ಕರಾವಳಿಯಲ್ಲಿ ಕಮಲ ಮತ್ತೆ ಫಳಫಳ
Team Udayavani, May 16, 2018, 7:00 AM IST
ಹುಟ್ಟೂರು ಬೇರೆ; ಗೆದ್ದ ಕ್ಷೇತ್ರ ಬೇರೆ !
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾದ ಎಂಟು ಅಭ್ಯರ್ಥಿಗಳ ಪೈಕಿ ನಾಲ್ಕು ಮಂದಿಯ ಹುಟ್ಟೂರು ಬೇರೆಯಾದರೂ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೆಲೆ ನಿಂತು ಇದೀಗ ಶಾಸಕರಾಗಿ ಗೆದ್ದು ಬಂದಿರುವುದು ವಿಶೇಷ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಮೂಲತಃ ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರದ ಸಿದ್ಧಾಪುರದಲ್ಲಿ. ಈಗ ಅವರು ಮಂಗಳೂರಿನ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗಾಂಧಿನಗರ ಏಳನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದಾರೆ. ಉಡುಪಿಯವರಾದರೂ, ಮಂಗಳೂರು ದಕ್ಷಿಣದಲ್ಲಿ ಚುನಾವಣೆ ಎದುರಿಸಿ ಚೊಚ್ಚಲ ಗೆಲುವು ಸಾಧಿಸಿದ್ದಾರೆ. ಹಾಗೆಯೇ, ಮೂಲತಃ ಕುಂದಾಪುರದವರಾದ ಡಾ| ವೈ. ಭರತ್ ಶೆಟ್ಟಿ ಚುನಾವಣೆ ಎದುರಿಸಿ ವಿಜೇತರಾದದ್ದು ಮಂಗಳೂರು ಉತ್ತರ ಕ್ಷೇತ್ರದಲ್ಲಿ.
ಇನ್ನು ಮಂಗಳೂರು ಉತ್ತರ ಕ್ಷೇತ್ರದ ಕುಂಜತ್ತಬೈಲ್ ಮರಕಡದವರಾದ ಉಮಾನಾಥ ಕೋಟ್ಯಾನ್ ಅವರ ಸ್ಪರ್ಧಾ ಕ್ಷೇತ್ರ ಮೂಡಬಿದಿರೆಯಾಗಿದ್ದು, ಚೊಚ್ಚಲ ಗೆಲುವು ಸಾಧಿಸಿದ್ದಾರೆ. ತಮ್ಮದಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುಮಾರು 22,000 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ. ಮಂಗಳೂರು ಉತ್ತರದಲ್ಲಿರುವ ಗಂಜಿಮಠದವರಾದ ರಾಜೇಶ್ ನಾೖಕ್ ಉಳೇಪಾಡಿಯವರು ಸ್ಪರ್ಧಿಸಿ ಜಯ ಗಳಿಸಿದ್ದು ಬಂಟ್ವಾಳ ಕ್ಷೇತ್ರದಲ್ಲಿ. ಹೀಗೆ, ಈ ಬಾರಿಯ ಚುನಾವಣೆಯಲ್ಲಿ ಗೆದ್ದವರ ಪೈಕಿ ನಾಲ್ವರದ್ದು ಹುಟ್ಟೂರು ಮತ್ತು ಕ್ಷೇತ್ರ ಬೇರೆ ಬೇರೆಯಾಗಿದೆ.
ದಾದಯಾ, ನಿಕ್ಲು ಮಾತಾ ಮಾಟ ಮಲ್ತರಾ ದಾನೆ?
ಪುತ್ತೂರು ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಫಲಿತಾಂಶ ಘೋಷಣೆಯಾಗಿ ಹೊರಗೆ ಬಂದು ಮಾಧ್ಯಮದವರ ಜತೆ ಮಾತನಾಡಿ, ಅನಂತರ ತನ್ನೂರಿನ ಕೆಲವು ಬಿಜೆಪಿ ಕಾರ್ಯಕರ್ತರೊಂದಿಗೆ ಸ್ನೇಹಪರವಾಗಿಯೇ ಮಾತನಾಡುವುದು ಕಂಡು ಬಂತು. ತನ್ನ ಸೋಲಿಗೆ ಅಚ್ಚರಿಯನ್ನು ವ್ಯಕ್ತಪಡಿಸುತ್ತಾ, ‘ದಾದಯಾ! ನಿಕ್ಲು ಮಾತಾ ಮಾಟ ಮಲ್ತರಾ ದಾನೆ? ಮುರಾನಿ ನಾಲ್ ಸಾರ ಓಟುಗು ಗೆಂದುವ ಪನೊಂದಿತ್ತರ್… ಇತ್ತೆ ತೂನಗ 20 ಸಾರ ಓಟುಡು ಗೆಂದ್ಯರ್… ದಾದ ಕತೆ?’ (ನೀವೆಲ್ಲ ಸೇರಿ ಮಾಟ ಮಾಡಿದ್ದೀರೋ ಹೇಗೆ? ಮೊನ್ನೆ ನಾಲ್ಕು ಸಾವಿರ ಮತಗಳಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದಿರಿ… ಈಗ ನೋಡಿದರೆ 20 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೀರಿ… ಏನು ವಿಷಯ?) ಎಂದು ಕೇಳುತ್ತಿದ್ದುದು ಕಂಡು ಬಂತು.
ನಿಷೇಧಾಜ್ಞೆ: ಪೊಲೀಸರಿಂದ ಗುಂಪುಗೂಡದಂತೆ ಮನವಿ
ಬೆಂಬಲಿಗರು ಬೆಳಗ್ಗಿನಿಂದಲೇ ಮತದಾನ ಕೇಂದ್ರದ ಗೇಟಿನತ್ತ ಬರಲು ಹವಣಿಸುತ್ತಿದ್ದರಾದರೂ ನಿಷೇಧಾಜ್ಞೆಯ ಪರಿಣಾಮ ಮತದಾನ ಕೇಂದ್ರದ 200 ಮೀ. ಸುತ್ತಮುತ್ತ ಎಲ್ಲೂ ಗುಂಪುಗೂಡದಂತೆ ಎಚ್ಚರಿಕೆ ವಹಿಸಿದರು. ಕೆಲವು ಕಾರ್ಯಕರ್ತರು ಗೇಟಿನತ್ತ ಬರಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಅಲ್ಲಿಂದ ಸಾಗಹಾಕಿದರು. ಆದರೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಫಲಿತಾಂಶ ಘೋಷಣೆಯಾದಾಗ ಮಾತ್ರ ಬಿಜೆಪಿ ಕಾರ್ಯಕರ್ತರು ಪೊಲೀಸರನ್ನೂ ಲೆಕ್ಕಿಸದೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
‘ಮೋದಿ-ಮೋದಿ’ ಘೋಷಣೆ
ಮಹಾನಗರ: ಸೋಲು ಖಚಿತವಾಗುತ್ತಿದ್ದಂತೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಎ. ಮೊದಿನ್ ಬಾವ ಅವರು ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು. ಬಾವ ಹೊರ ಹೋಗುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಬಳಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ‘ಮೋದಿ..ಮೋದಿ..’ ಎಂದು ಘೋಷಣೆ ಕೂಗಿದರು. ಪರಾಜಿತ ಅಭ್ಯರ್ಥಿ ಮೊದಿನ್ ಬಾವ ಅವರು ಮತ್ತೂಮ್ಮೆ ಮತ ಎಣಿಕೆ ಕೇಂದ್ರದತ್ತ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ‘ಮೋದಿ-ಮೋದಿ’ ಘೋಷಣೆ ಕೂಗಿದರು.
ಮತ ಎಣಿಕೆ ಮುನ್ನವೇ ವಿಜಯೋತ್ಸವ!
ವಿಶೇಷವೆಂದರ ಮತ ಎಣಿಕೆಯ ಮುನ್ನಾ ದಿನವಾದ ಸೋಮವಾರ ತಡರಾತ್ರಿಯಂದು ಫಳ್ನೀರ್, ಮಿಲಾಗ್ರಿಸ್ ವಾರ್ಡ್ನ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ವಿಜಯೋತ್ಸವ ಆಚರಿಸಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೋ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸುತ್ತಾರೆ ಎಂಬ ಆಶಾಭಾವನೆಯೊಂದಿಗೆ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಆದರೆ ಮತ ಎಣಿಕೆ ಬಳಿಕ ಜೆ.ಆರ್. ಲೋಬೋ ಅವರು ಸೋಲು ಅನುಭವಿಸಿದರು.
