ಶಾಲಾ ಮಕ್ಕಳ ಸುರಕ್ಷತೆಗೆ ಲೋಕಾಸಕ್ತಿ
Team Udayavani, Jan 31, 2019, 5:44 AM IST
ಬೆಂಗಳೂರು: ಮಕ್ಕಳ ಸುರಕ್ಷತಾ ನಿಯಮಗಳನ್ನು ಪಾಲಿಸದ ಖಾಸಗಿ ಶಾಲೆಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ, ಬೆಂಗಳೂರು ನಗರ ವ್ಯಾಪ್ತಿಯ ಖಾಸಗಿ ಶಾಲೆಗಳ ಪೈಕಿ ಶೇ.10ರಷ್ಟು ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ (ಎಡಿಜಿಪಿ) ಸೂಚಿಸಿದ್ದಾರೆ.
ಭೇಟಿ ನೀಡುವ ಖಾಸಗಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ನೀತಿ-2016ರ ಅನ್ವಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿಯೇ? ಇಲ್ಲವೇ? ಮಕ್ಕಳ ಸುರಕ್ಷಾ ಸಮಿತಿ ರಚನೆಯಾಗಿಯೇ? ಮಕ್ಕಳ ಭದ್ರತೆ ಬಗ್ಗೆ ಶಾಲೆಗಳ ಕ್ರಮಗಳೇನು? ಹಾಗೂ ಶಾಲಾ ಸಿಬ್ಬಂದಿ ಹಿನ್ನೆಲೆ, ಶಾಲಾ ವಾಹನಗಳ ಸುರಕ್ಷತೆ ಸೇರಿ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.
ಖಾಸಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡದಿರುವ ಕುರಿತು ‘ಮಕ್ಕಳ ಸುರಕ್ಷಾ ನಿಯಮಗಳಿಗೆ ಕಿಮ್ಮತ್ತು ನೀಡದ ಖಾಸಗಿ ಶಾಲೆಗಳು’ ಎಂಬ ಶೀರ್ಷಿಕೆಯಡಿ 2018ರ ಜುಲೈ 2ರಂದು ‘ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ, ಲೋಕಾಯುಕ್ತ ಸಂಸ್ಥೆ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ಸಂಬಂಧ ಈಗಾಗಲೇ ಬೆಂಗಳೂರು ನಗರದಲ್ಲಿರುವ ಖಾಸಗಿ ಶಾಲೆಗಳ ಪಟ್ಟಿ ಸಿದ್ಧಪಡಿಸಿ ಕೊಂಡಿರುವ ಲೋಕಾಯುಕ್ತ ಪೊಲೀಸರು, ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ. ಈ ಪೈಕಿ ಶೇ.10ರಷ್ಟು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ಕಾಲವಕಾಶ ಬೇಕಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಬಳಿ ಪೊಲೀಸರು ಮನವಿ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಮತ್ತೂಂದೆಡೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳು ಕೈಗೊಂಡಿರುವ ಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಲೋಕಾಯುಕ್ತ ಸಂಸ್ಥೆಗೆ ವರದಿ ಸಲ್ಲಿಸಿದ್ದಾರೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿ ಕಾರಿಗಳು ವರದಿ ಸಲ್ಲಿಸಿದ್ದು, ನಾಲ್ಕು ತಾಲೂಕುಗಳ 236 ಖಾಸಗಿ ಶಾಲೆಗಳ ಪೈಕಿ ದೊಡ್ಡಬಳ್ಳಾಪುರದ ಖಾಸಗಿ ಶಾಲೆಯೊಂದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲೇ ಸಮಿತಿಯಿಲ್ಲ: ಬೆಂಗಳೂರು ಉತ್ತರ ಜಿಲ್ಲಾ ವ್ಯಾಪ್ತಿಯ ವಲಯ 1, ವಲಯ 2, ವಲಯ 3 ಹಾಗೂ ವಲಯ 4ರಲ್ಲಿ 1.477 ಖಾಸಗಿ ಅನುದಾನರಹಿತ ಶಾಲೆಗಳಿದ್ದು, ಈ ಪೈಕಿ ವಲಯ 4ರ ಎರಡು ಶಾಲೆಗಳು ಮಾತ್ರ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿಕೊಂಡಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ ವಲಯ 1, ವಲಯ 2, ವಲಯ 3, ವಲಯ 4 ಮತ್ತು ಆನೇಕಲ್ ತಾಲೂಕಿನಲ್ಲಿ 953 ಸರ್ಕಾರಿ, 309 ಅನುದಾನಿತ ಹಾಗೂ 2.231 ಅನುದಾನರಹಿತ ಸೇರಿ ಒಟ್ಟು 3.493 ಶಾಲೆಗಳಿವೆ. ಈ ಪೈಕಿ 3.179 ಶಾಲೆಗಳು ಸಮಿತಿ ರಚಿಸಿಕೊಂಡಿದ್ದು, ಆನೇಕಲ್ನ 36 ಸರ್ಕಾರಿ ಶಾಲೆಗಳಲ್ಲೇ ಮಕ್ಕಳ ರಕ್ಷಣಾ ಸಮಿತಿ ರಚಿಸಿಕೊಂಡಿಲ್ಲ ಎಂದು ವರದಿಯಲ್ಲೇ ಉಲ್ಲೇಖೀಸಲಾಗಿದೆ. 2018ರ ಜುಲೈ 2ರಂದು ‘ಉದಯವಾಣಿ’ ಪ್ರಕಟಿಸಿದ್ದ ವಿಶೇಷ ವರದಿ.
ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಸೂಚನೆ
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಎಲ್ಲ ಉಪ ನಿರ್ದೇಶಕರಿಗೂ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವಸ್ತುನಿಷ್ಠ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿ ಶಾಲಾ ಮುಖ್ಯಸ್ಥರಿಂದ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡಬೇಕು ಮತ್ತು ಅನುಪಾಲನಾ ವರದಿ ಸಲ್ಲಿಸಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಇಲಾಖಾ ತರಬೇತಿಗಳನ್ನು ನೀಡುವ ಮಾದರಿಯಲ್ಲಿಯೇ ಖಾಸಗಿ ಶಾಲಾ ಶಿಕ್ಷಕರುಗಳಿಗೂ ಸಹ ಆಯಾ ಆಡಳಿತ ಮಂಡಳಿ ಯಿಂದ ತರಬೇತಿಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡುವುದು, ಸರ್ಕಾರಿ ಶಾಲೆಗಳ ಎಸ್ಡಿಎಂ ಸಮಿತಿಗಳ ಕಾರ್ಯನಿರ್ವಹಣೆ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸುವುದು, ಖಾಸಗಿ ಶಾಲೆಗಳಲ್ಲಿ ಪೋಷಕ-ಶಿಕ್ಷಕ ಸಮಿತಿಯ ಸಭೆಯು ನಿಯಮಿತವಾಗಿ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಪಾಲಿಸಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆದು ಖಾತ್ರಿ ಪಡಿಸಿಕೊಂಡು ವರದಿಯನ್ನು ಸಲ್ಲಿಸಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.
ವರದಿಯಲ್ಲಿ ಏನಿರಬೇಕು?
•ಖಾಸಗಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ನೀತಿ-2016ರ ಅನ್ವಯ ಸುರಕ್ಷತಾ ಕ್ರಮಗಳ ಅನುಷ್ಠಾನವಾಗಿದೆಯೇ?
•ಮಕ್ಕಳ ಸುರಕ್ಷಾ ಸಮಿತಿ ರಚನೆಯಾಗಿಯೇ?
•ಮಕ್ಕಳ ಭದ್ರತೆ ಕುರಿತಂತೆ ಶಾಲೆಗಳು ಕೈಗೊಂಡಿರುವ ಕ್ರಮಗಳೇನು?
•ಶಾಲಾ ಸಿಬ್ಬಂದಿ ಹಿನ್ನೆಲೆ, ಶಾಲಾ ವಾಹನಗಳ ಸುರಕ್ಷತೆ ಸೇರಿ ಪ್ರಮುಖ ಮಾಹಿತಿ ಸಂಗ್ರಹ
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