ಗುಂಡಿ ಬಿಟ್ಟು ಹೆಲಿಪ್ಯಾಡ್ ಟೆಂಡರ್ಗೆ ಆದ್ಯತೆ
Team Udayavani, Jun 15, 2018, 11:48 AM IST
ಬೆಂಗಳೂರು: ಬೆಂಗಳೂರಿನಲ್ಲಿನ ತ್ಯಾಜ್ಯ ವಿಲೇವಾರಿ, ರಸ್ತೆಗುಂಡಿ ಹಾಗೂ ಸಂಚಾರ ದಟ್ಟಣೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಬಿಬಿಎಂಪಿ, ಏರ್ ಆ್ಯಂಬುಲೆನ್ಸ್ ಸೇವೆ ಹಾಗೂ ಗಣ್ಯ ಸಂಚಾರಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಹೆಲಿಪ್ಯಾಡ್ಗಳ ನಿರ್ಮಾಣಕ್ಕೆ ನಿರ್ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಏರ್ ಆ್ಯಂಬುಲೆನ್ಸ್ ಹಾಗೂ ಗಣ್ಯರಿಗೆ ಅನುಕೂಲಕ್ಕಾಗಿ ಹೆಲಿಪ್ಯಾಡ್ ನಿರ್ಮಿಸಲು ಪಾಲಿಕೆಯಿಂದ ರೂಪಿಸಿರುವ ಯೋಜನೆಗೆ ಪಾಲಿಕೆ ಸದಸ್ಯರು ಹಾಗೂ ಹಲವು ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಅದರ ನಡುವೆಯೂ ಎಂಟೂ ವಲಯಗಳಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಾಗ ಗುರುತಿಸಿರುವ ಬಿಬಿಎಂಪಿ, ಶೀಘ್ರದಲ್ಲಿಯೇ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಿದೆ.
ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಸಮರ್ಪಕವಾದ ರಸ್ತೆಗಳ ನಿರ್ಮಾಣ, ರಾಜಕಾಲುವೆಗಳು ಹಾಗೂ ಬೀದಿ ದೀಪ ನಿರ್ವಹಣೆಯ ಜವಾಬ್ದಾರಿಯ ಪಾಲಿಕೆಯ ಮೇಲಿದೆ. ಆದರೆ, ಆ ಬಗ್ಗೆ ಹೆಚ್ಚಿನ ಆಸಕ್ತಿ ತೋರದ ಬಿಬಿಎಂಪಿ, ಕೆಲವೇ ಜನರಿಗೆ ಅನುಕೂಲವಾಗುವಂತಹ ಯೋಜನೆಗಳಿಗೆ ತೆರಿಗೆದಾರರ ಹಣವನ್ನು ವ್ಯಯ ಮಾಡಲು ಮುಂದಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಗರದಲ್ಲಿ ತೀವ್ರ ಸಂಚಾರ ದಟ್ಟಣೆಯಿಂದ ರೋಗಿಗಳು ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಜತೆಗೆ ನಗರಕ್ಕೆ ಗಣ್ಯರು ಆಗಮಿಸಿದಾಗ ಜೀರೋ ಟ್ರಾಫಿಕ್ ಇರುತ್ತದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಪಾಲಿಕೆಯ ಎಂಟು ವಲಯಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂಬುದು ಪಾಲಿಕೆ ಮೇಯರ್ ವಾದ.
ಅದರಂತೆ ಪಾಲಿಕೆಯ ಎಂಟು ವಲಯಗಳಲ್ಲಿ ತಲಾ ಒಂದು ಹೆಲಿಪ್ಯಾಡ್ ನಿರ್ಮಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಬಜೆಟ್ನಲ್ಲಿಯೂ ಯೋಜನೆಯನ್ನು ಪ್ರಸ್ತಾಪಿಸಲಾಗಿದ್ದು, ಅದರಂತೆ ಈಗಾಗಲೇ ಪಾಲಿಕೆಯ ಎಂಟು ವಲಯಗಳಲ್ಲಿ ಪಾಲಿಕೆಗೆ ಸೇರಿದ ಜಾಗಗಳನ್ನು ಗುರುತಿಸಲಾಗಿದೆ. ಜತೆಗೆ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳುತ್ತಾರೆ.
