ರಾಜ್ಯದ ಹಲವೆಡೆ ಸಾಧಾರಣ ಮಳೆ
Team Udayavani, Apr 17, 2018, 6:45 AM IST
ಬೆಂಗಳೂರು: ರಾಜ್ಯದಲ್ಲಿ ಸತತ ಎರಡನೇ ದಿನ ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಒಳನಾಡಿನಲ್ಲಿ ಇನ್ನೂ ಎರಡು- ಮೂರು ದಿನ ಇದು ಮುಂದುವರಿಯುವ ಸಾಧ್ಯತೆಯಿದೆ.
ಮಧ್ಯ ಮಹಾರಾಷ್ಟ್ರ-ತಮಿಳುನಾಡು ನಡುವೆ ಕಡಿಮೆ ಒತ್ತಡದ ತಗ್ಗು ಪ್ರದೇಶ (ಟ್ರಫ್) ಉಂಟಾಗಿದ್ದು, ಇದು ರಾಜ್ಯದ ಒಳನಾಡು ಪ್ರದೇಶದ ಮೂಲಕ ಹಾದುಹೋಗಿದೆ.
ಇದರಿಂದ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಎರಡು-ಮೂರು ದಿನಗಳು ಇದೇ ವಾತಾವರಣ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.
ಈ ಮಧ್ಯೆ ಸೋಮವಾರ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಳೆಯಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಹಾಸನ, ಶಿವಮೊಗ್ಗ, ಕೊಡಗು ಸುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆ ಬಿದ್ದಿದೆ.
ಮಳೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದ್ದು, ಜನ ನಿಟ್ಟುಸಿರುಬಿಡುವಂತಾಗಿದೆ. ಗದಗ, ಕಲಬುರಗಿ,ವಿಜಯಪುರ, ರಾಯಚೂರು, ಬಳ್ಳಾರಿಯಲ್ಲಿ ಸಾಮಾನ್ಯಕ್ಕಿಂತ ತಾಪಮಾನ 2 ಡಿ.ಸೆ.ನಷ್ಟು ಇಳಿಮುಖವಾಗಿದೆ.
ಸಿಡಿಲು ಬಡಿದು ಮೂವರ ಸಾವು
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹುಣಸಿಹಳ್ಳಿಯಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ರೇವಣಸಿದ್ದಪ್ಪ (18) ಎಂಬುವರು ಮೃತಪಟ್ಟಿದ್ದಾರೆ.
ಕುರಿ ಹಾಗೂ ಮೇಕೆಗಳನ್ನು ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿಯಿತು. ಕೊಟ್ಟೂರು ತಾಲೂಕಿನ ಹನುಮನಹಳ್ಳಿಯಲ್ಲಿ ಸಿಡಿಲು ಬಡಿದು ಬಣಕಾರ ಲೋಕಪ್ಪ (45) ಮತ್ತು ಕಿರಣ (20) ಎಂಬುವರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.