ಗೌರಿ ಹತ್ಯೆ: ಮತ್ತೂಬ್ಬ ಆರೋಪಿ ಸೆರೆ
Team Udayavani, Jul 27, 2018, 6:40 AM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಮತ್ತೂಬ್ಬ ಆರೋಪಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 11ಕ್ಕೆ ಏರಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ನವೀನ್ ಕುಮಾರ್, ಪ್ರವೀಣ್ ಕುಮಾರ್,ಅಮೋಲ್ ಕಾಳೆ, ಅಮಿತ್ ದೇಗ್ವೇಕರ್,
ಮನೋಹರ್ ಯಡವೆ ಹಾಗೂ ಶೂಟರ್ ಪರಶುರಾಮ್ ವಾಗ್ಮೋರೆಗೆ ಬೆಂಗಳೂರಿನ ಸಿಗೇಹಳ್ಳಿ ಗೇಟ್ ಬಳಿಯ ತನ್ನ ಮನೆಯಲ್ಲಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ತುಮಕೂರು ಮೂಲಕ ಎಚ್.ಎಲ್. ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸುರೇಶ್ ಸಿವಿಲ್ ಗುತ್ತಿಗೆದಾರ ಹಾಗೂ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ಸಿಗೇಹಳ್ಳಿಯಲ್ಲಿ ಸ್ವಂತ ಮನೆ ಹೊಂದಿದ್ದಾನೆ. ತನಿಖೆಯ ಆರಂಭದಲ್ಲಿ ಈತನ ಹೇಳಿಕೆಯನ್ನು ಆಧರಿಸಿಯೇ ಪ್ರಕರಣ ಪ್ರಮುಖ ಆರೋಪಿ ಸೇರಿ ಇತರರನ್ನು ಬಂಧಿಸಿ ಸಾಕ್ಷಿಯನ್ನಾಗಿಸಲಾಗಿತ್ತು.
ನಂತರದ ಬೆಳವಣಿಗೆಯಲ್ಲಿ ಸುರೇಶ್ ಇಡೀ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿ ಆರೋಪಿಗಳಿಗೆ ವಾಸಿಸಲು ಮನೆ ಕೊಟ್ಟಿದಲ್ಲದೆ, ಸಾಕ್ಷಿ ನಾಶ ವನ್ನು ಮಾಡಿದ್ದಾನೆ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಈ ಮೊದಲು ಸುರೇಶ್ ತನ್ನ ಹೇಳಿಕೆಯಲ್ಲಿ,ಹಿಂದೂ ಸಂಘಟನೆಯೊಂದರ ಹೆಸರು ಹೇಳಿಕೊಂಡು ಮಹಾರಾಷ್ಟ್ರದ ಸ್ನೇಹಿತರು ಉಳಿದುಕೊಳ್ಳಲು ಮನೆ ಕೇಳಿದ್ದರು, ಹೀಗಾಗಿ ಮನೆ ಬಾಡಿಗೆ ನೀಡಿದ್ದೆ. ಆದರೆ, ಆರೋಪಿಗಳು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತನಿಖಾಧಿಕಾರಿಗಳನ್ನು ದಿಕ್ಕು ತಪ್ಪಿಸಿದ್ದ. ಆದರೆ, ಶೂಟರ್ ಪರಶುರಾಮ್ ವಾಗೊ¾àರೆ ಹುಬ್ಬಳ್ಳಿಯ ಗಣೇಶ್ ಹಾಗೂ ಅಮಿತ್ ಬದ್ದಿಯನ್ನು ಗುರುತಿಸಿದ್ದ. ಈ ಆರೋಪಿಗಳ ಹೇಳಿಕೆ ಆಧರಿಸಿ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತ ಮೋಹನ್ ನಾಯಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುರೇಶ್ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸ್ವಂತ ಮನೆ ಬಿಟ್ಟುಕೊಟ್ಟಿದ್ದ: ಸಿಗೇಹಳ್ಳಿಯಲ್ಲಿ ಸ್ವಂತ ಮನೆ ಹೊಂದಿರುವ ಸುರೇಶ್, ಆರೋಪಿಗಳಿಗೆ ತನ್ನ ಮನೆ ಬಿಟ್ಟುಕೊಟ್ಟು, ತನ್ನ ಕುಟುಂಬವ ನ್ನು ಬೇರೆಡೆ ಸ್ಥಳಾಂತರಿಸಿದ್ದ. ಜತೆಗೆ ಸಾಯಿಲಕ್ಷ್ಮೀ ಲೇಔಟ್ನಲ್ಲಿ ವಾಣಿಜ್ಯ ಮಳಿಗೆಯೊಂದನ್ನು ಬಾಡಿಗೆಗೆ ಕೊಡಿಸಿದ್ದ. ಆರೋಪಿಗಳು ನಗರ ಸುತ್ತಲು ತನ್ನದೇ ಬೈಕ್, ಹೆಲ್ಮೆಟ್,ಜಾಕೆಟ್ಅನ್ನು ಸಹ ಕೊಟ್ಟಿದ್ದ. ಜತೆಗೆ ರಾಜರಾಜೇಶ್ವರಿನಗರದ ರಸ್ತೆಗಳನ್ನು ಆರೋಪಿಗಳಿಗೆ ತೋರಿಸಿದ್ದ. ಕೃತ್ಯವೆಸಗಿದ ಬಳಿಕ ನೈಸ್ ರಸ್ತೆ ಮೂಲಕ ಹೇಗೆ ತಪ್ಪಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದ್ದ ಎಂದು ಹೇಳಲಾಗಿದೆ.
