ವಿಪ್ಉಲ್ಲಂಘನೆ ಪ್ರಕರಣ: ಆದಷ್ಟು ಬೇಗ ತೀರ್ಮಾನ ಸೂಕ್ತ ಎಂದ ಹೈಕೋರ್ಟ್
Team Udayavani, Mar 21, 2018, 10:30 AM IST
ಬೆಂಗಳೂರು: ಪಕ್ಷದ ವಿಪ್ ಉಲ್ಲಂಘಿಸಿ 2016ರ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್ನ ಏಳು ಮಂದಿ ಶಾಸಕರ ಅನರ್ಹತೆ ಪ್ರಕರಣದಲ್ಲಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬುಧವಾರದೊಳಗೆ ತೀರ್ಪು ಪ್ರಕಟಸಿದರೆ ಒಳ್ಳೆಯದು ಎಂದು ವಿಧಾನಸಭೆ ಸ್ಪೀಕರ್ ಅವರಿಗೆ ಸಲಹೆ ನೀಡಿದೆ.
ಅನರ್ಹಗೊಂಡಿರುವ ಶಾಸಕರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡಬಾರದು ಎಂದು ಜೆಡಿಎಸ್ ಶಾಸಕರಾದ ಸಿ.ಎನ್. ಬಾಲಕೃಷ್ಣ ಹಾಗೂ ಬಿ.ಬಿ. ನಿಂಗಯ್ಯ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ|ರಾಘವೇಂದ್ರ ಎಸ್. ಚೌಹಾಣ್, ಈಗ ಮಾ.23ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿಕ್ಕಿದೆ. ಅದರಲ್ಲಿ ಪ್ರತಿವಾದಿ ಶಾಸಕರುಗಳು ಮತದಾನ ಮಾಡಲಿಕ್ಕಿದೆ. ಇಂತಹ ಸಂದರ್ಭದಲ್ಲಿ ಕಳೆದ ರಾಜ್ಯಸಭೆ ಚುನಾವಣೆ ವೇಳೆ ವಿಪ್ ಉಲ್ಲಂಘಿಸಿದ ಪ್ರಕರಣದ ಬಗ್ಗೆ ಸ್ಪೀಕರ್ ತಮ್ಮ ತೀರ್ಪು ಕಾಯ್ದಿರಿಸಿರುವುದರಲ್ಲಿ ಸಾಫಲ್ಯತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ಸ್ಪೀಕರ್ ತೀರ್ಪು ಕೊಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದು, ತೀರ್ಪು ಏನು ಎಂಬುದು ಕುತೂಹಲ ಮೂಡಿಸಿದೆ.
ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ವೇಳೆ ನ್ಯಾ|ಚೌಹಾಣ್ ಅವರು, ಸ್ಪೀಕರ್ ಅವರು ಯಾವುದೇ ತೀರ್ಮಾನ ಕೈಗೊಳ್ಳಲಿ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಶೀಘ್ರ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಅಡ್ವೋಕೇಟ್ ಜನರಲ್ರೊಂದಿಗೆ ಸ್ಪೀಕರ್ ಚರ್ಚೆ
ಅಡ್ವೋಕೇಟ್ ಜನರಲ್ ಮಧುಸೂಧನ್ ಆರ್. ನಾಯಕ್, ಸ್ಪೀಕರ್ ಕೆ.ಬಿ. ಕೋಳಿವಾಡ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಮಾ.21ರ ಮಧ್ಯಾಹ್ನ 12 ಗಂಟೆಯೊಳಗೆ ತೀರ್ಪು ನೀಡುವಂತೆ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಅವರಿಂದ ಸ್ಪೀಕರ್ ಕಾನೂನು ಸಲಹೆ ಪಡೆದುಕೊಂಡರು ಎನ್ನಲಾಗಿದೆ.