ಹೊರೆಯಾಯಿತೆ “ಇಂದಿರಾ ಕ್ಯಾಂಟೀನ್’!
Team Udayavani, Dec 13, 2018, 6:00 AM IST
ಬೆಂಗಳೂರು: ರಾಜ್ಯ ಸರ್ಕಾರದಿಂದ ಹಣಕಾಸು ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್’ ಯೋಜನೆ ಮಹಾನಗರ ಪಾಲಿಕೆಗಳಿಗೆ ಹೊರೆಯಾಗಿ ಪರಿಣಮಿಸಿದೆ.
ರಾಜ್ಯದ ಜನರಿಗೆ ರಿಯಾಯಿತಿ ದರದಲ್ಲಿ ಅನ್ನಾಹಾರ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ “ಇಂದಿರಾ ಕ್ಯಾಂಟೀನ್’ ಯೋಜನೆ ಜಾರಿಗೊಳಿಸಿತ್ತು. ಜನರಿಂದಲೂ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಯೋಜನೆಗೆ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗಳು ತಮ್ಮ ಸ್ವಂತ ಹಣದಲ್ಲಿ ಯೋಜನೆ ಮುಂದುವರಿಸುವಂತಾಗಿದೆ.
ಮೊದಲಿಗೆ ಬೆಂಗಳೂರಿನಲ್ಲಿ ಯೋಜನೆ ಜಾರಿಗೊಳಿಸಿದ್ದ ಸರ್ಕಾರ, ಕ್ಯಾಂಟೀನ್ಗಳ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಆರಂಭದ ಬಂಡವಾಳವಾಗಿ 100 ಕೋಟಿ ರೂ.ಬಿಡುಗಡೆ ಮಾಡಿತ್ತು. ಅದೇ ರೀತಿ ರಾಜ್ಯದ 247 ಕಡೆಗಳಲ್ಲಿ ಕ್ಯಾಂಟೀನ್ ನಿರ್ಮಿಸಲು ಸಹ ಆರಂಭಿಕ ಬಂಡವಾಳವಾಗಿ 211 ಕೋಟಿ ರೂ.ಬಿಡುಗಡೆ ಮಾಡಿದೆ. ಜತೆಗೆ, ಇಂದಿರಾ ಕ್ಯಾಂಟೀನ್ಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಪಾಲಿಕೆಗಳ ಸ್ವಂತ ಆದಾಯದಿಂದ ಬಿಲ್ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.
ಮೊದಲಿಗೆ ಸರ್ಕಾರದ ಆದೇಶ ಪಾಲಿಸಿದ ಪಾಲಿಕೆಗಳಿಗೆ ಇದೀಗ ಆರ್ಥಿಕ ಸಂಕಷ್ಟ ಎದುರಾಗುತ್ತಿದ್ದು, ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ, ಸರ್ಕಾರ ಮಾತ್ರ ತಮಗೂ,ಇಂದಿರಾ ಕ್ಯಾಂಟೀನ್ ಯೋಜನೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ಜೊತೆಗೆ, ಅನುದಾನ ಬಿಡುಗಡೆ ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸ್ವಂತ ಅನುದಾನದಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆಗಳಿದ್ದು, ಈಗಾಗಲೇ ಜಾರಿಯಲ್ಲಿರುವ ಕಾಮಗಾರಿಗಳನ್ನು ಪೂರೈಸಲೂ ಅವು ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ವಂತ ಆದಾಯದ ಮೂಲದಿಂದ ಇಂದಿರಾ ಕ್ಯಾಂಟೀನ್ನ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದು ಹೊರೆಯಾಗುತ್ತಿದೆ ಎಂಬುದು ಮಹಾನಗರ ಪಾಲಿಕೆಗಳ ವಾದ.
ಸ್ಥಳೀಯ ಸಂಸ್ಥೆಗಳಿಗೆ ವಿನಾಯ್ತಿ: ಆಹಾರ ಪೂರೈಕೆ ಗುತ್ತಿಗೆ ದಾರಿಗೆ ಬಿಲ್ ಪಾವತಿಸುವ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ವಿನಾಯ್ತಿ ನೀಡಲಾಗಿದೆ. ಅದರಂತೆ ವ್ಯತ್ಯಾಸದ ಮೊತ್ತದಲ್ಲಿ ಸರ್ಕಾರ ಶೇ.70ರಷ್ಟು, ಕಾರ್ಮಿಕರ ಇಲಾಖೆಯಿಂದ ಶೇ.30ರಷ್ಟು ಹಣವನ್ನು ಪಾವತಿಸಲಾಗುತ್ತದೆ ಎಂದು ಉಲ್ಲೇಖೀಸಲಾಗಿದೆ.
