ಠಾಣೆಗಳ ಅನೈರ್ಮಲ್ಯ: ಆಯುಕ್ತರು ಗರಂ
Team Udayavani, Sep 11, 2019, 3:05 AM IST
ಬೆಂಗಳೂರು: ಬನಶಂಕರಿ ಪೊಲೀಸ್ ಠಾಣೆಗೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್, ಠಾಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಠಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ, ನಗರದ ಎಲ್ಲ ಠಾಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಇತ್ತೀಚೆಗೆ ಬನಶಂಕರಿಯಲ್ಲಿ ನಡೆದ ಪರಿಚಯಸ್ಥರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಯುಕ್ತರಾದ ಭಾಸ್ಕರ್ ರಾವ್, ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅರ್ಧ ಕಾಮಗಾರಿ ಆಗಿರುವ ಠಾಣೆಯ ಶೌಚಾಲಯ ಹಾಗೂ ಶುಚಿತ್ವ ಇಲ್ಲದಿರವುದು ಕಂಡು ಗರಂ ಆದರು. ಅಷ್ಟೇ ಅಲ್ಲದೆ, ಪೊಲೀಸ್ ಠಾಣೆ ಮನೆಯಿದ್ದಂತೆ, ಸ್ವಚ್ಛವಾಗಿಲ್ಲ ಎಂದರೆ ಏನರ್ಥ? ಮುಂದಿನ 15 ದಿನಗಳಲ್ಲಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ.
ಸ್ವಚ್ಛತೆ ಕಾಪಾಡಿ ಎಂದು ಸೂಚನೆ ನೀಡಿದ್ದಾರೆ. ಆಯುಕ್ತರ ದಿಢೀರ್ ಭೇಟಿ ಕಂಡು ಠಾಣೆಯ ಸಿಬ್ಬಂದಿ ದಂಗಾಗಿದ್ದಾರೆ. ಕೆಲಹೊತ್ತು ಠಾಣೆಯಲ್ಲಿ ಕುಳಿತ ಆಯುಕ್ತರು ಠಾಣಾ ವ್ಯಾಪ್ತಿಯಲ್ಲಿನ ಅಪರಾಧ ಪ್ರಕರಣಗಳ ಅಂಕಿ- ಅಂಶ, ಬೀಟ್ ವ್ಯವಸ್ಥೆಯ ಕಾರ್ಯನಿರ್ವಹಣೆ. ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಸೇರಿದಂತೆ ಮತ್ತಿತರ ಮಾಹಿತಿ ಪಡೆದುಕೊಂಡಿದ್ದಾರೆ.
ಜತೆಗೆ, ಇತ್ತೀಚೆಗೆ ನಡೆಸಿದ್ದ ಎಟಿಎಂ ದರೋಡೆ ಕೇಸ್ನ ಬಗ್ಗೆ ಮಾಹಿತಿ ಪಡೆದು, ದುಷ್ಕರ್ಮಿಗಳ, ದರೋಡೆಕೋರರ ಕಡಿವಾಣಕ್ಕೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ. ಸರಗಳ್ಳರ ಬಗ್ಗೆ ನಿಗಾವಹಿಸಿ ಎಂದು ಸೂಚನೆ ನೀಡಿದರು. ಈ ಕುರಿತು ಆಯುಕ್ತ ಭಾಸ್ಕರ್ರಾವ್ ಪತ್ರಿಕಾಗೋಷ್ಟಿಯಲ್ಲಿ ಮಂಗಳವಾರ ತಿಳಿಸಿದರು.