ಚಿತ್ರರಂಗದ ದಿಗ್ಗಜರಿಗೆ ಐಟಿ ದಾಳಿಯ ಆಘಾತ
Team Udayavani, Jan 4, 2019, 12:30 AM IST
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಖ್ಯಾತ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಗುರುವಾರ ಮುಂಜಾನೆ 6 ಗಂಟೆ ಸುಮಾರಿಗೆ 200ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ನಟರಾದ ಶಿವರಾಜ್ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್ ಹಾಗೂ ನಟಿ ರಾಧಿಕಾ ಪಂಡಿತ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್,ವಿಜಯ್ ಕಿರಗಂದೂರು, ಸಿ.ಆರ್.ಮನೋಹರ್,ಜಯಣ್ಣ ಅವರಿಗೆ ಸೇರಿದ 28ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮನೆ ಹಾಗೂ ಕಚೇರಿಗಳಲ್ಲಿದ್ದ ಆಸ್ತಿ- ಪಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.
ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಸಮೀಪ ಇರುವ ನಟ ಶಿವರಾಜ್ಕುಮಾರ್ ಮನೆ, ಸದಾಶಿವನಗರದಲ್ಲಿರುವ ನಟ ಪುನೀತ್ ರಾಜ್ಕುಮಾರ್ ಮನೆ,ಜೆ.ಪಿ.ನಗರದಲ್ಲಿರುವ ಸುದೀಪ್ ಮನೆ, ಕತ್ರಿಗುಪ್ಪೆಯಲ್ಲಿರುವ ಯಶ್ ಮನೆ ಹಾಗೂ ಮಲ್ಲೇಶ್ವರದಲ್ಲಿರುವ ರಾಧಿಕಾ ಪಂಡಿತ್ ಮನೆ, ಮಹಾಲಕ್ಷ್ಮೀ ಲೇಔಟ್ನಲ್ಲಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯಲ್ಲಿರುವ ವಿಜಯ್ ಕಿರಗಂದೂರು ಮನೆ ಹಾಗೂ ಜಯಣ್ಣ ಮನೆ, ಎಚ್ಎಸ್ ಆರ್ ಲೇಔಟ್ನಲ್ಲಿರುವ ವಿಧಾನಪರಿಷತ್ ಸದಸ್ಯ, ನಿರ್ಮಾಪಕ ಸಿ.ಆರ್.ಮನೋಹರ್ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ: ನಿರ್ಮಾಪಕರು ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ತೋರಿಸುತ್ತಿದ್ದ ಮೊತ್ತ, ವಿತರಣೆಯ ಮೊತ್ತ ಹಾಗೂ ಕೊನೆಯಲ್ಲಿ ಸಿನಿಮಾದಿಂದ ಗಳಿಸಿದ ಮೊತ್ತಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದವು. ಕೆಲ ನಟರು, ನಿರ್ಮಾಪಕರ ಮೂಲಕ ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಿದ್ದರು. ಅಲ್ಲದೆ, ಅಂತಹ ಚಿತ್ರಗಳು ಸೋತರೂ ಬಹಳ ದಿನಗಳ ಕಾಲ ಚಿತ್ರಮಂದಿರಗಳಲ್ಲೇ ಸಿನಿಮಾ
ಇರುವಂತೆ ನೋಡಿಕೊಳ್ಳುತ್ತಿದ್ದರು. ಈ ಮೂಲಕ ತೆರಿಗೆ ವಂಚನೆ ಮಾಡುತ್ತಿದ್ದರು ಎಂದು ಆದಾಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದು ತಿಂಗಳಿಂದ ಮಾಹಿತಿ: ಇತ್ತೀಚೆಗೆ ಕನ್ನಡ ಚಿತ್ರೋದ್ಯಮದಲ್ಲಿ ಕೋಟಿಗಳದ್ದೇ ಮಾತು. ಕೆಲ ವರ್ಷಗಳಿಂದ ಕನ್ನಡ ಚಿತ್ರಗಳು ಹೆಚ್ಚಾಗಿದ್ದು, ಬಜೆಟ್ ಕೂಡ ಜಾಸ್ತಿಯಾಗಿದೆ. ಆದರೆ, ತೆರಿಗೆ ಸಂದಾಯದ ಪ್ರಮಾಣದಲ್ಲಿ ಮಾತ್ರ ಹೆಚ್ಚಳವಾಗಿಲ್ಲ. ಈ ಹಿನ್ನೆಲೆಯಲ್ಲಿ
ಒಂದು ತಿಂಗಳಿಂದ ಕೆಲ ನಟರು, ನಿರ್ಮಾಪಕರ ಕಳೆದ 2-3 ವರ್ಷಗಳ ಸಿನಿಮಾ, ಇತರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಮೊತ್ತ ಹಾಗೂ ಗಳಿಕೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಅವರ ಸಿನಿಮಾಗಳೆಷ್ಟು? ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ? ಸಂಭಾವನೆ ಎಷ್ಟು? ಎಂಬೆಲ್ಲ ಮಾಹಿತಿ ಪರಿಶೀಲಿಸಿದಾಗ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ
ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.
