ದೆಹಲಿಯಲ್ಲಿ ಸಚಿವಾಕಾಂಕ್ಷಿಗಳಿಂದ ಲಾಬಿ
Team Udayavani, Aug 7, 2018, 6:10 AM IST
ಬೆಂಗಳೂರು: ಆಷಾಢ ಮಾಸ ಮುಗಿದ ನಂತರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಆಸೆಯಿಂದ
ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಲಾಬಿ ಆರಂಭಿಸಿದ್ದಾರೆ.
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಎಂಟು ಶಾಸಕರು ಸೋಮವಾರ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಎಸ್ಟಿ ಸಮುದಾಯಕ್ಕೆ ಇನ್ನೊಂದು ಮಂತ್ರಿ ಸ್ಥಾನ ಹಾಗೂ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಈ ಶಾಸಕರು ಆಗ್ರಹಿಸಿದ್ದಾರೆ.
ಮಸ್ಕಿ ಶಾಸಕ ಪ್ರತಾಪ್ಗೌಡ ಪಾಟೀಲ್, ಬಳ್ಳಾರಿ ಗ್ರಾಮಾಂತರದ ನಾಗೇಂದ್ರ, ಬಸವಕಲ್ಯಾಣದ ಬಿ. ನಾರಾಯಣರಾವ್, ಬೀದರ್ನ ರಹೀಂ ಖಾನ್, ಅಥಣಿಯ ಮಹೇಶ್, ಲಿಂಗಸಗೂರು ಶಾಸಕ ದುರ್ಗಪ್ಪ ಹೂಲಗೇರೆ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕ್ ರಾವ್ ಪಾಟೀಲ್ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಕಲ್ಪಿಸುವಂತೆ ಹೈ ಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಶಾಸಕರ ಜತೆ ಅಜ್ಮಿàರ್ ಪ್ರವಾಸ ಕೈಗೊಂಡ ಬಗ್ಗೆಯೂ ರಮೇಶ್ ಜಾರಕಿಹೊಳಿ ಅವರು
ವೇಣುಗೋಪಾಲ್ ಅವರಿಗೆ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ,ಕಾಂಗ್ರೆಸ್ ಮೂಲಗಳ ಪ್ರಕಾರ ಆಗಸ್ಟ್ 15 ರ ನಂತರ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ರಾಜ್ಯ ನಾಯಕರು ರಾಹುಲ್ ಗಾಂಧಿ ಬಳಿ ಸಮಯ ಕೇಳಿದ್ದು, ರಾಹುಲ್ ಅನುಮತಿ ನೀಡಿದ ನಂತರ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಸ್ಥಳೀಯ ಸಂಸ್ಥೆಯ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣೆ ಮುಗಿಯುವ ವರೆಗೂ ಸಂಪುಟ ವಿಸ್ತರಣೆ ಆಗುವುದು ಅನುಮಾನ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.