ಮೀ ಟೂ: ಮೋನಿಕಾ, ಕಿರಣ್ ವಿಚಾರಣೆಗೆ ಹಾಜರು
Team Udayavani, Oct 31, 2018, 6:00 AM IST
ಬೆಂಗಳೂರು: ನಟಿ ಶೃತಿ ಹರಿಹರನ್ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹಾಗೂ ಮ್ಯಾನೇಜರ್ ಕಿರಣ್ ಮಂಗಳವಾರ ಕಬ್ಬನ್ ಪಾರ್ಕ್ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು. ಶೃತಿ ಹರಿಹರನ್ ದೂರಿನಲ್ಲಿ ಮೋನಿಕಾ, ಮ್ಯಾನೇಜರ್ಗಳಾದ ಕಿರಣ್ ಮತ್ತು ಬೋರೆಗೌಡರ ಹೆಸರು ಉಲ್ಲೇಖೀಸಿದ್ದರು. ಈ ಹಿನ್ನೆಲೆಯಲ್ಲಿ ಈ ಮೂವರು ಸೇರಿ ಐವರು ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ಪಾರ್ಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಮಂಗಳವಾರ ಶೃತಿ ಹರಿಹರನ್ ಮ್ಯಾನೇಜರ್ ಕಿರಣ್ ಮತ್ತು ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಹಾಜರಾದರು. ಬಳಿಕ ಇಬ್ಬರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಸುಮಾರು ಒಂದೂವರೆ ಗಂಟೆಗಳ ಕಾಲ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತ್ತೆ ಠಾಣೆಗೆ ಕರೆತಂದು ಮತ್ತೂಮ್ಮೆ ಹೇಳಿಕೆಯನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ವಿಸ್ಮಯ ಚಿತ್ರದ ಮತ್ತೂಬ್ಬ ಸಹ ನಿರ್ದೇಶಕ ಭರತ್ ನೀಲಕಂಠ ಮತ್ತು ಶೃತಿ ಹರಿಹರನ್ ಆಪ್ತ ಸಹಾಯಕ
ಬೋರೇಗೌಡ ಒಂದೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಪೊಲೀಸರು ಹೇಳಿದರು.
ಶೃತಿ ಹರಿಹರನ್ ಸಿನಿಮಾ ಚಿತ್ರೀಕರಣದ ವೇಳೆ ಆದ ಅನುಭವವನ್ನು ತಮ್ಮ ಬಳಿ ಹೇಳಿಕೊಂಡಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ರೋಮ್ಯಾಂಟಿಕ್ ದೃಶ್ಯದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ನನಗೆ ಬೇಜಾರಾಗಿದೆ ಎಂದು ಹೇಳಿಕೊಂಡರು ಎಂದು ಕಿರಣ್ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಚಿತ್ರದ ಸಹ ನಿರ್ದೇಶಕಿ ಮೋನಿಕಾ, ಶೃತಿ ಸೆಟ್ನಲ್ಲಿ ಆದ ಘಟನೆಗಳ ಬಗ್ಗೆ ನನ್ನ ಬಳಿ ಹೇಳಿಕೊಂಡರು. ಆದರೆ, ಇದು ನನಗೆ ಅನಗತ್ಯ ಎಂದು ಭಾವಿಸಿ ಹೆಚ್ಚು ಗಮನ ಹರಿಸಲಿಲ್ಲ ಎಂದು ಹೇಳಿರುವುದಾಗಿ ಪೊಲೀಸರು ಹೇಳಿದರು. ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶೃತಿ ಪರ ವಕೀಲ ಅನಂತ್ ನಾಯಕ್, ಒಂದು ವೇಳೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯದಿದ್ದರೆ, ಗೃಹ ಸಚಿವರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಆರೋಪಿಯನ್ನು ಪೊಲೀಸರು ರಕ್ಷಣೆ ಮಾಡಬಾರದು. ಶೃತಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಪ್ರಶಾಂತ್ ಸಂಬರಗಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ, ಇದುವರೆಗೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ನ.2ಕ್ಕೆ ವಿಚಾರಣೆ ಮುಂದೂಡಿಕೆ