ರಾಜಕೀಯ ಉದ್ದೇಶವಿಲ್ಲ: ಐಟಿಯವರು ನಮ್ಮ ಮೇಲೆ ವೈಯಕ್ತಿಕ ದಾಳಿ ನಡೆಸಿಲ್ಲ. ಐಟಿ ಅವರಿಗೆ ಅವರದ್ದೇ ಆದ ನೀತಿ ನಿಯಮಗಳಿರುತ್ತದೆ. ಅದರಂತೆ ಅವರು ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ಅಡ್ಡಿಪಡಿಸದೆ ಸಹಕಾರ ನೀಡುತ್ತೇವೆ ಎಂದು ನಟ ಸುದೀಪ್ ಹೇಳಿದ್ದಾರೆ. ಶೂಟಿಂಗ್ನಲ್ಲಿರುವಾಗ ಐಟಿ ದಾಳಿ ಬಗ್ಗೆ ಮಾಹಿತಿ ಸಿಕ್ಕಿತು. 70 ಪ್ಲಸ್ ವಯಸ್ಸು ಆಗಿರುವ ನನ್ನ ತಾಯಿ ಮನೆಯಲ್ಲಿ ಒಬ್ಬರೇ ಇದ್ದು, ಅವರಿಗೆ ತೊಂದರೆಯಾಗಬಾರದು ಎಂದು ಕೂಡಲೇ ಮೈಸೂರಿನಿಂದ ಹೊರಟು ಬಂದೆ. ಕೆಜಿಎಫ್, ದಿ ವಿಲನ್,ನಟಸಾರ್ವಭೌಮ ಬಿಗ್ ಬಜೆಟ್ ಸಂಬಂಧಪಟ್ಟಂತೆ ವಿಚಾರಣೆ ನಡೆದಿದೆ ಎನ್ನಲಾಗುತ್ತಿದೆ. ಹಾಗಾಗಿ ಐಟಿ ದಾಳಿಗೆ ಬಿಗ್ ಬಜೆಟ್ ಸಿನಿಮಾಗಳು ಕಾರಣವಿರಬಹುದು ಎಂದು ತಿಳಿಸಿದ್ದಾರೆ.
ಇದು ಎಕನಾಮಿ ಬಗ್ಗೆ ಸಂಬಂಧಿಸಿದ್ದು, ಇದನ್ನು ನಾನು ವೈಯಕ್ತಿಕ ನೆಲೆಯಲ್ಲಿ ನೋಡಲಾರೆ. ನಾನು ಏನಾದರೂ ತಪ್ಪು
ಮಾಡಿದ್ದರೆ ಭಯ ಪಡಬೇಕು, ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ.
