ಸ್ಫೋಟಗೊಂಡ ಪೊಲೀಸರ ಒಳಬೇಗುದಿ
ಎಡಿಜಿಪಿ ರವೀಂದ್ರನಾಥ್ ರಾಜೀನಾಮೆ ಪ್ರಹಸನ | ನಿರ್ಧಾರ ಬದಲಾಗದು ಎಂದ ಅಧಿಕಾರಿ
Team Udayavani, Oct 30, 2020, 12:11 PM IST
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಗಳ ಒಳಬೇಗುದಿ ಮತ್ತೂಮ್ಮೆ ಸ್ಫೋಟಗೊಂಡಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವರ್ತನೆಗೆ ಬೇಸತ್ತು ಅರಣ್ಯ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ ಪಿ.ರವೀಂದ್ರನಾಥ್ ತಮ್ಮ ಸ್ಥಾನಕ್ಕೆ ಬುಧವಾರ ತಡರಾತ್ರಿ ರಾಜೀನಾಮೆ ನೀಡಿದ್ದು, ವಾಪಸ್ ಪಡೆಯಲು ಮನವೊಲಿಸಿದರೂ ತಮ್ಮ ನಿರ್ಧಾರ ಅಚಲ ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ನಾಲ್ಕೈದು ವರ್ಷಗಳಿಂದ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಜತೆಗೆ ತನ್ನ ಗಿಂತ ಕಿರಿಯ ಐಪಿಎಸ್ ಅಧಿಕಾರಿಗೆ ಪೊಲೀಸ್ ಮಹಾ ನಿರ್ದೇಶಕರಾಗಿ ಬಡ್ತಿ ನೀಡಿದ ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಡಾ ಪಿ.ರವೀಂದ್ರನಾಥ್ ರಾಜೀನಾಮೆ ಸಲ್ಲಿಸಿದ್ದಾರೆ.
ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ಗೆ ರಾತ್ರಿ 10.30ರ ಸುಮಾರಿಗೆ ತೆರಳಿದ ಅವರು, ಅಲ್ಲಿನ ಹಿರಿಯ ಅಧಿಕಾರಿಗೆ ರಾಜೀನಾಮೆ ಪತ್ರ ನೀಡಿದ್ದು, ಈ ಪತ್ರವನ್ನು ಪೊಲೀಸ್ ಮಹಾ ನಿರ್ದೇಶಕರಿಗೆ ತಲುಪಿಸುವಂತೆ ಸೂಚಿಸಿದ್ದಾರೆ.
ಎಸಿಬಿ ಹೆಚ್ಚುವರಿ ಮಹಾನಿರ್ದೇಶಕ ಟಿ.ಸುನೀಲ್ ಕುಮಾರ್ ಗುರುವಾರ ನಿವೃತ್ತಿ ಹೊಂದಿದ್ದಾರೆ. ಅದಕ್ಕೂ ಮೊದಲು ಸುನೀಲ್ ಕುಮಾರ್ ಮತ್ತು ರಾಜ್ಯ ಕಾನೂನು ಸುವ್ಯವಸ್ಥೆ ಎಡಿ ಜಿಪಿ ಅಮರ್ ಕುಮಾರ್ ಪಾಂಡೆ ಅವರಿಗೆ ಪೊಲೀಸ್ ಮಹಾನಿರ್ದೇಶಕರಾಗಿ ಮುಂಬಡ್ತಿ ನೀಡಲಾಗಿದೆ.
