ಮಹದಾಯಿ ತೀರ್ಪಿನ ಬಳಿಕ ಕಾಮಗಾರಿ ಶುರು
Team Udayavani, Jul 13, 2018, 7:00 AM IST
ವಿಧಾನಸಭೆ: ಮಹದಾಯಿ ನ್ಯಾಯಮಂಡಳಿಯ ತೀರ್ಪು ಬಂದ ತಕ್ಷಣ ಯೋಜನೆಯನ್ನು ಕೈಗೆತ್ತಿಕೊಂಡು
ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಬಜೆಟ್ ಮೇಲಿನ ಉತ್ತರಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಸ್ಪಷ್ಟನೆ ಕೋರಿ, ಮಹದಾಯಿ ನ್ಯಾಯ
ಮಂಡಳಿ ತೀರ್ಪು ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬರಲಿದ್ದು, ರಾಜ್ಯಕ್ಕೆ ಕನಿಷ್ಠ 25 ಟಿಎಂಸಿ ನೀರು ದೊರೆಯಲಿದೆ. ಈ ಬಗ್ಗೆ ಆ ಭಾಗದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ನ್ಯಾಯಮಂಡಳಿ ತೀರ್ಪು ಬಂದ ತಕ್ಷಣ ಯೋಜನೆ ಆರಂಭಿಸಲು ರಾಜ್ಯ ಸರ್ಕಾರ ಬಜೆಟ್ನಲ್ಲಿ 200 ಕೋಟಿ ರೂ.ಮೀಸಲಿಡುವಂತೆ ಮನವಿ ಮಾಡಿದರು.ಅವರ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮಹದಾಯಿ ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಕಾಮಗಾರಿ ಆರಂಭಿಸುವ ಕುರಿತಂತೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ನ್ಯಾಯಮಂಡಳಿ ತೀರ್ಪು ಪ್ರಕಟಗೊಂಡ ತಕ್ಷಣವೇ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.