ಫ್ಲೆಕ್ಸ್ ಮುದ್ರಣ ಮಳಿಗೆಗಳಿಗೆ ಬೀಗ
Team Udayavani, Aug 4, 2018, 12:06 PM IST
ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ ನಡೆಯುತ್ತಿರುವ ಬಿಬಿಎಂಪಿ, ಫ್ಲೆಕ್ಸ್ಗಳ ತೆರವು ಕಾರ್ಯದ ಜತೆಗೆ ಶುಕ್ರವಾರ ನಗರದ ಹಲವು ಫ್ಲೆಕ್ಸ್, ಬ್ಯಾನರ್ ಮುದ್ರಣ ಮಳಿಗೆಗಳ ಮೇಲೆ ದಾಳಿ ನಡೆಸಿ ಮಳಿಗೆಗಳಿಗೆ ಬೀಗ ಜಡಿದಿದೆ.
ಮೂರು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಸುಮಾರು 20 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಿದ್ದಾರೆ. ಈ ನಡುವೆಯೇ ಫ್ಲೆಕ್ಸ್, ಬ್ಯಾನರ್ ಮುದ್ರಿಸುವ ಮಳಿಗೆಗಳ ಮೇಲೂ ಶುಕ್ರವಾರ ದಾಳಿ ನಡೆಸಿದ ಅಧಿಕಾರಿಗಳು, ಮಳಿಗೆಗಳಿಗೆ ಬೀಗಮುದ್ರೆ ಹಾಕಿ ನೋಟಿಸ್ ಜಾರಿಗೊಳಿಸಿದ್ದಾರೆ.
ಪಾಲಿಕೆ ಆರೋಗ್ಯಾಧಿಕಾರಿ ಡಾ.ಸುರೇಶ್ ನೇತೃತ್ವದಲ್ಲಿ ಗಾಂಧಿನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, 8ಕ್ಕೂ ಹೆಚ್ಚು ಫ್ಲೆಕ್ಸ್ ಮುದ್ರಣ ಮಳಿಗೆಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸಿದ್ದು, ಮಳಿಗೆಗಳಲ್ಲಿ ಶೇಖರಿಸಲಾಗಿದ್ದ ಫ್ಲೆಕ್ಸ್ ಮುದ್ರಣ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ. ಎಂಟು ವಲಯಗಳಿಂದ 36 ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ಚಾಮರಾಜಪೇಟೆಯಲ್ಲಿನ ಆರ್.ಕೆ.ಪ್ರಿಂಟರ್ ಹಾಗೂ ಲಾರ್ಡ್ ಡಿಜಿಟಲ್ಸ್ ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಜತೆಗೆ ಬಿನ್ನಿಪೇಟೆ ವಾರ್ಡ್ನ ಓಂಕಾರ್ ಎಂಟರ್ ಪ್ರೈಸಸ್ ಮೇಲೆ ದಾಳಿ ನಡೆಸಿ 600 ಕೆ.ಜಿ. ಫ್ಲೆಕ್ಸ್ಗಳನ್ನು ಜಪ್ತಿ ಮಾಡಿದ್ದು, ಮಾಲೀಕರಿಗೆ 30 ಸಾವಿರ ರೂ. ದಂಡ ವಿಧಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಫ್ಲೆಕ್ಸ್ ಮುದ್ರಣ ಮಾಡದಂತೆ ನೋಟಿಸ್ ಜಾರಿಗೊಳಿಸಿದ್ದಾರೆ.
ಹಲ್ಲೆ ನಡೆಸಿದ ನಾಲ್ವರ ಬಂಧನ: ಮಹದೇವಪುರ ವಲಯದಲ್ಲಿ ಗುರುವಾರ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಗುರುವಾರ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಅನಧಿಕೃತ ಬ್ಯಾನರ್ಗಳನ್ನು ತೆರವುಗೊಳಿಸುವ ವೇಳೆ ಪಾಲಿಕೆಯ ಎಚ್ಎಎಲ್ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಭಟ್ಟಚಾರ್ ಮೇಲೆ ಹಲ್ಲೆ ನಡೆಸಿದ ರಾಜೇಂದ್ರನ್, ಸೈಮರ್, ಕಮಲನಾಥ್ ಹಾಗೂ ಸೂರ್ಯ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಸಂತೋಷ್ ಹಾಗೂ ಸರವಣ ತಲೆಮರೆಸಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಧೈರ್ಯ ತುಂಬಿದ ಮೇಯರ್: ಗುರುವಾರ ಪೈ ಬಡಾವಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸುವ ವೇಳೆ ರಾಜಕೀಯ ಮುಖಂಡರ ಬೆಂಬಲಿಗರಿಂದ ಹಲ್ಲೆಗೆ ಒಳಗಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭೇಟಿ ಮಾಡಿದ ಮೇಯರ್ ಆರ್.ಸಂಪತ್ರಾಜ್, ಅವರಲ್ಲಿ ಧೈರ್ಯ ತುಂಬಿ ನಿಮ್ಮ ಜತೆ ನಾವಿದ್ದೇವೆ.
ಯಾವುದಕ್ಕೂ ಹೆದರವ ಅಗತ್ಯವಿಲ್ಲ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೈಕೋರ್ಟ್ ಸೂಚನೆ ನಂತರವೂ ವಾರ್ತೂರು ವಾರ್ಡ್ನಲ್ಲಿ ಫ್ಲೆಕ್ಸ್ಗಳನ್ನು ತೆರವುಗೊಳಿಸಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ವರ್ತೂರು ವಾರ್ಡ್ಗೆ ಭೇಟಿ ನೀಡಿದ ಮೇಯರ್, ಫ್ಲೆಕ್ಸ್ ತೆರವುಗೊಳಿಸಲು ಮುಂದಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಾರ್ಡ್ನಲ್ಲಿ ಹಾಕಲವಾಗಿರುವ ಎಲ್ಲ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಕೂಡಲೇ ತೆರವುಗೊಳಿಸಬೇಕು. ನಂತರವೂ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ದೂರು ದಾಖಲಿಸಿ ವಾಟ್ಸ್ಆ್ಯಪ್ ಮೂಲಕ ದೂರು ಪ್ರತಿಯನ್ನು ತಮಗೆ ಕಳುಹಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಫ್ಲೆಕ್ಸ್ ಮುದ್ರಣ ಮಳಿಗೆಗಳ ವಿರುದ್ಧ ಕೈಗೊಂಡ ಕ್ರಮಗಳ ವಿವರ
ವಲಯ ವಶಕ್ಕೆ ಪಡೆದ ಫ್ಲೆಕ್ಸ್(ಕೆ.ಜಿ) ಮಳಿಗೆಗೆ ಬೀಗ ನೋಟಿಸ್ ಪಡೆದ ಮಳಿಗೆಗಳು ದಂಡ
-ಪಶ್ಚಿಮ 780 6 6 35,000
-ಪೂರ್ವ 8,500 11 0 50,000
-ದಕ್ಷಿಣ 80 2 2 0
-ಬೊಮ್ಮನಹಳ್ಳಿ 5,000 6 2 0
-ದಾಸರಹಳ್ಳಿ 2,200 0 0 0
-ಆರ್ಆರ್ನಗರ 0 5 0 0
-ಯಲಹಂಕ 2,000 0 0 0
-ಮಹದೇವಪುರ 260 6 0 7,000
-ಒಟ್ಟು 18,820 36 10 92,000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