ಮಹದಾಯಿ ಬಿಜೆಪಿಗೆ ತಿರುಗುಬಾಣ:ದಿನೇಶ್ ಗುಂಡೂರಾವ್
Team Udayavani, Dec 25, 2017, 7:10 AM IST
ಬೆಂಗಳೂರು: ಮಹದಾಯಿ ನದಿ ನೀರಿನ ವಿವಾದ ಬಿಜೆಪಿಗೆ ತಿರುಗು ಬಾಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೆ.ಆರ್.ಪುರಂ ವಾರ್ಡ್ನ ಮಾಜಿ ಕಾರ್ಪೊರೇಟರ್ ಮಂಜುಳಾ ದೇವಿಯನ್ನು ಪಕ್ಷಕ್ಕೆ ಸೇರಿಸಿಕೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಹದಾಯಿ ವಿವಾದ ಬಗೆಹರಿಸಿದೆ ಎಂದು ಹೇಳಿ ಅದರ ಲಾಭ ಪಡೆಯಲು ಮುಂದಾಗಿದ್ದರು. ಆದರೆ, ಈಗ ಅವರಿಗೆ ತಿರುಗುಬಾಣವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ
ಮಹದಾಯಿ ವಿವಾದ ಕೇವಲ ಯಾವುದೋ ಒಂದು ರಾಜಕೀಯ ಪಕ್ಷದ ವಿಚಾರವಲ್ಲ. ಇಡೀ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ್ದು, ಈ ವಿಚಾರವಾಗಿ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಅಗತ್ಯ ಬಿದ್ದರೆ, ಪ್ರಧಾನಿ ಬಳಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಮಧ್ಯಸ್ಥಿಗೆ ವಹಿಸುವಂತೆ ಮನವಿ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.
28 ಕ್ಕೆ ಸಂಸ್ಥಾಪನಾ ದಿನ:ಡಿ. 28 ರಂದು ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಆಚರಿಸಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ. ಈ ಕುರಿತು ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಭಾನುವಾರ ಸಭೆ ನಡೆಸಲಾಗಿದ್ದು, ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಪಾಲ್ಗೊಂಡಿದ್ದರು. ಅಂಬೇಡ್ಕರ್ ಭವನದಲ್ಲಿ ಸಂಸ್ಥಾಪನಾ ದಿನ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.