊಲೆಯಾಗಿದ್ದು, ಆತನಿಗೆ ಚಾಕುವಿನಿಂದ ಇರಿದು ಕೊಲೆಮಾಡಿದ ಆರೋಪಿ ರವಿ ತಲೆಮರೆಸಿಕೊಂಡಿದ್ದಾನೆ.
ಟ್ರ್ಯಾಕ್ಟರ್ ಚಾಲಕನಾಗಿರುವ ವರುಣ್ ಹಾಗೂ ಆಟೋಚಾಲಕನಾಗಿರುವ ರವಿ ಹಲವು ವರ್ಷಗಳ ಸ್ನೇಹಿತರಾಗಿದ್ದು ಇತ್ತೀಚೆಗೆ ಇಬ್ಬರ ನಡುವೆ ಬೈಕ್ ಅಡವಿಟ್ಟುಕೊಳ್ಳುವ ವಿಚಾರಕ್ಕೆ ಜಗಳ ನಡೆದಿದ್ದು ಮಾತುಬಿಟ್ಟಿದ್ದರು. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದು ತನಿಖೆ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ರವಿ ಬಂಧನಕ್ಕೆ ಕೆಂಗೇರಿ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಭಾನುವಾರ ರಾತ್ರಿ ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿರುವ ಬಾರ್ವೊಂದಕ್ಕೆ ಇಬ್ಬರು ಪ್ರತ್ಯೇಕವಾಗಿ ಬಂದು ಮದ್ಯ ಸೇವಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ವರುಣ್ ಪಾರ್ಕಿಂಗ್ ಜಾಗದಲ್ಲಿ ತನ್ನ ಬೈಕ್ ತೆಗೆಯುವಾಗ ರವಿ ಆಟೋಗೆ ತಗುಲಿದೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದು. ರವಿ ತನ್ನ ಬಳಿಯಿದ್ದ ಚಾಕುವಿನಿಂದ ವರುಣ್ ಎದೆಭಾಗಕ್ಕೆ ಎರಡು ಮೂರು ಬಾರಿ ಇರಿದು ಪರಾರಿಯಾಗಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ವರುಣ್ನನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ವರುಣ್ ಹಾಗೂ ರವಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಖಚಿತ ಪಟ್ಟಿಲ್ಲ.ಬೈಕ್ ಅಡಮಾನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು ಎಂಬ ವಿಚಾರ ಗೊತ್ತಾಗಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಆರೋಪಿ ರವಿ ಬಂಧನಕ್ಕೆ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ತಿಳಿಸಿದರು.