ಕಸ್ತೂರಿರಂಗನ್ ವರದಿ ಆಕ್ಷೇಪಣೆ: ಸ್ಪಷ್ಟ ನಿರ್ಧಾರಕ್ಕೆ ಬಾರದ ಸರ್ಕಾರ
Team Udayavani, Mar 28, 2017, 3:45 AM IST
ಬೆಂಗಳೂರು: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲು ಪಶ್ಚಿಮ ಘಟ್ಟ ಭಾಗದ ಶಾಸಕರೊಂದಿಗೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿದರೂ ಸೂಕ್ತ ನಿರ್ಧಾರಕ್ಕೆ ಬರುವಲ್ಲಿ ಸರ್ಕಾರ ವಿಫಲವಾಗಿದೆ.
ಕಸ್ತೂರಿರಂಗನ್ ವರದಿ ಜಾರಿ ಕುರಿತ ಕೇಂದ್ರ ಸರ್ಕಾರ ಮೂರು ಬಾರಿ ಕರಡು ಅಧಿಸೂಚನೆ ಹೊರಡಿಸಿದರೂ ಆಕ್ಷೇಪಣೆ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂದು ಪ್ರತಿಪಕ್ಷ ಸದಸ್ಯರು ವಿಧಾನಸಭೆಯಲ್ಲಿ ಆರೋಪಿಸಿದ್ದರಲ್ಲದೆ, ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದರೂ ಸರ್ಕಾರ ಅದನ್ನು ಅನುಸರಿಸಿಲ್ಲ ಎಂದು ವಿಧಾನಸಭೆಯಲ್ಲಿ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಭಾಗದ ಶಾಸಕರೊಂದಿಗೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿ ಸೋಮವಾರ ಸಭೆ ಕರೆದಿತ್ತು.
ಸಭೆಗೆ ಹಾಜರಾಗಿದ್ದವರ ಪೈಕಿ ಬಹುತೇಕ ಶಾಸಕರು, ಗ್ರಾಮ ಸಭೆಗಳನ್ನು ನಡೆಸಿ ಮತ್ತು ಸ್ಥಳೀಯವಾಗಿ ಸರ್ವೇ ಮಾಡಿ ಪ್ರಾಕೃತಿಕ ಜೀವವೈವಿದ್ಯ ಮತ್ತು ಸಾಂಸ್ಕೃತಿಕ ಜೀವವೈವಿದ್ಯ ಎಂದು ವಿಂಗಡಣೆ ಮಾಡಿ ಸಾಂಸ್ಕೃತಿಕ ಜೀವವೈವಿದ್ಯ ಇರುವ ಪ್ರದೇಶಗಳನ್ನು ಪರಿಸರ ಸೂಕ್ಮ ಪ್ರದೇಶ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುತ್ಛರಿಸಿದರು.
ಅಲ್ಲದೆ, ಪ್ರಕರಣ ಹಸಿರು ನ್ಯಾಯಾಧಿಕರಣದಲ್ಲಿರುವುದರಿಂದ ಅಲ್ಲೂ ಪ್ರಮಾಣಪತ್ರ ಸಲ್ಲಿಸಿ ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಬೇಕು. ವರದಿಗೆ ಆಕ್ಷೇಪಣೆ ಸಲ್ಲಿಸುವಾಗ ಕೇರಳ ಮಾದರಿ ಅನುಸರಿಸಬೇಕು ಎಂದು ಒತ್ತಾಯಿಸಿದರು.
ಶಾಸಕರ ಮಾತು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಸಚಿವ ಸಂಪುಟ ಉಪಸಮಿತಿ ಸದಸ್ಯರಾದ ರಮಾನಥ ರೈ ಮತ್ತು ಟಿ.ಬಿ.ಜಯಚಂದ್ರ, ಕಸ್ತೂರಿರಂಗನ್ ವರದಿ ಜಾರಿ ಕುರಿತು ಕೇಂದ್ರ ಸರ್ಕಾರ ನಾಲ್ಕನೇ ಬಾರಿಗೆ ಹೊರಡಿಸಿರುವ ಕರಡು ಅಧಿಸೂಚನೆಗೆ ಸರ್ಕಾರ ಸಮರ್ಥ ಆಕ್ಷೇಪಣೆ ಸಲ್ಲಿಸಲಿದೆ. ಈ ಬಗ್ಗೆ ಅಗತ್ಯ ಬಿದ್ದರೆ ಮತ್ತೆ ಶಾಸಕರ ಸಭೆ ಕರೆಯುತ್ತೇವೆ ಎಂದು ಹೇಳಿ ಸಭೆಗೆ ತೆರೆ ಎಳೆಯಿತು. ಆದರೆ, ಯಾವ ರೀತಿ ಪ್ರಮಾಣ ಪತ್ರ ಸಲ್ಲಿಸಬೇಕು? ಪ್ರಮಾಣಪತ್ರ ಸಲ್ಲಿಸುವ ಮುನ್ನ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಯಿತು.