ಕೆಎಟಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಂದಕ್ಕೆ
Team Udayavani, Oct 27, 2017, 6:45 AM IST
ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಕೆಪಿಎಸ್ಸಿ ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕೆಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.27ಕ್ಕೆ ಮುಂದೂಡಿದೆ.
ಗುರುವಾರ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾ.ಎಚ್.ಜಿ.ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಬಿ.ನರಗುಂದ ಅವರು, ಕೆಪಿಎಸ್ಸಿ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ “ಎ’ ಮತ್ತು “ಬಿ’ ವೃಂದದ ನೇಮಕಾತಿಯಲ್ಲಿ ಅಸಿಸ್ಟೆಂಟ್ ಕಮಿಷನರ್ ಹುದ್ದೆ 1.50 ಕೋಟಿ ರೂ. ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹುದ್ದೆ 30 ಲಕ್ಷ ರೂ.ಗಳಿಗೆ ಬಿಕರಿಯಾಗಿವೆ. ಈ ನೇಮಕಾತಿ ವೇಳೆ ಅಧಿಕಾರದಲ್ಲಿದ್ದ ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರು ನಡೆಸಿರುವ ಹಗರಣವನ್ನು ಸಿಐಡಿ ತನಿಖೆ ನಡೆಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಭ್ರಷ್ಟಾಚಾರದ ಎಲ್ಲ ಸಂಗತಿಗಳು ದಾಖಲಾಗಿವೆ ಎಂದು ಎಂದು ವಿಭಾಗೀಯ ಪೀಠಕ್ಕೆ ವಿವರಿಸಿದರು.
ಇದಕ್ಕೂ ಮೊದಲು ಕೆಪಿಎಸ್ಸಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ಅವರು “”ಆಡಳಿತ ಸೇವೆಗೆ ಸಂಬಂಧಿಸಿ ವ್ಯಾಜ್ಯಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಡಿಯಲ್ಲಿ ಪರಿಗಣಿಸಲು ಬರುವುದಿಲ್ಲ” ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಪರಿಗಣಿಸಿದ ಹಂಗಾಮಿ ಮುಖ್ಯ ನ್ಯಾ. ಎಚ್.ಜಿ.ರಮೇಶ್, ಅರ್ಜಿದಾರ ವಕೀಲರಿಗೆ “ಪಿಐಎಲ್ ಆಗಿ ಈ ಅರ್ಜಿ ವಿಚಾರಣೆ ನಡೆಸಲು ಬರುತ್ತದೆಯೇ ಇಲ್ಲವೇ ಎಂಬ ಅಂಶದ ಬಗ್ಗೆ ಮಾತ್ರವೇ ನಿಮ್ಮ ವಾದವನ್ನು ಕೇಂದ್ರೀಕರಿಸಿ ಎಂದು ಹೇಳಿದರು. ನಂತರ ವಿಚಾರಣೆಯನ್ನು ಗುರುವಾರಕ್ಕೆ (ಅ.27ಕ್ಕೆ) ಮುಂದೂಡಿದರು.