ಬುದ್ಧಿವಾದ ಹೇಳಿದ ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಮಗ
Team Udayavani, Sep 26, 2022, 12:11 PM IST
ಬೆಂಗಳೂರು: ಬುದ್ಧಿವಾದ ಹೇಳಿದ ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಮಗನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಾಜಿಸೊನ್ನನಹಳ್ಳಿಯ ನಿವಾಸಿ ಚನ್ನಬಸವರಾಜು (56) ಮೃತ ತಂದೆ. ಅವರ ಪುತ್ರ ರಾಕೇಶ್ ಕುಮಾರ್ (23) ಬಂಧಿತ. ಚನ್ನಬಸವ ರಾಜು ಹಿರಿಯ ಮಗ ವಕೀಲನಾಗಿದ್ದು, ಮತೊಬ್ಬ ಪುತ್ರ ರಾಕೇಶ್ 10ನೇ ತರಗತಿ ವ್ಯಾಸಂಗ ಮಾಡಿ ಕೃಷಿಕನಾಗಿದ್ದ.
ತಂದೆ-ಮಗ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಒಳ್ಳೆಯ ವ್ಯಾಸಂಗ ಮಾಡಿದ್ದರೆ ನಿನಗೆ ಉತ್ತಮ ಹುದ್ದೆಯಲ್ಲಿ ಕೆಲಸ ಮಾಡಬಹುದಿತ್ತು ಎಂದು ತಂದೆ ಚನ್ನಬಸವರಾಜು ಪುತ್ರನಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ರಾಕೇಶ್ ಪಕ್ಕದಲ್ಲಿದ್ದ ಸಲಾಖೆಯಿಂದ ಚನ್ನಬಸವರಾಜು ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದು, ಚನ್ನಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಕಾಡುಗೋಡಿ ಪೊಲೀಸರು ರಾಕೇಶ್ನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.