ಕೊಲೆ ಅಪರಾಧಿಗೆ ಜೀವಾವಧಿ ಜೈಲು
Team Udayavani, Mar 26, 2019, 12:21 PM IST
ಬೆಂಗಳೂರು: ಆಸ್ತಿ ಕಲಹಕ್ಕೆ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಅಪರಾಧಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ 57ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷೆನ್ಸ್ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಆನಂದ್ ಶಿಕ್ಷೆಗೆ ಗುರಿಯಾದವನು.
ಶಾಂತಿ ನಗರದ ಭೀಮಣ್ಣ ಗಾರ್ಡನ್ ನಿವಾಸಿ ಆನಂದ್ ಹಾಗೂ ಅಬ್ದುಲ್ ಹಫೀಜ್ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹಲವು ಬಾರಿ ಜಗಳ ನಡೆದಿತ್ತು. 2012ರ ಜು.8ರಂದು ಬೆಳಗ್ಗೆ 6.30ರ ಸುಮಾರಿಗೆ ಅಕ್ಕಿತಿಮ್ಮನಹಳ್ಳಿ ಕಾರ್ಪೊರೇಷನ್ ಸಮುದಾಯ ಭವನದ ಬಳಿ ಆಟೋದಲ್ಲಿ ಹೋಗುತ್ತಿದ್ದ ಅಬ್ದುಲ್ ಹಫೀಜ್ ತಡೆದಿದ್ದ ಆನಂದ್ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕ ನಗರ ಠಾಣೆ ಪೊಲೀಸರು, ಆರೋಪಿ ಆನಂದ್ನನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿ ಆನಂದ್ ಕೊಲೆ ಎಸಗಿದ್ದಕ್ಕೆ ಪೊಲೀಸರ ಸಾಕ್ಷ್ಯಾಧಾರಗಳು ಹಾಗೂ ಪ್ರಾಸಿಕ್ಯೂನ್ ಪರ ವಕೀಲರ ವಾದ ಪುರಸ್ಕರಿಸಿ ಅಪರಾಧಿ ಎಂದು ಅಭಿಪ್ರಾಯಪಟ್ಟಿತ್ತು.
ಈ ಕುರಿತಂತೆ 57ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿನಿತಾ ಪಿ. ಶೆಟ್ಟಿ ಅವರು, ಅಪರಾಧಿ ಆನಂದ್ಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿದೆ. ಜತೆಗೆ, ದಂಡದ ಮೊತ್ತದಲ್ಲಿ 50 ಸಾವಿರ ರೂ,ಗಳನ್ನು ಕೊಲೆಯಾಗಿದ್ದ ಹಫೀಜ್ ಪತ್ನಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ ಎಂದು ಪ್ರಾಸಿಕ್ಯೂನ್ ಪರವಾಗಿ ವಾದಿಸಿದ್ದ ಸರ್ಕಾರಿ ಅಭಿಯೋಜಕರಾದ ಸಿ.ಎಂ ಬೆಳಲದವರ ತಿಳಿಸಿದ್ದಾರೆ.