ಕೈನಲ್ಲೂ ಬೇಗುದಿ; ಸಿದ್ದು, ಪರಂ ವಿರುದ್ಧ ಜಿಲ್ಲಾಧ್ಯಕ್ಷರ ಅಸಮಾಧಾನ
Team Udayavani, May 9, 2017, 3:45 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರ ವಿರುದ್ಧ ಕಾಂಗ್ರೆಸ್ನ ಬಹುತೇಕ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ಆರೋಪಗಳ ಸುರಿಮಳೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರು ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸಿ ಪಕ್ಷದ ಎಲ್ಲ ಹಂತದ ನಾಯಕರ ಸಭೆ ಆರಂಭಿಸಿದ್ದಾರೆ. ಸೋಮವಾರ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಅತೃಪ್ತಿ ವ್ಯಕ್ತವಾಯಿತೆಂದು ಹೇಳಲಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು 11 ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲಿಯೇ ನಡೆಯುತ್ತಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ಪಕ್ಷದ ಇತರ ನಾಯಕರ ಉತ್ಸಾಹ ಕಡಿಮೆ ಮಾಡುವುದಲ್ಲದೇ, ರಾಜ್ಯದಲ್ಲಿ ಮೇಲ್ಜಾತಿಯ ಮತದಾರರು ಕಾಂಗ್ರೆಸ್ನಿಂದ ದೂರವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ನಲ್ಲಿ ಏಕ ವ್ಯಕ್ತಿ ನಾಯಕರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ. ಅವರ ಹೇಳಿಕೆಗಳಿಗೆ ನಿಯಂತ್ರಣ ಹಾಕಬೇಕು ಎಂದು ಪದಾಧಿಕಾರಿಗಳು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲಾ ಅಧ್ಯಕ್ಷರು ವೇಣುಗೋಪಾಲ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಿದರು. ಆದರೆ, ಜಿಲ್ಲಾಧ್ಯಕ್ಷರು ಮಾಡಿರುವ ಶಿಫಾರಸ್ಸುಗಳಿಗೆ ಬೆಲೆ ಕೊಡಲಿಲ್ಲ. ಅಲ್ಲದೇ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಹೋದರೂ ಉಡಾಫೆ ಉತ್ತರ ನೀಡುತ್ತಾರೆ. ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಅಧಿಕಾರ ಬಂದಾಗ ಅವಕಾಶ ನೀಡದೇ ಅವರನ್ನು ದೂರ ತಳ್ಳಿದರೆ, ಮುಂದಿನ ಚುನಾವಣೆ ಗೆಲ್ಲುವುದು ಕಷ್ಟವಾಗುತ್ತದೆ. ಹಿಂದಿನ ಉಸ್ತುವಾರಿಗೂ ಈ ಬಗ್ಗೆ ಸಾಕಷ್ಟು ಬಾರಿ ದೂರು ಕೊಟ್ಟಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈಗ ನಿಮ್ಮೆದುರು ಸಮಸ್ಯೆ ಹೇಳುತ್ತಿದ್ದೇವೆ. ನೀವಾದರೂ ಸರಿಪಡಿಸಬೇಕು. ಇಲ್ಲದಿದ್ದರೆ. 2018 ರ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ ಎಂದು ಜಿಲ್ಲಾಧ್ಯಕ್ಷರು ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪರಮೇಶ್ವರ್ ವಿರುದ್ಧವೂ ಆರೋಪ
ಇನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ವಿರುದ್ಧವೂ ಅದೇ ರೀತಿಯ ಆರೋಪಗಳ ಸುರಿಮಳೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಪರಮೇಶ್ವರ್ ಅವರು 2013 ರ ಚುನಾವಣೆಗೂ ಮುಂಚೆ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಮೇಲೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಆದರೆ, ಸಚಿವರಾದ ಮೇಲೆ ಪಕ್ಷ ಸಂಘಟನೆ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಚುನಾವಣೆಯ ರಣೋತ್ಸಾಹದಲ್ಲಿವೆ. ಬಿಜೆಪಿ ‘ಮಿಷನ್ 150’ ಅಂತ ಗುರಿ ಇಟ್ಟುಕೊಂಡು ಕಾರ್ಯ ತಂತ್ರ ಹೆಣೆಯುತ್ತಿದ್ದಾರೆ.
