ನಾನು ಮಾಜಿ ಎಂಪಿ ಎಂದ ಜಯಪ್ರದಾ!
Team Udayavani, Nov 27, 2018, 11:39 AM IST
ಬೆಂಗಳೂರು: ನಟ ಅಂಬರೀಶ್ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಮಾಜಿ ಸದಸ್ಯೆ ಹಾಗೂ ಹಿರಿಯ ನಟಿ ಜಯಪ್ರದಾ ಅವರು ಹೊರಡುವ ವೇಳೆ ಸರಿಯಾದ ಭದ್ರತೆ ಸಿಗಲಿಲ್ಲ ಎಂದು ಆರೋಪಿಸಿ ಕೂಗಾಡಿದ ಘಟನೆ ನಡೆಯಿತು.
ಅಂತ್ಯಸಂಸ್ಕಾರ ಪೂರ್ಣಗೊಂಡ ಬಳಿಕ ಜಯಪ್ರದಾ ಅವರು ಕಂಠೀರವ ಸ್ಟುಡಿಯೋನ ಮುಖ್ಯದ್ವಾರದ ಕಡೆಗೆ ಬಂದು ಹೊರ ಹೋಗಲು ಮುಂದಾದರು. ಅವರ ಹಿಂದೆಯೇ ನೂರಾರು ಜನ ನಡೆದು ಬಂದರು. ಆಗ ಜಯಪ್ರದಾ ಅವರು ಹೊರ ಹೋಗಲು ಅವಕಾಶ ನೀಡುವಂತೆ ಕೋರಿದಾಗ ಡಿಸಿಪಿ ಅಣ್ಣಾಮಲೈ, ಕೆಲ ಕ್ಷಣ ನಿಲ್ಲುವಂತೆ ಮನವಿ ಮಾಡಿದರು.
ಆಗ ಸಿಟ್ಟಾದ ಜಯಪ್ರದಾ, ನಾನು ಮಾಜಿ ಎಂಪಿ. ನನಗೆ ಈ ರೀತಿ ಹೇಳುತ್ತೀರಾ. ನನಗೆ ಸರಿಯಾದ ಭದ್ರತೆ ನೀಡುತ್ತಿಲ್ಲ’ ಎಂದು ಅಲ್ಲಿದ್ದ ರಾಜಕೀಯ ಮುಖಂಡರ ಬಳಿ ಹೇಳತೊಡಗಿದರು. ಆಗ ಅಣ್ಣಾಮಲೈ, “ನಾನು ಅಣ್ಣಾಮಲೈ. ನಿಮಗೆ ಈಗ ಏನಾಗಬೇಕಿದೆ ಹೇಳಿ’ ಎಂದು ಕೇಳಿದರು.
ಮತ್ತೆ ಮಾತು ಮುಂದುವರಿಸಿದ ಜಯಪ್ರದಾ, ಅವರು ಡಿಸಿಪಿ ಇರಬಹುದು. ನಾನು ಮಾಜಿ ಎಂಪಿ. ಅದಕ್ಕಿಂತ ಮಿಗಿಲಾಗಿ ನಾನೊಬ್ಬ ಮಹಿಳೆ. ನನಗೆ ಹೊರಗೆ ಹೋಗಲು ಅವಕಾಶ ಹಾಗೂ ಭದ್ರತೆ ನೀಡಬೇಕು ತಾನೇ’ ಎಂದರು. ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳು ಜಯಪ್ರದಾ ಅವರನ್ನು ಸಮಾಧಾನಪಡಿಸಿದರು.