ಸಾಕ್ಷಿ ನಾಶ: 10 ವರ್ಷಗಳ ಹಿಂದೆ ರಾಜ್ಯದ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಸುರೇಶ್ ಇದೀಗ ಗೋವಾ ಮೂಲದ ಪ್ರಬಲ ಹಿಂದೂ ಸಂಘಟನೆ ಕಾರ್ಯಕರ್ತನಾಗಿದ್ದಾನೆ. ಹೀಗಾಗಿ ಗೌರಿ ಹಂತಕರ ಜತೆ ಕೃತ್ಯಕ್ಕೆ ಸಂಚು ರೂಪಿಸಿದಲ್ಲದೆ, ಸಾಕ್ಷಿ ಕೂಡ ನಾಶ ಮಾಡಿದ್ದಾನೆ. ಶೂಟರ್ ಪರಶುರಾಮ್ ವಾಗ್ಮೋರೆ ಹಾಗೂ ಬೈಕ್ ಚಾಲಕ ಬಳಸಿದ್ದ ಶಸಾOಉಸOಉ (ಪಿಸ್ತೂಲ್, ಚಾಕು, ಇತರೆ ವಸ್ತುಗಳು)ಹೆಲ್ಮೆಟ್, ಜರ್ಕಿನ್ಗಳನ್ನು ಸಾಯಿಲಕ್ಷ್ಮೀ ಲೇಔಟ್ನ ವಾಣಿಜ್ಯ ಮಳಿಗೆಯಲ್ಲಿ ಇಡಲಾಗಿತ್ತು.
ಇವುಗಳನ್ನು ಅನಂತರ ಖುದ್ದು ಸುರೇಶ್ ಕೊಂಡೊಯ್ದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ. ಇದೇ ಕೊಠಡಿಯಲ್ಲಿದ್ದ
ಇತರೆ ಉಪಕರಣಗಳನ್ನು ಸಹ ಸಂಪೂರ್ಣವಾಗಿ ನಾಶ ಮಾಡಿದ್ದಾನೆಂದು ಎಸ್ಐಟಿ ಮೂಲಗಳು ತಿಳಿಸಿವೆ.
ಪೊಲೀಸ್ ವಶಕ್ಕೆ: ಸುರೇಶ್ನನ್ನು ಗುರುವಾರ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಎಸ್ಐಟಿ ಅಧಿಕಾರಿಗಳು, ಪ್ರಕರಣದಲ್ಲಿ ಆರೋಪಿ ಪ್ರಮುಖ ಪಾತ್ರವಹಿಸಿದ್ದು,ಮಂಗಳೂರು, ಕುಣಿಗಲ್, ವಿಜಯಪುರಕ್ಕೆ ವಿಚಾರಣೆಗಾಗಿ ಕರೆದೊಯ್ಯಬೇಕಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಭೆ ಕೂಡ ನಡೆಸಿದ್ದಾನೆ.ಹೀಗಾಗಿ ಕೆಲ ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ, ಒಂದು ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಕೋರ್ಟ್ ಅರ್ಜಿ ಸಲ್ಲಿಸಿ ವಶಕ್ಕೆ ಪಡೆಯುವಂತೆ ಸೂಚಿಸಿತು. ಈ ವೇಳೆ ಆರೋಪಿ ಕೋರ್ಟ್ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸುತ್ತಿದ್ದಂತೆ ನನ್ನ ಕಪಾಳಕ್ಕೆ ಪೊಲೀಸರು ಹೊಡೆದಿದ್ದು, ತಪ್ಪು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದರು ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದ.
ಸನಾತನ ಸಂಸ್ಥೆ ಕಾರ್ಯಕರ್ತ
ಕುಣಿಗಲ್: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಹೇರೂರು ಗ್ರಾಮದ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಲಕ್ಷ್ಮಣ್ ಹಾಗೂ ಸೌಭಾಗ್ಯಮ್ಮ ಅವರ ಪುತ್ರ ಸುರೇಶ್ ಹಲವು ವರ್ಷಗಳಿಂದ ಸನಾತನ ಸಂಸ್ಥೆಯ ಕಾರ್ಯಕರ್ತನಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ತಂದೆ ಮತ್ತು ತಾಯಿ ಸನಾತನ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಸುರೇಶ್ ಪಟ್ಟಣದ ಕುವೆಂಪುನಗರ ಮನೆಯಲ್ಲಿದ್ದಾಗ ಬಂಧಿಸಿದ್ದಾರೆ ಎನ್ನಲಾಗಿದ್ದು ಕುಣಿಗಲ್ ಡಿವೈಎಸ್ಪಿ ತಮಗೆ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.