ಮಾಧ್ಯಮಗಳ ಜತೆ ನಾನು ಮಾತನಾಡಲ್ಲ: ಸಿಎಂ
Team Udayavani, Nov 23, 2018, 6:50 AM IST
ಬೆಂಗಳೂರು: ಇನ್ಮುಂದೆ ನಾನು ಮಾಧ್ಯಮಗಳ ಜತೆಗೆ ಮಾತನಾಡುವುದಿಲ್ಲ. ಪತ್ರಿಕಾಗೋಷ್ಠಿ ಯನ್ನೂ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೇದಿಕೆ ಮೇಲೆ ಎಷ್ಟು ಮಾತನಾಡುತ್ತೇನೋ ಅಷ್ಟನ್ನೇ ಬರೆದುಕೊಳ್ಳಿ, ಬೇಡವಾದರೆ ಬಿಡಿ. ನಾನು ಏನೇ ಮಾತನಾಡಿದರೂ ಎಲ್ಲವನ್ನೂ ತಪ್ಪಾಗಿಯೇ ಅರ್ಥೈಸುತ್ತಾರೆ. ಹೀಗಾಗಿ ಮಾಧ್ಯಮಗಳ ಮುಂದೆ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದರು.
ನನ್ನ ಬಗ್ಗೆ ಮಾಡುವ ಟೀಕೆಗಳಿಗೆ ನಾನು ಹೆದರಿ ಓಡಿ ಹೋಗುವುದಿಲ್ಲ. ಒಂದು ವರ್ಗ ನಾನು ಮಾಡುವ ಎಲ್ಲ ಕೆಲಸವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಿದೆ. ನಾನು ಮಾಡುವ ಎಲ್ಲ ಕೆಲಸದಲ್ಲಿಯೂ ತಪ್ಪು ಹುಡುಕುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾರಿಗೂ ಟೋಪಿ ಹಾಕಿ ಬಂದವನಲ್ಲ. ನಾನು ಇಲ್ಲೇನು ಶಾಶ್ವತವಾಗಿ ಇರುವುದಿಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಮಿತ್ರರು ಬೆಂಬಲಿಸುತ್ತಾರೋ ಅಲ್ಲಿಯವರೆಗೂ ಅಧಿಕಾರದಲ್ಲಿರುತ್ತೇನೆ. ನಾನು 38 ಶಾಸಕರನ್ನಷ್ಟೇ ಹೊಂದಿರಬಹುದು. ಆದರೆ, ಪರಮೇಶ್ವರ್ ನಾಯಕತ್ವದಲ್ಲಿ ಕಾಂಗ್ರೆಸ್ನ 78 ಶಾಸಕರು ಬೆಂಬಲಿಸಿದ್ದರಿಂದಲೇ ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿದ್ದಾರೆ. ಸ್ವಲ್ಪ ಸಮಯ ಕೊಡಿ.ನಮ್ಮ ಸರ್ಕಾರದ ಬದಟಛಿತೆಯನ್ನು ಅರ್ಥ ಮಾಡಿಕೊಳ್ಳಿ ಎಂದರು.
ನಾನು ಬದುಕಿರುವುದು ರೈತರಿಗಾಗಿ, ಸಾಯುವುದೂ ರೈತರಿಗಾಗಿ,ಕಬ್ಬು ಬೆಳೆಗಾರರ ಸಮಸ್ಯೆ ಈಗ ಶುರುವಾಗಿಲ್ಲ. ಆದರೂ ಅವರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರೈತರುಮತ್ತು ಕಾರ್ಖಾನೆ ಮಾಲೀಕರು ಮೌಖೀಕ ಒಡಂಬಡಿಕೆ ಮಾಡಿಕೊಂಡಿದ್ದು, ಕಾರ್ಖಾನೆ ಮಾಲೀಕರು ಕಬ್ಬಿನ ದರ ಪಾವತಿ ಮಾಡಿಲ್ಲ.
