ನಟರಾಜ್ ಹತ್ಯೆ ಹಿಂದೆಪೆಟ್ಟಿಕೋಟ್ ಕೈವಾಡ
Team Udayavani, Jan 18, 2018, 12:38 PM IST
ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ ನಟರಾಜ್ ಹತ್ಯೆ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಅಕ್ರಮ ಪಾಲುದಾರ ಪೆಟ್ಟಿಕೋಟ್ ಚಂದ್ರಪ್ಪ ಅವರ ಕುಮ್ಮಕ್ಕಿದೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಕೆಜಿ ರಸ್ತೆಯಲ್ಲಿರುವ ಗುಪ್ತಾ ಮಾರ್ಕೆಟ್ನ ಪೆಟ್ಟಿಕೋಟ್ ಚಂದ್ರಪ್ಪನ ಜತೆ ದಿನೇಶ್ ಗುಂಡೂರಾವ್ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವುದನ್ನು ಎಸ್. ನಟರಾಜ್ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಈ ಹಿನ್ನೆಲೆಯಲ್ಲಿ ಪೆಟ್ಟಿಕೋಟ್ ಚಂದ್ರಪ್ಪ, ನಟರಾಜ್ ಮೇಲೆ ದ್ವೇಷ ಸಾಧಿಸುತ್ತಿದ್ದರು. ಹೀಗಾಗಿ 2011ರ ಅ.1ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ನಟರಾಜ್ ಕೊಲೆ ಮಾಡಲಾಗಿತ್ತು ಎಂದು ರಮೇಶ್ ಆರೋಪಿಸಿದ್ದಾರೆ. ನಟರಾಜ್ ಹತ್ಯೆ ಆರೋಪದಲ್ಲಿ 11 ಜನರನ್ನು ಬಂಧಿಸಲಾಗಿತ್ತು. ಈ ಕೊಲೆಯ ಸತ್ಯ ಹೊರ ಬರಲು ಪಾಲ್, ಮುರುಗನ್, ಮಣಿ, ಅಶೋಕ್ ಬಿ. ದಾನಿ, ಪೆಟ್ಟಿಕೋಟ್ ಚಂದ್ರಪ್ಪ ಮತ್ತು ವೈಯಾಲಿ ಕಾವಲ್ ಶಾಂತಿ ಎನ್ನುವವರನ್ನು ಮಂಪರು ಪರೀಕ್ಷೆಗೆ ಒಳ ಪಡಿಸಬೇಕೆಂದು ಆಗ್ರಹಿಸಿದ್ದಾರೆ.