ಜಾಗ ಹೊಡೆಯುವ ಸ್ಕೀಂ: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ಜಾಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ. ಆ ಹಿನ್ನೆಲೆಯಲ್ಲಿ ಎಂಟು ವಲಯಗಳಲ್ಲಿ ಜಾಗವನ್ನು ಖಾಸಗಿಯವರಿಗೆ ಹೆಲಿಪ್ಯಾಡ್ ನಿರ್ಮಿಸಲು ಹಸ್ತಾಂತರಿಸುವ ಮೂಲಕ ಕೋಟ್ಯಂತರ ರೂ. ಬೆಲೆ ಬಾಳುವಂತಹ ಜಾಗ ಹೊಡೆಯಲು ಈ ಯೋಜನೆ ಜಾರಿಗೆ ಪಟ್ಟು ಹಿಡಿದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಗರದಲ್ಲಿನ ತ್ಯಾಜ್ಯ ವಿಲೇವಾರಿ, ತ್ಯಾಜ್ಯ ಸಂಸ್ಕರಣೆ ಘಟಕಗಳು ನಿರ್ವಹಣೆ, ರಾಜಕಾಲುವೆಗಳ ದುರಸ್ತಿ ಹಾಗೂ ರಸ್ತೆಗುಂಡಿ ಅನಾಹುತಗಳಂತಹ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳದ ಪಾಲಿಕೆಯ ಅಧಿಕಾರಿಗಳು, ಹೆಲಿಪ್ಯಾಡ್ನಂತಹ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಉತ್ಸಾಹ ತೋರುತ್ತಾರೆ ಎಂದು ಹಿರಿಯ ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಕೇಂದ್ರದ ನಾಗರೀಕ ವಿಮಾನಯಾನ ಸಂಸ್ಥೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಮೇಯರ್ ಸಂಪತ್ರಾಜ್ ಈಗಾಗಲೇ ನಾಗರೀಕ ವಿಮಾನಯಾನ ಡಿಜಿ ಅವರೊಂದಿಗೆ ಚರ್ಚೆ ನಡೆಸಿ, ಯೋಜನೆಯ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪಾಲಿಕೆಯ ಎಂಟು ವಲಯಗಳಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಯೋಜನೆಗೆ ಅಧಿಕೃತವಾಗಿ ಆಯುಕ್ತರಿಂದ ಯಾವುದೇ ಆದೇಶವಾಗಿಲ್ಲ. ನೇರವಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸುಮೋಟೋ ಮೂಲಕ ಕೌನ್ಸಿಲ್ಗೆ ಮುಂದೆ ಮಂಡಿಸಿದ್ದು, ನಂತರದಲ್ಲಿ ಪಾಲಿಕೆಯ ಬಜೆಟ್ನಲ್ಲಿ ಯೋಜನೆಯನ್ನು ಸೇರಿಸಲಾಗಿದೆ. ಆದರೆ, ಹೆಲಿಪ್ಯಾಡ್ನ್ನು ಎಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತದೆ, ಎಷ್ಟು ವೆಚ್ಚ ಹಾಗೂ ನಿರ್ವಹಣೆಯಂತಹ ಯಾವುದೇ ವಿವರಗಳನ್ನು ಬಜೆಟ್ನಲ್ಲಿ ನೀಡಿಲ್ಲ.
ಏರ್ ಆ್ಯಂಬುಲ್ಸೆನ್ ಸೇವೆ: ಹೆಲಿಪ್ಯಾಡ್ ನಿರ್ಮಾಣದ ನಂತರದಲ್ಲಿ ಏರ್ ಟ್ಯಾಕ್ಸಿ ಹಾಗೂ ಖಾಸಗಿ ಆ್ಯಂಬುಲೆನ್ಸ್ ಸೇವೆ ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದ್ದು, ಈಗಾಗಲೇ ಕೆಲವೊಂದು ಖಾಸಗಿ ಸಂಸ್ಥೆಗಳು ಸೇವೆ ಒದಗಿಸಲು ಮುಂದೆ ಬಂದಿವೆ. ಇದರೊಂದಿಗೆ ಕೆಲ ಸಂಸ್ಥೆಗಳು ಈಗಾಗಲೇ ನಗರದಲ್ಲಿ ಏರ್ ಟ್ಯಾಕ್ಸಿ ಆರಂಭಿಸಲು ಸಿದ್ಧತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಏರ್ ಟ್ಯಾಕ್ಸಿ ಸೇವೆಗೂ ಅನುಕೂಲವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಳಕೆಯಾಗದ ಹೆಲಿಪ್ಯಾಡ್ಗಳು: ನಗರದಲ್ಲಿ ನಿರ್ಮಾಣವಾಗುವ 20ಕ್ಕಿಂತ ಹೆಚ್ಚು ಮಹಡಿಗಳ ಎಲ್ಲ ಕಟ್ಟಡಗಳಲ್ಲಿ ಹೆಲಿಪ್ಯಾಡ್ಗಳನ್ನು ನಿರ್ಮಿಸುವುದು ಕಡ್ಡಾಯವಾಗಿದೆ. ಅದರಂತೆ ನಗರದಲ್ಲಿ ಈಗಾಗಲೇ ನೂರಾರು ಕಟ್ಟಡಗಳಲ್ಲಿ ಹೆಲಿಪ್ಯಾಡ್ಗಳು ನಿರ್ಮಾಣವಾಗಿವೆ. ಆದರೆ, ಈವರೆಗೆ ಹೆಚ್ಚಿನ ಕಟ್ಟಡಗಳಲ್ಲಿನ ಹೆಲಿಪ್ಯಾಡ್ಗಳು ಒಮ್ಮೆಯೂ ಬಳಕೆಯಾಗಿಲ್ಲ. ಹೀಗಿದ್ದರೂ, ಪ್ರತಿ ಹೆಲಿಪ್ಯಾಡ್ಗೆ 25 ರಿಂದ 30 ಲಕ್ಷ ರೂ. ವೆಚ್ಚದಂತೆ ಸುಮಾರು 3 ಕೋಟಿ ರೂ.ಗಳನ್ನು ಪೋಲು ಮಾಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.
ನಗರದಲ್ಲಿ ರಸ್ತೆ, ತ್ಯಾಜ್ಯ, ಬೀದಿ ದೀಪ, ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವುದು ಪಾಲಿಕೆಯ ಕೆಲಸವಾಗಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಸಾರ್ವಜನಿಕ ತೆರಿಗೆ ಹಣ ಪೋಲು ಮಾಡಲು ಮುಂದಾಗಿದ್ದು, ಪಾಲಿಕೆಯ ಕೋಟ್ಯಂತರ ರೂ. ಬೆಲೆ ಬಾಳುವ ಜಾಗಗಳನ್ನು ಹೆಲಿಪ್ಯಾಡ್ ಯೋಜನೆ ಹೆಸರಿನಡಿಯಲ್ಲಿ ಖಾಸಗಿಯವರಿಗೆ ನೀಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
-ಪದ್ಮನಾಭರೆಡ್ಡಿ, ಪಾಲಿಕೆಯ ಪ್ರತಿಪಕ್ಷ ನಾಯಕ
* ವೆಂ.ಸುನೀಲ್ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