ಬೆಂಗ್ಳೂರಲ್ಲೂ ಸಮ-ಬೆಸ
Team Udayavani, Nov 12, 2017, 10:56 AM IST
ಬೆಂಗಳೂರು: ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಮ-ಬೆಸ ಸಂಖ್ಯೆಯ ವಾಹನಗಳ ಓಡಾಡಕ್ಕೆ ಅವಕಾಶ
ಕಲ್ಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರು ಪ್ರಸ್ಕ್ಲಬ್ ಹಾಗೂ ವರದಿಗಾರರ ಕೂಟದಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಖ್ಯೆ ನಿಯಂತ್ರಣ ಅನಿವಾರ್ಯವಾಗಿದೆ. ದೆಹಲಿ ಮಾದರಿಯ ಸಮ ಬೆಸ ಸಂಖ್ಯೆಯ ಪ್ರಯೋಗದ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಅಲ್ಲಿನ ಯೋಜನೆಯ ಸಾಧಕ ಬಾಧಕ ತಿಳಿದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಾಹನಗಳಿಗೆ ಕರ್ಕಶ ಹಾರ್ನ್ಹಾಕಿಸಿದವರು, ವಿಚಿತ್ರ ರೀತಿ ನಂಬರ್ ಪ್ಲೇಟ್ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಸಚಿವರು, ಸರ್ಕಾರಗಳು ಬದಲಾದರೂ ಯೋಜನೆಗಳು ಮುಂದುವರಿಯಬೇಕು. ಆದರೆ, ನಮ್ಮಲ್ಲಿ ಹಾಗಾಗುತ್ತಿಲ್ಲ. ಎಸ್.ಎಂ.ಕೃಷ್ಣ ಅವಧಿಯಲ್ಲಿ ನಗರದ ರಸ್ತೆಗಳ ವಿಸ್ತರಣೆ
ನಡೆದಿತ್ತು. ನಂತರ ಈ ಕಾರ್ಯ ನಿಂತಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ನಗರದಲ್ಲಿ ಶೇ.99ರಷ್ಟು ಕಟ್ಟಡಗಳ ನಿರ್ಮಾಣದ ವೇಳೆ ನಿಯಮ ಉಲ್ಲಂಘನೆಯಾಗಿದೆ. ವಾಹನ ನಿಲುಗಡೆಗೆ ಸ್ಥಳ ಮೀಸಲಿಡದೆ ಮನೆ ಕಟ್ಟಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದರು.
ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿ ಪ್ರಜೆಗಳ ವಿಸಾರದ್ದು ಪಡಿಸಿ ಅವರ
ರಾಷ್ಟ್ರಗಳಿಗೆ ವಾಪಸ್ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೊಲಿಸ್ ಬೀಟ್ ವ್ಯವಸ್ಥೆ ಬದಲಿಸಿದ್ದು,
ಪ್ರತಿ ಪ್ರದೇಶದ ಜವಾಬ್ದಾರಿಯನ್ನು ಕಾನ್ ಸ್ಟೆಬಲ್ಗಳಿಗೆ ವಹಿಸಲಾಗಿದೆ. ಪೊಲೀಸರೊಂದಿಗೆ ನಾಗರಿಕ ಮಿತಿಗಳನ್ನೂ ರಚಿಸಿರುವುದು, ನಗರ ಪ್ರದೇಶದಲ್ಲಿ ನಡೆಯುವ ಸಣ್ಣ ಪುಟ್ಟ ಅಹಿತಕರ ಘಟನೆಗಳ ತಡೆಗೆ ನೆರವಾಗಿದೆ ಎಂದು ಮಾಹಿತಿ ನೀಡಿದರು.