ಶೌಚಾಲಯದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ
Team Udayavani, May 2, 2019, 3:06 AM IST
ಬೆಂಗಳೂರು: ಬಾಣಸವಾಡಿಯ ಕೆಎಸ್ಎಫ್ಸಿ ಲೇಔಟ್ನಲ್ಲಿರುವ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಯುತ್ತಿದ್ದು, ಕಟ್ಟಡ ಮಾಲೀಕರು, ಬಾಡಿಗೆದಾರರು ಹಾಗೂ ಮಹಿಳೆಯರ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೆಎಸ್ಎಫ್ಸಿ ಲೇಔಟ್ನ ಆಯಿಲ್ ಮಿಲ್ ರಸ್ತೆಯಲ್ಲಿ ಲೋಕೇಶ್ ಎಂಬವರಿಗೆ ಸೇರಿದ ಎರಡು ಅಂತಸ್ತಿನ ಕಟ್ಟಡದಲ್ಲಿ ಸುಮಾರು ಐದಕ್ಕೂ ಹೆಚ್ಚು ಮನೆಗಳಿವೆ. ಮೊದಲ ಅಂತಸ್ತಿನಲ್ಲಿ ಕಾಮನ್ ಟಾಯ್ಲೆಟ್ ಇದ್ದು, ಇದನ್ನು ಯಾರೂ ಅಷ್ಟಾಗಿ ಬಳಸುವುದಿಲ್ಲ.
ಈ ಮಧ್ಯೆ ಮೂರು ದಿನಗಳ ಹಿಂದೆ, ನವಜಾತ ಶಿಶುವನ್ನು ಯಾರೋ ಶೌಚಾಲಯದಲ್ಲಿ ಮಲಗಿಸಿ, ಬಾಗಿಲ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾರೆ. ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ಶೌಚಾಲಯದಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಬಾಡಿಗೆದಾರರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಮಾಲೀಕ ಲೋಕೇಶ್ ಶೌಚಾಲಯದ ಬಾಗಿಲು ತೆರೆದಾಗ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ಆತಂಕಗೊಂಡ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿ, ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪರೀಕ್ಷಿಸಿದ ವೈದ್ಯರು ಮೂರು ದಿನಗಳ ಹಿಂದೆಯೇ ಮಗುವಿನ ಜನನವಾಗಿದ್ದು, ಉಸಿರುಗಟ್ಟಿ ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ಪೊಲೀಸರು ಹೇಳಿದರು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಹೆಣ್ಣು ಶಿಶು ಪತ್ತೆ: ಮತ್ತೂಂದು ಪ್ರಕರಣದಲ್ಲಿ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋದ ಘಟನೆ ಮಂಗಳವಾರ ತಡರಾತ್ರಿ ಕೆ.ಪಿ.ಅಗ್ರಹಾರದ 24ನೇ ಕ್ರಾಸ್ನಲ್ಲಿ ನಡೆದಿದೆ.
ತಡರಾತ್ರಿ ಮಗು ಅಳುವುದನ್ನು ಕೇಳಿ, ಹೊರಗೆ ಬಂದ ಪಕ್ಕದ ಮನೆಯವರು, ಮಗು ನೋಡಿ ಸ್ಥಳೀಯರನ್ನು ಎಚ್ಚರಿಸಿ ವಿಚಾರಿಸಿದ್ದಾರೆ. ಆದರೆ, ಯಾರಿಂದಲೂ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ.
ನಂತರ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೂಡ ಕೊಡಿಸಿದ್ದಾರೆ. ಬುಧವಾರ ಮಧ್ಯಾಹ್ನ ಈ ವಿಚಾರ ತಿಳಿದ ಕೆ.ಪಿ.ಅಗ್ರಹಾರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಮಗುವನ್ನು ವಶಕ್ಕೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸುಪರ್ದಿಗೆ ಕೊಡಲಾಗುವುದು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೆ.ಪಿ.ಅಗ್ರಹಾರ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..