ಕೈಕೊಟ್ಟ ಮೈಕ್
ಭದ್ರತಾ ದೃಷ್ಟಿಯಿಂದ ಮತ ಎಣಿಕೆ ಕೇಂದ್ರದ 500 ಮೀ. ಸುತ್ತಲೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಆದರೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರವನ್ನು ತಿಳಿಸಲು ಮೈಕ್ ವ್ಯವಸ್ಥೆ ಮಾಡಲಾಗಿತ್ತು. ಮೈಕ್ ಆಗಾಗ ಕೈಕೊಡುತ್ತಿದ್ದ ಪ್ರಸಂಗವೂ ನಡೆಯಿತು. ಅಭ್ಯರ್ಥಿಗಳ ಸೋಲು- ಗೆಲುವಿನ ಬಗ್ಗೆ ತಿಳಿದುಕೊಳ್ಳಲು ಹೊರಗಡೆ ಕಾಯುತ್ತಿದ್ದ ಕಾರ್ಯಕರ್ತರಿಗೆ ಮಾತ್ರ ಮೈಕ್ ನಲ್ಲಿ ಹೇಳುತ್ತಿದ್ದ ಮಾತುಗಳು ಕೇಳಿಸುತ್ತಲೇ ಇರಲಿಲ್ಲ.
ಗೆಲ್ತ್ಂಡಪ್ಪ..ಗೆಲ್ತ್ಂಡ್..
ನಗರಾದ್ಯಂತ ಬೈಕ್, ಜೀಪುಗಳಲ್ಲಿ ಬಿಜೆಪಿ ಧ್ವಜ ಇಟ್ಟುಕೊಂಡು ಸಂಚರಿಸಿ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ನಡೆಸಿದರು. ಗೆಲ್ತ್ಂಡಪ್ಪ ಗೆಲ್ತ್ಂಡ್, ಬಿಜೆಪಿ ಗೆಲ್ತ್ಂಡ್..ಒಂಜಿ, ರಡ್ಡ್ ಸಾರಗತ್ತ್..’ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು.
ಖಾದರ್ ಗೆಲುವಿಗೆ ಸಂಭ್ರಮವಿಲ್ಲ
ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಗೆಲುವು ಪಡೆದುಕೊಂಡರೂ ಉಳ್ಳಾಲದಲ್ಲಿ ಕಾರ್ಯಕರ್ತರ ಸಂಭ್ರಮವಿರಲಿಲ್ಲ. ಫಲಿತಾಂಶ ಬಂದ ಬಳಿಕವೂ ಮುಡಿಪು, ಬೋಳಿಯಾರ್ ಜಂಕ್ಷನ್ ಬಿಕೋ ಎನ್ನುತ್ತಿತ್ತು. ಪೇಟೆಯಲ್ಲಿ ಜನಸಂದಣಿ ಕಡಿಮೆಯಿತ್ತು. ಆದರೆ ಅಂಗಡಿಗಳ ಮುಂದೆ ಜನ ಟಿವಿ ವೀಕ್ಷಣೆಯಲ್ಲಿ ನಿರತರಾಗಿದ್ದರು.
ಟ್ರೋಲ್ ಮೂಲಕ ಟಾಂಗ್
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಿದ್ದಂತೆ ಇತ್ತ ಟ್ರೋಲ್ ಮಂದಿ ವೈವಿಧ್ಯ ಟ್ರೋಲ್ ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಡುವುದರಲ್ಲಿ ತಲ್ಲೀನರಾಗಿದ್ದರು. ಪ್ರಮುಖ ಎರಡು ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಶುಭಾಶಯ ಮತ್ತು ಟಾಂಗ್ ನೀಡುವ ಟ್ರೋಲ್ಗಳು ಶೀಘ್ರಗತಿಯಲ್ಲಿ ಶೇರ್ ಆಗುತ್ತಿದ್ದವು. ಈ ನಡುವೆ ವಿವಿಧ ವಾಟ್ಸಪ್ ಗ್ರೂಪ್ ಗಳ ಸದಸ್ಯರು ತಮ್ಮ ಗ್ರೂಪ್ ಐಕಾನ್ ನಲ್ಲಿ ಬಿಜೆಪಿ ಪಕ್ಷದ ತಾವರೆ ಚಿಹ್ನೆಯನ್ನು ಹಾಕಿ ಬಿಜೆಪಿಯ ಜಯವನ್ನು ಸಂಭ್ರಮಿಸಿದರು. ಸಾಮಾಜಿಕ ತಾಣ ಫೇಸ್ಬುಕ್ ಮಂಗಳವಾರ ಸಂಪೂರ್ಣ ಕೇಸರೀಮಯವಾಗಿತ್ತು.