ಜೆಡಿಎಸ್ ದೇವೇಗೌಡರು ಮತ್ತು ಕುಮಾರಸ್ವಾಮಿ ಚುನಾವಣೆ ಸಿದ್ದತೆ ಮಾಡಿಕೊಂಡು ರಾಜ್ಯ ಸುತ್ತುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಮಾತ್ರ ಇನ್ನೂ ಯಾವುದೇ ಸಿದ್ದತೆ ಆರಂಭವಾಗಿಲ್ಲ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯದ ಬಗ್ಗೆ ಹೈ ಕಮಾಂಡ್ ಬೇಗ ತೀರ್ಮಾನ ಕೈಗೊಂಡರೆ ಅನುಕೂಲವಾಗುತ್ತದೆ. ವಿಳಂಬ ಮಾಡುವುದರಿಂದ ಪಕ್ಷದಲ್ಲಿ ಗೊಂದಲ ಮುಂದುವರೆಯುತ್ತದೆ ಎಂಬ ಅಭಿಪ್ರಾಯವನ್ನು ಬಹುತೇಕ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದಲ್ಲದೇ ಸಚಿವರ ಬಗ್ಗೆಯೂ ದೂರು ನೀಡಿರುವ ಜಿಲ್ಲಾಧ್ಯಕ್ಷರು, ಸಚಿವರು ಜಿಲ್ಲೆಗಳಿಗೆ ಭೇಟಿ ನೀಡುವಾಗ ಜಿಲ್ಲಾಧ್ಯಕ್ಷರ ಗಮನಕ್ಕೆ ತರುವುದಿಲ್ಲ. ಅಲ್ಲದೇ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಗೌರವ ನೀಡುವುದಿಲ್ಲ. ಪಕ್ಷದ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದಲ್ಲಿನ ಹಿರಿಯ ನಾಯಕರು ಸಿಎಂ ಹಾಗೂ ಪರಮೇಶ್ವರ ಅವರ ನಡವಳಿಕೆಯಿಂದ ಬೇಸತ್ತು ಪಕ್ಷ ತೊರೆಯುತ್ತಿದ್ದಾರೆ. ಆದರೂ ಇಬ್ಬರೂ ನಾಯಕರು ಸೌಜನ್ಯಕ್ಕೂ ಅವರನ್ನು ಕರೆದು ಮಾತನಾಡುತ್ತಿಲ್ಲ. ಇದು ಇನ್ನಷ್ಟು ನಾಯಕರು ಪಕ್ಷ ತೊರೆಯುವಂತೆ ಮಾಡುತ್ತದೆ ಎಂದು ದೂರಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಮೊದಲ ದಿನ ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎಲ್. ಶಂಕರ್, ಬಿ.ಕೆ. ಚಂದ್ರಶೇಖರ. ವಿ. ಮುನಿಯಪ್ಪ, ರಾಣಿ ಸತೀಶ್, ಪದಾಧಿಕಾರಿಗಳಾದ ಎಲ್. ಹನುಮಂತಪ್ಪ, ಶಿವಮೂರ್ತಿ ನಾಯಕ, ಕೆ. ಗೋವಿಂದ ರಾಜು, ರಾಮಚಂದ್ರಪ್ಪ, ಚಲವಾದಿ ನಾರಾಯಣಸ್ವಾಮಿ, ಜಿ.ಎ. ಬಾವಾ ಸೇರಿದಂತೆ ರಾಜ್ಯ ಪದಾಧಿಕಾರಿಗಳು ಹಾಗೂ 35 ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಮಹಿಳಾ ಘಟಕದ ಅಧ್ಯಕ್ಷರ ಜೊತೆ ವೇಣುಗೋಪಾಲ ಸಮಾಲೋಚನೆ ನಡೆಸಿದ್ದಾರೆ.
ಪಕ್ಷವನ್ನು ಮತ್ತೆ ತಳ ಮಟ್ಟದಿಂದ ಕಟ್ಟುವ ಕೆಲಸ ಆರಂಭವಾಗಬೇಕು. ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಅವುಗಳನ್ನು ಬದಿಗಿಟ್ಟು 2018 ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು.
– ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