ಜೆಡಿಎಸ್ ಪರ ಮಾಯಾವತಿ, ಓವೈಸಿ ಪ್ರಚಾರ
Team Udayavani, May 4, 2018, 11:45 AM IST
ಬೆಂಗಳೂರು: ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ರಾಜ್ಯದಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಲಿದ್ದಾರೆ. ಅಸಾದುದ್ದೀನ್ ಓವೈಸಿ ಅವರು ಶುಕ್ರವಾರ (ಮೇ 4) ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 7 ಮತ್ತು 8ರಂದು ಶಾಂತಿನಗರ ಮತ್ತು ಪುಲಿಕೇಶಿನಗರಗಳಲ್ಲಿ ಪ್ರಚಾರಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, ರ್ಯಾಲಿಯನ್ನೂ ಹಮ್ಮಿಕೊಳ್ಳಲಿದ್ದಾರೆ. ಬಿಎಸ್ಪಿ ನಾಯಕಿ ಮಾಯಾವತಿ ಅವರು ಮೇ 5ರ ಶನಿವಾರ ಹೆಬ್ಟಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಟಿ.ನಗರ ಮೈದಾನದಲ್ಲಿ ಹಾಗೂ ಮೇ 6ರಂದು ರಾಯಚೂರು ಮತ್ತು ಬೀದರ್ಗಳಲ್ಲಿ ಜೆಡಿಎಸ್-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇಂದಿನಿಂದ ವಿಕಾಸ ಪರ್ವ ವಾಹಿನಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಕಾಸರ್ಪ ಹೆಸರಿನಲ್ಲಿ ರಾಜ್ಯಾದ್ಯಂತ ಯಾತ್ರೆ ಕೈಗೊಂಡಿದ್ದರೆ, ಇತ್ತ ಬೆಂಗಳೂರಿನಲ್ಲಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರಕಾಶ್ ನೇತೃತ್ವದಲ್ಲಿ ಶುಕ್ರವಾರದಿಂದ ವಿಕಾಸ ಪರ್ವ ವಾಹಿನಿ ಸಂಚರಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ ಟಿ.ಎ.ಶರವಣ, ಬೆಂಗಳೂರು ನಗರಕ್ಕಾಗಿ ಜೆಡಿಎಸ್ ಈಗಾಗಲೇ ವಿಕಾಸ ಪರ್ವ ವಾಹಿನಿ ಸಿದ್ಧಪಡಿಸಲಾಗಿದೆ. ಶುಕ್ರವಾರದಿಂದ ಮೇ 10ರವರೆಗೆ ನಗರದ ಎಲ್ಲಾ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಈ ವಾಹಿನಿ ಸಂಚರಿಸಲಿದ್ದು, ಈ ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳುವ ಕಾರ್ಯಕ್ರಮಗಳ ಕುರಿತು ಜನರಿಗೆ ವಿವರಿಸಲಾಗುವುದು ಎಂದು ಹೇಳಿದರು.