ಕಾರ್ಖಾನೆ ಮಾಲೀಕರು ಮಾತು ತಪ್ಪಿದರೆ, ಅದಕ್ಕೆ ನಾನು ಹೊಣೆಗಾರನೇ? ಈಗ ಬಿಜೆಪಿ ನಾಯಕರು ಎದ್ದು ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಒಂದು ಲಕ್ಷ ರೈತರೊಂದಿಗೆ ಮುತ್ತಿಗೆ ಹಾಕುತ್ತಾರಂತೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ದರ ಕುಸಿತವಾಗಿ ರೈತರು ಪಾದಯಾತ್ರೆ ಮಾಡುತ್ತಿದ್ದಾರೆ.
ಅಲ್ಲಿ ಬಿಜೆಪಿ ಸರ್ಕಾರವಿದೆ. ಅದು ನಿಮಗೆ ಕಾಣಿಸುವುದಿಲ್ಲವೇ? ಈ ಅಸೂಯೆ, ಹೊಟ್ಟೆಯುರಿ ಏಕೆ ಎಂದು ಪ್ರಶ್ನಿಸಿದರು.ರೈತರ ಸಾಲ ಮನ್ನಾ ಬುರುಡೆ ಎಂದು ಯಡಿಯೂರಪ್ಪ ಹೇಳುತ್ತಾರೆ.
45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡದಿದ್ದರೆ, ನಾನು ರೈತರ ಮನೆಗೆ ಹೋಗುವುದು ಸಾಧ್ಯವೇ? ಈರುಳ್ಳಿ ರೈತರು ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿದ್ದಾರಂತೆ, ರೈತರಿಗೆ ಈರುಳ್ಳಿ ಬೆಲೆ ಕೊಡಿಸಲು ನರೇಂದ್ರ ಮೋದಿ ಬರುತ್ತಾರಾ? ಮೋದಿ ಜನ್ಧನ್ ಯೋಜನೆ ಜಾರಿಗೆ ತಂದಿದ್ದರು, ಈ ದೇಶದ ಜನತೆಗೆ ಎಷ್ಟು ಹಣ ಹಾಕಿದ್ದಾರೆ. ಯಡಿಯೂರಪ್ಪನವರೇ ನಾನು ನಿಮ್ಮಿಂದ ನಡವಳಿಕೆ ಕಲಿಯಬೇಕಿಲ್ಲ. ಒಬ್ಬ ಹರಕಲು ಬಟ್ಟೆ ಹಾಕಿಕೊಂಡು ಬಂದವರ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತೇನೆ. ನಾನು ಯಾರನ್ನೂ ಏಕ ವಚನದಲ್ಲಿ ಸಂಭೋಧಿಸುವುದಿಲ್ಲ ಎಂದು ಹೇಳಿದರು.
ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಅಷ್ಟರಲ್ಲಿಯೇ ಬಡವರ ಹಾಗೂ ರೈತರ ಪರ ಹತ್ತಾರು ಯೋಜನೆಗಳನ್ನು ಘೋಷಿಸಿದೆ. ಬೀದಿ ವ್ಯಾಪಾರಿಗಳಿಗೆ ಮೀಟರ್ ಬಡ್ಡಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿದ್ದು, ಅದಕ್ಕೆ ಪರಿಹಾರ ಒದಗಿಸಲು ಮೂವತ್ತು ಸಹಕಾರ ಬ್ಯಾಂಕ್ಗಳ ಮೂಲಕ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರತಿ ಬ್ಯಾಂಕಿನಲ್ಲಿ ಬಡವರ ಬಂಧು ಯೋಜನೆ ಜಾರಿಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಮುಂದಿನ ತಿಂಗಳು ಉದ್ಯೋಗ ಸೃಷ್ಠಿಗೆ ನೆರವಾಗುವ ಕಾಯಕ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ಮಾತನಾಡಿ, ಒಂದು ತಿಂಗಳ ಹಿಂದೆ ಸಿಟಿ ಮಾರುಕಟ್ಟೆಗೆ ಭೇಟಿ ನೀಡಿದಾಗ ಬೀದಿ ಬದಿ ವ್ಯಾಪಾರಿಗಳ ಕಥೆ ಕೇಳಿ ನೋವಾಯಿತು. ಪ್ರತಿ ದಿನ 10 ರಿಂದ 20ರಷ್ಟು ಬಡ್ಡಿ ಕಟ್ಟಬೇಕು. ಇಲ್ಲದಿದ್ದರೆ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಾರೆ. ಅಂತವರ ತೊಂದರೆ ಪರಿಹರಿಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…