ಈ ಪೈಕಿ ಸುನಿಲ್ ಕುಮಾರ್ ಮತ್ತು ಪಿ.ರವೀಂದ್ರನಾಥ್ ಒಂದೇ ಬ್ಯಾಚ್ನ ಅಧಿಕಾರಿಗಳಾಗಿದ್ದಾರೆ. ರ್ಯಾಂಕಿಂಗ್ನಲ್ಲಿ ರವೀಂದ್ರನಾಥ್ ಮೊದಲಿಗರು. ಆದರೂ ಅವರಿಗೆ ಬಡ್ತಿ ನೀಡದೇ ಏಕಾಏಕಿ ಸುನೀಲ್ ಕುಮಾರ್ಗೆ ಬಡ್ತಿ ನೀಡಿದ್ದರಿಂದ ಅವರಿಗಿಂತ ಹಿರಿಯರಾದ ರವೀಂದ್ರನಾಥ್ ತಮ್ಮ ಅಸಮಾಧಾನವನ್ನು ರಾಜೀನಾಮೆ ಮೂಲಕ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣಗಳ ಹಿಂದೆ ಕೆ.ಜೆ.ಜಾರ್ಜ್: ಈ ಕುರಿತು ಮಾತನಾಡಿರುವ ರವೀಂದ್ರನಾಥ್, “2014 ರಿಂದ ಸತತ ವಾಗಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ನನ್ನ ಹಿಂದೆ ಬಿದ್ದಿದ್ದಾರೆ. ಸುಳ್ಳು ಪ್ರಕರಣ ಗಳನ್ನು ದಾಖಲಿಸಿ ನನ್ನ ಮರ್ಯಾದೆ ತೆಗೆಯುತ್ತಿದ್ದಾರೆ. ಆದರೂ ಹೈಕೋರ್ಟ್ ಪ್ರಕರಣಗಳನ್ನು ವಜಾಗೊಳಿ ಸಿದೆ. ಈ ಎಲ್ಲ ಪ್ರಕರಣಗಳ ಹಿಂದೆ ಮಾಜಿ ಗೃಹ ಸಚಿವ ಕೆ. ಜೆ.ಜಾರ್ಜ್ ಇದ್ದಾರೆ. ಆಗ ಎಂ.ಎನ್.ರೆಡ್ಡಿ ಅವರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡಬೇ ಕೆಂದು
ನಿರ್ಧರಿಸಿದ್ದರು. ರಾಘವೇಂದ್ರ ಔರಾದ್ಕರ್ ಅವರನ್ನು ಬದಲಿಸಬೇಕಿತ್ತು. ಈ ವಿಚಾರದಲ್ಲಿ ನನ್ನನ್ನು ಸಿಲುಕಿಸಿ ನನ್ನ ಮೇಲೆ ಜಾಮೀನು ರಹಿತ ವಾರೆಂಟ್ ಕಳುಹಿಸಿದ್ದರು. ಆಗಲೂ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೆ. ಆದರೆ, ರಾಜೀನಾಮೆ ಹಿಂಪಡೆಯದಿದ್ದರೆ ಇಲಾಖಾ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಕಿರಿಯರಿಗೆ ಮುಂಬಡ್ತಿ: ಇತ್ತೀಚೆಗೆ ಟಿ. ಸುನಿಲ್ ಕುಮಾರ್ಗೆ ಮುಂಬಡ್ತಿ ನೀಡಲಾಗಿದೆ. ಯಾವ ಕಾರಣಕ್ಕೆ ತನ್ನ ಜೂನಿಯರ್ಗೆ ಪದೋನ್ನತಿ ನೀಡಿದ್ದಾರೆ. ನನ್ನ ವಿರುದ್ಧ ಇಲಾಖಾ ತನಿಖೆಯಿದೆ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಸಿಎಟಿ ಇಲಾಖಾ ತನಿಖೆಯನ್ನು ರದ್ದುಪಡಿಸಿತ್ತು. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಡೆಯಾಜ್ಞೆ ಕೋರಿದರು. ಅನಂತರ ಹೈಕೋರ್ಟ್ ಕೂಡ ಪ್ರಕರಣದ ಕೊನೆಯ ತೀರ್ಪು ಬರುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳ ಬಾರದು ಎಂದು ಹೇಳಿತ್ತು. ಹೀಗಾಗಿ ನಾನು ಪದೋನ್ನತಿ ಪಡೆಯಲು ಅರ್ಹನಾಗಿದ್ದೇನೆ. ಆದರೂ ಸುನಿಲ್ ಕುಮಾರ್ಗೆ ಸಹಾಯ ಮಾಡಲು ಡಿಜಿಪಿ ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬುಧವಾರ ರಾತ್ರಿ ರಾಜೀನಾಮೆ ಪತ್ರ ನೀಡಿ ಡಿಜಿಪಿಗೆ ರವಾನಿಸುವಂತೆ ಸೂಚಿಸಿದ್ದೇನೆ. ಅವರು ಡಿಜಿಪಿಗೆ ಕಳುಹಿಸಿದ್ದಾರೆ. ಆದರೆ, ಡಿಜಿಪಿ ಪ್ರವೀಣ್ ಸೂದ್ ಪತ್ರ ತಲುಪಿಲ್ಲ ಎಂದು ಹೇಳುತ್ತಿದ್ದಾರೆ. ಗುರುವಾರ ಮತ್ತೂಮ್ಮೆ ಡಿಜಿಪಿ ಕಚೇರಿಗೆ ತೆರಳಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕಳುಹಿ ಸುವಂತೆ ಕೋರಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಕಾನೂನು ಹೋರಾ ಟಕ್ಕೆ ಸಿದ್ಧನಾಗಿದ್ದೇನೆ. ಇನ್ನು ಮೂರು ವರ್ಷ ಶಾಂತಿ ಯುತ ಜೀವನ ನಡೆಸಬೇಕೆಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ರವೀಂದ್ರನಾಥ್ ಹೇಳಿದರು.
ಐದು ಬಾರಿ ರಾಜೀನಾಮೆ: ಡಾ ಪಿ.ರವೀಂದ್ರನಾಥ್ ಅವರು ಇದುವರೆಗೂ ಐದು ಬಾರಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾವರಿಷ್ಠಾಧಿಕಾರಿ ಯಾಗಿ ವೃತ್ತಿ ಆರಂಭಿಸಿದ ದಿನದಿಂದ ಅವರ ಮೇಲೆ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಕಾನೂನು ಹೋರಾಟ ನಡೆಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಸೌಲಭ್ಯಕ್ಕಾಗಿ ತೀರ್ಮಾನ : ನಿವೃತ್ತಿಗೂ ಎರಡು ದಿನ ಮೊದಲು ಟಿ.ಸುನಿಲ್ ಕುಮಾರ್ಗೆ ಪದೋನ್ನತಿ ನೀಡಲು ಅವರ ನಿವೃತ್ತಿ ಜೀವನದ ಸೌಲಭ್ಯಗಳಿಗಾಗಿ ಈ ತೀರ್ಮಾನವನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ತೆಗೆದುಕೊಂಡಿದೆ. ಅದನ್ನು ಹೊರತು ಪಡಿಸಿ ಡಾ.ಪಿ.ರವೀಂದ್ರನಾಥ್ ಅವರಿಗೆ ಅನ್ಯಾಯ ಮಾಡವ ಉದ್ದೇಶವಿಲ್ಲ. ಅವರಿಗೂ ಮುಂದೆ ಪದೋನ್ನತಿ ಸಿಗುತ್ತದೆ. ಅಲ್ಲದೆ, ಪೊಲೀಸ್ ಇಲಾಖೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಅವಕಾಶವಿದ್ದರೆ ನಿವೃತ್ತಿಗೂ ಮೊದಲು ಮುಂಬಡ್ತಿ ನೀಡುವುದು ವಾಡಿಕೆ. ಅದನ್ನೇ ಸುನಿಲ್ ಕುಮಾರ್ ವಿಚಾರದಲ್ಲಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಜಿಪಿ ಮನವೊಲಿಕೆಗೂ ಬಗ್ಗದ ರವೀಂದ್ರನಾಥ್ : ರಾಜೀನಾಮೆ ಪ್ರಹಸನದಿಂದ ಪೊಲೀಸ್ ಇಲಾಖೆಗೆ ತೀವ್ರ ಮುಜುಗರವಾಗಿದ್ದು, ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನೇರವಾಗಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ರವೀಂದ್ರನಾಥ್ ಬಳಿ ಚರ್ಚಿಸಿದ್ದಾರೆ. ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ನಿಮಗೂ ಬಡ್ತಿ ದೊರೆಯುತ್ತದೆ. ಯಾರು ತಪ್ಪಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.