ಮೊಬೈಲ್ ನಲ್ಲೇ ವೀಕ್ಷಣೆ
ಕಚೇರಿ ಕೆಲಸ ಅಥವಾ ಇತರ ತುರ್ತು ಕೆಲಸಗಳಿಗೆ ತೆರಳಿದವರು ಮನೆಯಲ್ಲಿ ಟಿವಿಯಲ್ಲಿ ಚುನಾವಣಾ ಫಲಿತಾಂಶ ವೀಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮೊಬೈಲ್ ನಲ್ಲೇ ಫಲಿತಾಂಶ ನೋಡಿದರು. ಬಹುತೇಕ ಎಲ್ಲ ಚಾನೆಲ್ ಗಳ ಫೇಸ್ ಬುಕ್ ಲೈವ್ ಇದ್ದ ಹಿನ್ನೆಲೆಯಲ್ಲಿ ಫಲಿತಾಂಶ ತಿಳಿದುಕೊಳ್ಳಲು ಕಷ್ಟವಾಗಲಿಲ್ಲ. ಅಲ್ಲದೆ ಯೂಟ್ಯೂಬ್ ಮುಖಾಂತರವು ಜನ ಫಲಿತಾಂಶ ವೀಕ್ಷಿಸಿದರು.
ಬಸ್ ಗಳಲ್ಲಿ ನ್ಯೂಸ್ ಹವಾ
ವಿಶೇಷವೆಂದರೆ ಬೆಳಗ್ಗೆ ಎಂಟು ಗಂಟೆಯಿಂದ ಬಹುತೇಕ ಬಸ್ ಗಳಲ್ಲಿ ಬರುವ ಎಲ್ಲರೂ ತಮ್ಮ ಮೊಬೈಲ್ಗಳಲ್ಲಿ ಟಿವಿ ವೀಕ್ಷಣೆಯಲ್ಲಿ ನಿರತರಾಗಿದ್ದರು. ಪ್ರತಿದಿನ ಬಸ್ ಪ್ರಯಾಣದ ವೇಳೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಿದ್ದರೆ ಮಂಗಳವಾರ ಮಾತ್ರ ವಾರ್ತಾ ವಾಹಿನಿಗಳಲ್ಲಿ ಚುನಾವಣೆ ವೀಕ್ಷಣೆಯಲ್ಲಿ ಬಹುತೇಕ ಪ್ರಯಾಣಿಕರು ನಿರತರಾಗಿದ್ದರು.
ಬೆಟ್ಟಿಂಗ್ ಬಿರುಸು
ತಮ್ಮ ನೆಚ್ಚಿನ ಅಭ್ಯರ್ಥಿಯ ಪರವಾಗಿ ಅನೇಕರು ಸಾವಿರ ಸಾವಿರ ರೂಪಾಯಿಗಳ ಬೆಟ್ಟಿಂಗ್ ನಡೆಸಿದ್ದರು. ಬೆಟ್ಟಿಂಗ್ ಎಷ್ಟು ಜೋರಾಗಿತ್ತೆಂದರೆ ಮತ ಎಣಿಕೆಯ ದಿನವಾದ ಮಂಗಳವಾರ ಬೆಳಗ್ಗೆ ಎಂಟು ಗಂಟೆಯವರೆಗೂ ಬೆಟ್ ಕಟ್ಟುವುದು ನಡೆದೇ ಇತ್ತು. ಅಭ್ಯರ್ಥಿಗಳ ಸೋಲು-ಗೆಲುವಿನ ಬಳಿಕ ಗೆದ್ದ ಅಭ್ಯರ್ಥಿಯ ಪರವಾಗಿ ಬೆಟ್ ಕಟ್ಟಿದವರ ಮುಖದಲ್ಲಿ ಮಂದಹಾಸ ಮೂಡಿದರೆ, ಸೋತ ಅಭ್ಯರ್ಥಿಯ ಪರವಾಗಿದ್ದವನ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.
ಬಿಜೆಪಿ ಗೆಲುವು: ಚಿನ್ನದ ಸರ ನೀಡಿ ಮಾತು ಉಳಿಸಿದರು!
ಹಳೆಯಂಗಡಿ: ವರ್ಷದ ಹಿಂದೆ ಬಿಜೆಪಿ ಮೇಲಿನ ಅಭಿಮಾನದಿಂದ ಮೂಲ್ಕಿ – ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಪಡುಪಣಂಬೂರು ಗ್ರಾಮದ ನಿವಾಸಿ ಸೋಮನಾಥ ಶೆಟ್ಟಿ ಜೋಕಟ್ಟೆ ಅವರಿಗೆ ಚಿನ್ನದ ಸರ ಕೊಡುತ್ತೇನೆ ಎಂದು ಹೇಳಿಕೊಂಡಿದ್ದ ಹಳೆಯಂಗಡಿ ಗ್ರಾಮ ಪಂಚಾಯತ್ನ ಸದಸ್ಯ ವಿನೋದ್ಕುಮಾರ್ ಕೊಳುವೈಲು ತಮ್ಮ ಮಾತಿನಂತೆ ಮಂಗಳವಾರ ಬೆಳಗ್ಗೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚಿನ್ನದ ಸರವನ್ನು ಅವರಿಗೆ ನೀಡಿ ಸಂತಸ ಹಂಚಿಕೊಂಡಿದ್ದಾರೆ.
