ನಿಖಿಲ್ ನಾಮಪತ್ರ ಕುರಿತು ತನಿಖೆಗೆ ಒತ್ತಾಯ
Team Udayavani, Apr 14, 2019, 3:00 AM IST
ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸಲ್ಲಿಸಿರುವ ನಾಮಪತ್ರ ದೋಷಪೂರಿತವಾಗಿದೆ. ಅವರ ವಿರುದ್ಧ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಆಗ್ರಹಿಸಿದರು.
ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆಲವರು ವಿನಾಕಾರಣ ಸುಮಲತಾ ಅಂಬರೀಶ್ ಮತ್ತು ಯಶ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಯಶ್ ಮನೆಬಾಡಿಗೆ ಕಟ್ಟಿಲ್ಲ ಎನ್ನುವ ನಿಖಿಲ್ ಅವರೇ ಕಂಠೀರವ ಸ್ಟುಡಿಯೋ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
“ನೈಸ್ ಯೋಜನೆಯಿಂದ ಸಾವಿರಾರು ರೈತರು ಬೀದಿಗೆ ಬಿದ್ದಿದ್ದಾರೆ. ಈ ಯೋಜನೆಯಡಿ 20,193 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದರಿಂದ ಹಲವು ರೈತರ ಬದುಕು ಬೀದಿಗೆ ಬಿದ್ದಿದೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರು, ಈ ಯೋಜನೆಯ ಮೂಲಕ 18 ಸಾವಿರ ಎಕರೆ ಭೂಮಿ ಖಾಸಗಿ ಪಾಲಾಗುವಂತೆ ನೋಡಿಕೊಂಡಿದ್ದು, ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ’ಎಂದು ದೂರಿದರು.