ಅದೃಷ್ಟ ಇದ್ದರೆ ಮಂತ್ರಿ ಆಗುತ್ತೇನೆ:ರಾಮಲಿಂಗಾರೆಡ್ಡಿ
Team Udayavani, Jun 5, 2018, 6:15 AM IST
ಬೆಂಗಳೂರು: ನಮ್ಮ ಅದೃಷ್ಟ ಚೆನ್ನಾಗಿದ್ದರೆ, ಮಂತ್ರಿಯಾಗುತ್ತೇವೆ. ಹಿಂದೆಯೂ ನಮ್ಮ ಅನುಭವ ಮತ್ತು ಪಕ್ಷದ ಸೇವೆ ಗಮನಿಸಿ ಹುದ್ದೆಗಳನ್ನು ನೀಡಿದ್ದಾರೆ ಎಂದು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಹಿರಿಯರಿಗೆ ಸಚಿವ ಸ್ಥಾನ ವಿರೋಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ಇದುವರೆಗೂ ಅಧಿಕಾರವೇ ನನ್ನ ಹುಡುಕಿಕೊಂಡು ಬಂದಿದೆ. ಸಂಪುಟದಲ್ಲಿ ಹಿರಿಯರು ಇರಬೇಕೋ ಕಿರಿಯರು ಇರಬೇಕೋ ಎನ್ನುವುದನ್ನು ಹೈ ಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿಗೆ ಕಾಂಗ್ರೆಸ್ ಐದು ವರ್ಷ ಬೆಂಬಲ ನೀಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರ ಸರ್ಕಾರ ನೀಡಲಿದೆ ಎಂದು ಹೇಳಿದರು.