ಗೆದ್ದವರು ಕಾಲಿಗೆ ಬಿದ್ದರು
ಗೆದ್ದ ಬಹುತೇಕ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಲೇ ಪಕ್ಷದ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರುವುದು ಕಂಡು ಬಂತು. ಪ್ರಾರಂಭದಲ್ಲಿ ಬಿಗಿ ಪೊಲೀಸ್ ಪಹರೆ ಇದ್ದ ಪರಿಣಾಮ ಕೆಲವೇ ಕೆಲವು ಕಾರ್ಯಕರ್ತರು ಗೇಟಿನ ಹೊರಭಾಗದಲ್ಲಿ ಇದ್ದರಾದರೂ ಅವರೆಲ್ಲರೂ ಗೆದ್ದ ತಮ್ಮ ನೆಚ್ಚಿನ ಅಭ್ಯರ್ಥಿಪರ ಘೋಷಣೆ ಕೂಗಿ ಸಂಭ್ರಮಾಚರಿಸುತ್ತಿರುವುದು ಕಂಡು ಬಂತು.
ಏಕಾಂಗಿ ಧರ್ಮೇಂದ್ರ
ಅಭ್ಯರ್ಥಿಗಳು ಗೆದ್ದರೂ ಸೋತರೂ ಕೆಲವು ಹಿಂಬಾಲಕರೊಡನೆ ಮತದಾನ ಕೇಂದ್ರದಿಂದ ಹೊರಹೋಗುತ್ತಿದ್ದರೆ, ಹಿಂದೂ ಮಹಾ ಸಭಾದಿಂದ ಮಂಗಳೂರು ದಕ್ಷಿಣದಿಂದ ಸ್ಪರ್ಧೆಗಿಳಿದಿದ್ದ ಧರ್ಮೇಂದ್ರ ಮಾತ್ರ, ಫಲಿತಾಂಶ ಘೋಷಣೆಯಾದ ಬಳಿಕ ಏಕಾಂಗಿಯಾಗಿ ಮತ ಎಣಿಕೆ ಕೇಂದ್ರದಿಂದ ಹೊರಹೋಗುತ್ತಿರುವುದು ಕಂಡುಬಂತು.
ಗದ್ಗದಿತರಾದ ಸಂತೋಷ್ ಕುಮಾರ್ ರೈ
ಜಿಲ್ಲೆಯ ಬಿಜೆಪಿ ಪಾಳಯದಿಂದ ಸ್ಪರ್ಧಿಸಿ ಸೋಲೊಪ್ಪಿಕೊಂಡ ಏಕೈಕ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು, ಸೋತರೂ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದರು. ನಾನೊಬ್ಬನೇ ಸೋತಿರುವುದು. ಪ್ರತಿಷ್ಠಿತ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ನೀಡಿ ವೀರೋಚಿತ ಸೋಲುಂಡಿದ್ದೇನೆ. ಆದರೂ ನನ್ನನ್ನು ಬೆಂಬಲಿಸಿದ ಮತದಾರರಿಗೆ ಏನು ಉತ್ತರ ಕೊಡಲಿ ಎನ್ನುತ್ತಾ ಗದ್ಗದಿತರಾದರು.
ಹಾರ ಹಾಕಿ ಒಳಹೋಗಲೆತ್ನಿಸಿದ ವೇದವ್ಯಾಸ ಕಾಮತ್; ತೆಗೆಸಿದ ಭದ್ರತಾ ಸಿಬಂದಿ
ಮಂಗಳೂರು ದಕ್ಷಿಣದ ವಿಜೇತ ಅಭ್ಯರ್ಥಿ ವೇದವ್ಯಾಸ ಕಾಮತ್ ಗೆಲುವು ಖಚಿತವಾದ ಕೂಡಲೇ ಬೆಂಬಲಿಗರು ಹಾಕಿದ ಹೂಹಾರ ಹಾಕಿಕೊಂಡೇ ಮತ ಎಣಿಕೆ ಕೇಂದ್ರಕ್ಕೆ ಹೋದರು. ಆದರೆ ಭದ್ರತಾ ಸಿಬಂದಿ ಹಾರ ತೆಗೆದ ಮೇಲಷ್ಟೇ ಒಳಬಿಟ್ಟರು.