ಜೈ ಜವಾನ್, ಜೈ ಅನ್ವೇಷಕ
Team Udayavani, Mar 11, 2020, 3:09 AM IST
ಬೆಂಗಳೂರು: ಭವಿಷ್ಯದಲ್ಲಿ ಭಾರತ ವಿಶ್ವ ಮಟ್ಟದಲ್ಲಿಯೇ ಮಾದರಿ ದೇಶವಾಗಲಿದ್ದು, ಇದರಲ್ಲಿ ಉದ್ಯಮಿಗಳ ಪಾತ್ರ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲಿ ಜೈ ಜವಾನ್, ಜೈ ಕಿಸಾನ್ ಜತೆ “ಜೈ ಅನ್ವೇಷಕ’ವೂ ಸೇರಬೇಕು ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಇಲಾಖೆ ಮಂಗಳ ವಾರ ನಗರದಲ್ಲಿ ಆಯೋಜಿಸಿದ್ದ ಎಲಿವೇಟ್ ಕಾಲ್ -2, ಉನ್ನತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅನ್ವೇಷಕರು ಭರವಸೆ ಮೂಡಿಸುತ್ತಿದ್ದು, ಪ್ರತಿಭಾನ್ವಿತರು ಹೊರಹೊಮ್ಮುತ್ತಿದ್ದಾರೆ. ಪ್ರತಿಭಾನ್ವಿತರ ಪ್ರಯ ತ್ನಕ್ಕೆ ಸರ್ಕಾರದ ಬೆಂಬಲ ಇದೆ ಎಂದು ತಿಳಿಸಿದರು. ನಾಡಿನಲ್ಲಿರುವ ಪ್ರತಿಭಾನ್ವಿತರನ್ನು ಗುರು ತಿಸಿ ಬೆಂಬಲಿಸಲು “ಗ್ರಾಂಟ್ ಇನ್ ನೀಡ್’ ಕಾರ್ಯಕ್ರಮ ರೂಪಿಸಲಾಗಿದೆ. ಅದ ಕ್ಕಾ ಗಿಯೇ ಬಜೆಟ್ನಲ್ಲಿ ಇನ್ನೋವೇಷನ್ ಹಬ್ ಸ್ಥಾಪನೆ ಪ್ರಸ್ತಾಪ ಮಾಡಲಾಗಿದೆ ಎಂದರು.
ಈಸ್ ಆಫ್ ಡೂಯಿಂಗ್ ಬಿಸಿನೆಸ್ (ಸುಲಲಿತ ವ್ಯವಹಾರ) ಪರಿಣಾಮಕಾರಿ ಜಾರಿ ಮೂಲಕ ನಂ. 1 ಸ್ಥಾನದಲ್ಲಿರುವುದು ಕರ್ನಾಟಕದ ಉದ್ದೇಶವಾಗಿದೆ. ಉದ್ದಿಮೆಗೆ ಯಾವುದೇ ರೀತಿಯ ಅಡಚಣೆ ಇಲ್ಲದೇ ಸಂತೋಷದಿಂದ ಕೆಲಸ ಮಾಡುವ ವ್ಯವಸ್ಥೆ ನಿರ್ಮಾಣ ಮಾಡಿ, ವಿಶ್ವದಲ್ಲೇ ಕರ್ನಾಟಕ ಉದ್ಯಮಿ ಮತ್ತು ಉದ್ಯಮ ಸ್ನೇಹಿ ಸ್ಥಳ ಆಗಿರಬೇಕು ಎಂದು ಪಣ ತೊಟ್ಟು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಉತ್ತರ ಅಮೆರಿಕ, ಯೂರೋಪ್ಗಳ ಗಮನ ಸೆಳೆಯುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಆದರೆ, ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ನಮ್ಮ ಬೆಂಗಳೂರಿನ ಸಾಮರ್ಥ್ಯ ಗೊತ್ತಿಲ್ಲ. ಏಷ್ಯಾದ ಇತರೆ ರಾಷ್ಟ್ರಗಳಿಗೆ ಬೆಂಗಳೂರಿನ ಸಾಮರ್ಥ್ಯ ತಿಳಿಸಿಕೊಡುವ ಪ್ರಯತ್ನಗಳು ಆಗ ಬೇಕು. ಹೊರಗಿನಿಂದ ಬಂದವರೂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರುವುದನ್ನು ಕಂಡಾಗ ಬಹಳ ಸಂತೋಷವಾಗುತ್ತದೆ.
ಬೆಂಗಳೂರಿನ ಅಭಿವೃದ್ಧಿಗೆ ಅವರ ನಿಸ್ವಾರ್ಥ ಸೇವೆ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಎಲಿವೇಟ್ ಕರ್ನಾಟಕದ ನಿರ್ದೇಶಕ ಪ್ರಶಾಂತ್ ಮಿಶ್ರಾ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಸೇರಿ ದಂತೆ ಹಲವರು ಉಪಸ್ಥಿತರಿದ್ದರು.
113 ಸ್ಟಾರ್ಟ್ಅಪ್ಗಳ ವಿಜೇತರ ಘೋಷಣೆ: ನಾವೀನ್ಯತೆಯುಳ್ಳ ವಾಣಿಜ್ಯೋದ್ಯಮಿಗಳಿಗೆ 50 ಲಕ್ಷ ರೂ. ವರೆಗೆ ಅನುದಾನ ನೀಡುವುದೇ ಎಲಿವೇಟ್, ಉನ್ನತಿ ಕಾರ್ಯಕ್ರಮವಾಗಿದ್ದು, 113 ಸ್ಟಾರ್ಟ್ಅಪ್ಗ್ಳ ವಿಜೇತರನ್ನು ಘೋಷಿಸಲಾಯಿತು. ಬೆಂಗಳೂರಿನ 78, ಧಾರವಾಡದ 13, ಬೆಳಗಾವಿ 4, ಕಲಬುರಗಿ ಮತ್ತು ತುಮಕೂರಿನಿಂದ ತಲಾ 3, ಬೀದರ್, ಬೆಂಗಳೂರು ಗ್ರಾಮೀಣ, ಬಳ್ಳಾರಿಯ ತಲಾ 2, ರಾಮನಗರ, ಚಿಕ್ಕಮಗಳೂರು, ಮೈಸೂರು, ರಾಯಚೂರು, ಹಾವೇರಿ ಹಾಗೂ ಉಡುಪಿಯ ತಲಾ 1 ಸ್ಟಾರ್ಟ್ಅಪ್ ಸ್ಪರ್ಧೆಯಲ್ಲಿ ಗೆದ್ದಿವೆ.