ನಟಿ ಶೃತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಹಾಗೂ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸುವ ಕುರಿತ ಅರ್ಜಿ ವಿಚಾರಣೆಯನ್ನು ಮೆಯೋಹಾಲ್ನ ಸಿಸಿಎಚ್ ನ್ಯಾಯಾಲಯ ನ.2ಕ್ಕೆ ಮುಂದೂಡಿದೆ. ಅರ್ಜುನ್ ಸರ್ಜಾ ಅವರು “ವಿಸ್ಮಯ’ ಸಿನಿಮಾ ಚಿತ್ರೀಕರಣದ ವೇಳೆ ನಟಿ ಶೃತಿ ಹರಿಹರನ್ಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ
ಮೀ ಟೂ ಅಭಿಯಾನದ ಮೂಲಕ ಶೃತಿ ಹರಿಹರನ್ ಬಹಿರಂಗಪಡಿಸಿದ್ದರು. ಇದನ್ನು ವಿರೋಧಿಸಿ ಸರ್ಜಾ ಅಳಿಯ ಧೃವ ಸರ್ಜಾ ಶೃತಿ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ , ಮಾನ ಹಾನಿಕಾರ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿ ಸಿದ್ದರು. ಈ ಅರ್ಜಿಗಳನ್ನು ವಜಾ ಗೊಳಿಸುವಂತೆ ಶೃತಿ ಪರ ವಕೀಲೆ ಜೈನಾ ಕೊಥಾರಿ ಅ.29ರಂದು 14
ಪುಟಗಳ ಲಿಖೀತ ವಾದ ಮಂಡಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಮೆಯೋಹಾಲ್ ನ್ಯಾಯಾಲಯದ ನ್ಯಾ.ಬಿ.ನಾರಾಯಣಪ್ಪ ಮಂಗಳವಾರಕ್ಕೆ (ಅ.30) ಮುಂದೂಡಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ವೇಳೆ ಅರ್ಜಿ ಕುರಿತು ಉತ್ತರಿಸಲು ಸಮ
ಯಾವಕಾಶ ನೀಡಬೇಕು ಎಂದು ಅರ್ಜುನ್ ಸರ್ಜಾ ಪರ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ.2ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಸರ್ಜಾಗೆ ಮುಂಗಡ ಹಣ ವಾಪಸ್: ಚೇತನ್
ಬೀದರ: ಸಿನಿಮಾ ನಟನೆಗೆ ಮುಂಗಡವಾಗಿ ಪಡೆದಿದ್ದ ಹಣವನ್ನು ನಟ ಅರ್ಜುನ್ ಸರ್ಜಾ ಅವರಿಗೆ ವಾಪಸ್ ನೀಡುತೇ¤ನೆ. ತಾನು ಹಣ ಗಳಿಸಲು ಸಿನಿಮಾಕ್ಕೆ ಬಂದಿಲ್ಲ. ಸಮಾಜ ಸೇವೆಗಾಗಿ ಸಿನಿಮಾಕ್ಕೆ ಬಂದಿದ್ದೇನೆ ಎಂದು ನಟ ಚೇತನ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಡ ಹಣ ನೀಡಿರುವ ಕುರಿತು ಫಿಲ್ಮ್ ಚೇಂಬರ್ಗೆ ಸರ್ಜಾ ದೂರು ನೀಡಿರುವ ಕುರಿತು ಗಮನಕ್ಕೆ ಬಂದಿದೆ. ಬೆಂಗಳೂರಿಗೆ ತೆರಳಿದ ನಂತರ ಮುಂಗಡ ಹಣ ಕೊಡುತ್ತೇನೆ. ಸರ್ಜಾ ಅವರೇ ನೇರವಾಗಿ
ಕೇಳಿದ್ದರೂ ಹಣ ವಾಪಸ್ ಕೊಡುತ್ತಿದ್ದೆ. ಇವಾಗಷೇr ಅವರು ಫಿಲಂ ಚೇಂಬರ್ಗೆ ದೂರು ನೀಡಿದ್ದಾರೆ. ಆದರೆ ಈ ಮೊದಲೇ ದೂರು ನೀಡಿದ್ದೇನೆಂದು ಸುಳ್ಳು ಹೇಳಿದ್ದಾರೆ. ಈ ರೀತಿ ಮಾಡುವುದರಿಂದ ಅವರ ಮೇಲಿನ ಗೌರವ ಕಡಿಮೆಯಾಗುತ್ತದೆ. ಹಣ ಮರಳಿ
ಸುವುದರಲ್ಲಿ ತನಗೆ ಯಾವುದೇ ಸಮಸ್ಯೆಯಿಲ್ಲ ಎಂದರು. ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ನಡುವಿನ
ಮೀ ಟೂ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಕಾನೂನು ಹೋರಾಟ ನಡೆಯುತ್ತಿದೆ. ನ್ಯಾಯಾಂಗದ ಮೇಲೆ ತಮಗೆ ಭರವಸೆಯಿದೆ. ಇತ್ತೀಚಿನ ದಿನಗಳಲ್ಲಿ ಮೀ ಟೂ ಆರೋಪಗಳು ಹೆಚ್ಚಾಗುತ್ತಿದ್ದು, ಆರೋಪಗಳು ಬಂದ ನಂತರ ಅವುಗಳ ಸತ್ಯ ಸಂಗತಿ ಕುರಿತು ಪರಿಶೀಲಿಸುವ ಅವಶ್ಯಕತೆ ಹೆಚ್ಚಿದೆ ಎಂದರು.