ಬಿಬಿಎಂಪಿಗೆ 146.75 ಕೋಟಿ ರೂ. ಬಾಕಿ: 2016ರ
ಆಗಸ್ಟ್ನಿಂದ ಈವರೆಗೆ ಬಿಬಿಎಂಪಿಗೆ ಒಟ್ಟು 245 ಕೋಟಿ ರೂ.ಅನುದಾನ ಸರ್ಕಾರದಿಂದ ಬರಬೇಕಿದೆ. ಆರಂಭದ ಬಂಡವಾಳವಾಗಿ ಮೊದಲಿಗೆ 100 ಕೋಟಿ ರೂ.ಬಿಡುಗಡೆ ಮಾಡಿತ್ತು. ಇನ್ನು ಇತ್ತೀಚೆಗೆ ವಿಪಕ್ಷಗಳು ಅನುದಾನ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿದ ಹಿನ್ನೆಲೆಯಲ್ಲಿ 36.25 ಕೋಟಿ ರೂ.ನೀಡಿದ್ದು, ಇನ್ನೂ 146.75 ಕೋಟಿ ರೂ.ಬರಬೇಕಿದೆ.
ಸರ್ಕಾರದ ಆದೇಶದಲ್ಲೇನಿದೆ?
ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ಮಾಡಲು ಗುತ್ತಿಗೆದಾರಿಗೆ 49 ರಿಂದ 57 ರೂ.ವರೆಗಿನ ದರಕ್ಕೆ ಅನುಮೋದನೆ ನೀಡಲಾಗಿದೆ. ಅದರಂತೆ ಒಬ್ಬ ವ್ಯಕ್ತಿಯಿಂದ ದಿನಕ್ಕೆ ಒಂದು ತಿಂಡಿ ಹಾಗೂ ಎರಡು ಊಟಕ್ಕೆ 25 ರೂ.ಸಂಗ್ರಹವಾಗುತ್ತದೆ. ಉಳಿದ ವ್ಯತ್ಯಾಸದ ಮೊತ್ತದ ಪೈಕಿ ಶೇ.70ರಷ್ಟು ಹಣವನ್ನು ಮಹಾನಗರ ಪಾಲಿಕೆಗಳು ತಮ್ಮ ಸ್ವಂತ ಅನುದಾನ/ಎಸ್ಎಫ್ಸಿ ಮುಕ್ತನಿಧಿಯಿಂದ ಪಾವತಿಸಬೇಕು. ಉಳಿದ ಶೇ.30ರಷ್ಟು ಹಣವನ್ನು ಕಾರ್ಮಿಕರ ಇಲಾಖೆಯಿಂದ ಪಾವತಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಚಾರ ಸರ್ಕಾರಕ್ಕೆ, ಹೊರೆ ಪಾಲಿಕೆಗೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಯೋಜನೆಗೆ ಪಾಲಿಕೆಯ ಬೊಕ್ಕಸದಿಂದ ಅನುದಾನ ನೀಡುತ್ತಿರುವುದು ಪಾಲಿಕೆಗೆ ಹೊರೆಯಾಗಿದ್ದು, ಇಂದಿರಾ ಕ್ಯಾಂಟೀನ್ ಎಂಬ ಬಿಳಿ ಆನೆ ಸಾಕುವುದು ಕಷ್ಟವಾಗುತ್ತಿದೆ. ಇಂದಿರಾ ಕ್ಯಾಂಟೀನ್ ಜಯಪ್ರಿಯತೆ ಸರ್ಕಾರಕ್ಕೆ, ಯೋಜನೆಯ ಹೊರೆ ಬಿಬಿಎಂಪಿಗೆ ಎನ್ನುವಂತಾಗಿದ್ದು, ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.
– ಪದ್ಮಾನಾಭ ರೆಡ್ಡಿ, ಬಿಬಿಎಂಪಿ ವಿಪಕ್ಷ ನಾಯಕ
– ವೆಂ. ಸುನೀಲ್ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?