ಇದು ಯಾವ ಪಕ್ಷಕ್ಕೆ ಸಂಬಂಧಪಟ್ಟಿಲ್ಲ, ಇದನ್ನು ರಾಜಕೀಯ ಉದ್ದೇಶಿತ ದಾಳಿ ಎಂದು ಹೇಳಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಟಿ ದಾಳಿಗೊಳಗಾದ ನಟ-ನಿರ್ಮಾಪಕರ ಇತ್ತೀಚಿನ ಸಿನಿಮಾಗಳು:
– ಸುದೀಪ್ – “ದಿ ವಿಲನ್'(ಬಿಡುಗಡೆಯಾಗಿದೆ) “ಪೈಲ್ವಾನ್’,”ಕೋಟಿಗೊಬ್ಬ-3′ (ಬಿಡುಗಡೆಯಾಗಬೇಕಿದೆ)
– ಯಶ್ – ಮಿ.ಆ್ಯಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೇಟ್ ಫಾರ್ವರ್ಡ್, ಕೆಜಿಎಫ್ (ಬಿಡುಗಡೆಯಾಗಿದೆ)
– ಪುನೀತ್ರಾಜಕುಮಾರ್ – ನಟ ಸಾರ್ವಭೌಮ (ಬಿಡುಗಡೆಯಾಗಬೇಕಿದೆ)
– ಶಿವರಾಜಕುಮಾರ್ – ಟಗರು (ಬಿಡುಗಡೆಯಾಗಿದೆ) ಕವಚ, ರುಸ್ತುಂ,ದ್ರೋಣ (ಬಿಡುಗಡೆಯಾಗಬೇಕಿದೆ)
– ವಿಜಯ ಕಿರಗಂದೂರು – ನಿನ್ನಿಂದಲೇ, ಮಾಸ್ಟರ್ ಪೀಸ್, ರಾಜ್ಕುಮಾರ,ಕೆಜಿಎಫ್ (ಬಿಡುಗಡೆಯಾಗಿದೆ) ಯುವರತ್ನ, ಕೆಜಿಎಫ್ ಚಾಪ್ಟರ್ -2(ಬಿಡುಗಡೆಯಾಗಬೇಕಿದೆ)
– ರಾಕ್ಲೈನ್ ವೆಂಕಟೇಶ್ – ಲಿಂಗ, ಭಜರಂಗಿ ಭಾಯಿಜಾನ್, ವಿಲನ್(ಮಲಯಾಳಂ) ಬಿಡುಗಡೆಯಾಗಿದೆ. ನಟಸಾರ್ವಭೌಮ, ಗಂಡುಗಲಿ ವೀರಮದಕರಿ ನಾಯಕ (ಬಿಡುಗಡೆಯಾಗಬೇಕಿದೆ)
– ಜಯಣ್ಣ – ಮಿ. ಆ್ಯಂಡ್ ಮಿಸಸ್ ರಾಮಾಚಾರಿ, ಬಂಗಾರ ಸನ್ಆಫ್ ಬಂಗಾರದ ಮನುಷ್ಯ (ಬಿಡುಗಡೆಯಾಗಿದೆ) ರುಸ್ತುಂ, ಮೈ ನೇಮ್ ಇಸ್ ಕಿರಾತಕ (ಬಿಡುಗಡೆಯಾಗಬೇಕಿದೆ)
– ಸಿ.ಆರ್.ಮನೋಹರ್ – ದಿ ವಿಲನ್ (ಬಿಡುಗಡೆಯಾಗಿದೆ)
ಐಟಿ ದಾಳಿಯನ್ನು ವೈಯಕ್ತಿಕ ನೆಲೆಯಲ್ಲಿ ನೋಡಲಾರೆ. ನಾನು ಏನಾದರೂ ತಪ್ಪು ಮಾಡಿದ್ದರೆ ಭಯ ಪಡಬೇಕು, ನಾನೇನೂ ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ. ಇದು ಯಾವ ಪಕ್ಷಕ್ಕೂ ಸಂಬಂಧಪಟ್ಟಿಲ್ಲ, ಇದನ್ನು ರಾಜಕೀಯ ಉದ್ದೇಶಿತ ದಾಳಿ ಎನ್ನಲಾರೆ.
– ಸುದೀಪ್, ನಟ
ನಾವೆಲ್ಲಾ ಭಾರತದ ಪ್ರಜೆಗಳು.ಕಾನೂನಿನ ಮುಂದೆ ತಲೆಬಾಗಲೇ ಬೇಕು. ಐಟಿ ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಭಯಪಡು ವಂಥದ್ದೇನಿಲ್ಲ. ಕೆಜಿಎಫ್ ಸಿನಿಮಾ ಹಿಟ್ ಆದ ಬಳಿಕ ದಾಳಿ ನಡೆದಿದೆ ಅನ್ನೋದು ಸುಳ್ಳು.
– ಯಶ್, ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?