ರಾಜ್ಯ ಮೈತ್ರಿ ಸರ್ಕಾರಕ್ಕಿಂದು ಒಂದು ವರ್ಷ
ಅಡೆ-ತಡೆ ನಡುವೆ ಸಾಗಿ ಬಂದ ಮೈತ್ರಿ | ಮತ್ತೆ ಎದುರಾಗಿದೆ ಲೋಕ ಫಲಿತಾಂಶದ ನಂತರದ ಆತಂಕ
Team Udayavani, May 23, 2019, 2:31 PM IST
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಗುರುವಾರಕ್ಕೆ ಒಂದು ವರ್ಷ ತುಂಬಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಹಾದಿ ಸುಲಭವಾಗಿರಲಿಲ್ಲ. ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ‘ಆಪರೇಷನ್ ಕಮಲ’ ಭೀತಿಯಲ್ಲೇ ಒಂದು ವರ್ಷ ಪೂರೈಸುತ್ತಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮತ್ತೆ ಏನಾಗುವುದೋ ಎಂಬ ಆತಂಕವೂ ಇದೆ.
ಇದರ ನಡುವೆಯೇ, ಸಮ್ಮಿಶ್ರ ಸರ್ಕಾರ ವಾಣಿಜ್ಯ ಹಾಗೂ ಸಹಕಾರ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ, ಹಿರಿಯರ ಮಾಸಾಶನ ಹೆಚ್ಚಳ, ಗರ್ಭಿಣಿಯರಿಗೆ ಆರು ತಿಂಗಳ ಮಾಸಾಶನ, ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು, ಸ್ತ್ರೀ ಶಕ್ತಿ ಸಂಘಟನೆಗಳಿಗೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುವ ಯೋಜನೆ, ಕುಡಿಯುವ ನೀರು ಪೂರೈಕೆಯ ಜಲಧಾರೆ ಯೋಜನೆಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಯತ್ನಿಸಿದೆ.
ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆಯೂ ಹಲವು ಯೋಜನೆಗಳನ್ನು ಕೈಗೊಂಡಿದ್ದು, ಆರು ಎಲಿವೇಟೆಡ್ ಕಾರಿಡಾರ್, ಸಿಗ್ನಲ್ ಫ್ರೀ ಕಾರಿಡಾರ್, ಸಬ್ ಅರ್ಬನ್ ರೈಲು, ಹೊರವರ್ತುಲ ರಸ್ತೆ , ಮೆಟ್ರೋ ವಿಸ್ತರಣಾ ಯೋಜನೆಗಳನ್ನು ರೂಪಿಸಿದೆ.
ಈ ಮಧ್ಯೆ, ಭೀಕರ ಬರ ಆವರಿಸಿದ್ದರಿಂದ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಅಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಬರ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.
ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸಮನ್ವಯ ಸಮಿತಿ ರಚಿಸಿ, ಸಮಾನ ಕನಿಷ್ಠ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಸಮಾನ ಕನಿಷ್ಠ ಕಾರ್ಯಕ್ರಮ ರಚನೆಯಾಗಿಲ್ಲ. ಸಮನ್ವಯ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಅವರ ಸೇರ್ಪಡೆ ಆಗದಿರುವುದೇ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ವಿಧಾನಸಭೆ ಚುನಾವಣೆ ನಂತರ ಎದುರಾದ ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಆದರೂ ಕೆಳ ಹಂತದಲ್ಲಿ ಸಮನ್ವಯತೆ ಇಲ್ಲದೆ ಒಲ್ಲದ ಮನಸ್ಸಿನಿಂದಲೇ ಒಟ್ಟಿಗೆ ಹೋಗುವಂತಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರದ ವಿದ್ಯಮಾನಗಳು ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಹೀಗಾಗಿ, ಎಲ್ಲರೂ ಫಲಿತಾಂಶದ ಚಿತ್ತ ನೆಟ್ಟಿದ್ದಾರೆ.
ಜನಪರ ಸರ್ಕಾರ: ಎಚ್ಡಿಕೆ
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹೊಂಗನಸಿನೊಂದಿಗೆ ನಮ್ಮ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಈ ಅವಧಿ ಯಲ್ಲಿ ನಾವು ಮಂಡಿಸಿದ ಎರಡು ಆಯವ್ಯಯಗಳು ನಮ್ಮ ಸರ್ಕಾರದ ಒಲವು- ನಿಲುವುಗಳು ಸಾಗಬೇಕಾದ ಹಾದಿಯನ್ನು ಸ್ಪಷ್ಟಪಡಿಸಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಅವಧಿಯಲ್ಲಿ ನಾವು ರೂಪಿಸಿದ ಕಾರ್ಯಕ್ರಮಗಳು ಜನರಲ್ಲಿ ಜನಪರ ಸರ್ಕಾರ, ರೈತರ ಪರವಾದ ಸರ್ಕಾರ ಎಂಬ ಭಾವನೆ ಮೂಡಿಸಿವೆ. ಎಲ್ಲ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸಿರುವುದು ತೃಪ್ತಿ ತಂದಿದೆ. ಜತೆಗೆ ನಮ್ಮ ಮುಂದಿನ ನಡೆಗೆ ಸ್ಫೂರ್ತಿಯೂ ಆಗಿದೆ. ರೈತರ ಸಾಲಮನ್ನಾ ವಿಚಾರದಲ್ಲಿ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದ್ದು, ಈಗಾಗಲೇ 15.5 ಲಕ್ಷ ರೈತರ ಸಾಲಮನ್ನಾ ಆಗಿದೆ. ಪ್ರಸಕ್ತ ಸಾಲಿನಲ್ಲಿ ಉಳಿದ ಎಲ್ಲ ಅರ್ಹ ರೈತರ ಸಾಲಮನ್ನಾ ಆಗಲಿದೆ. ಸರ್ಕಾರವನ್ನು ಬೆಂಬಲಿಸಿದ ಸಹೋದ್ಯೋಗಿಗಳು, ನನ್ನ ಮಾರ್ಗದರ್ಶಕರಾದ ದೇವೇಗೌಡರು, ಮಿತ್ರ ಪಕ್ಷದ ನೇತಾರರಾದ ರಾಹುಲ್ಗಾಂಧಿ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಸೇರಿ ಎಲ್ಲರಿಗೂ ಕೃತಜ್ಞತೆಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