ದುಬಾರಿ ಉಡುಗೊರೆ ಹೆಸರಲ್ಲಿ ಮಹಿಳೆಗೆ ವಂಚನೆ: ದೂರು
Team Udayavani, Sep 16, 2020, 12:23 PM IST
ಬೆಂಗಳೂರು: ಆನ್ಲೈನ್ ವಿವಾಹ ನೋಂದಣಿ ತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ, ವಿದೇಶದಿಂದ ದುಬಾರಿ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣ ನಡೆದಿದೆ.
ಆನ್ಲೈನ್ ವಂಚಕನಿಂದ ವಂಚನೆಗೊಳಗಾದ ಯುವತಿ ವೈಟ್ಫೀಲ್ಡ್ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಆಗಿರುವ ಯುವತಿಗೆ ಆನ್ಲೈನ್ ವಿವಾಹ ನೋಂದಣಿ ತಾಣದಲ್ಲಿ ಮುಖೇಶ್ ಮುಖರ್ಜಿ ಎಂಬಾತಪರಿಚವಾಗಿದ್ದ. ಯುವತಿ ಜತೆ ಯಾವಾಗಲೂ ಇಂಟರ್ನೆಟ್ ಚಾಟ್ ಮಾಡಿ ಮಾತನಾಡುತ್ತಿದ್ದ. ಕೆಲಸದ ನಿಮಿತ್ತ ತಾನು ಲಂಡನ್ನಲ್ಲಿ ಇರುವುದಾಗಿ ನಂಬಿಸಿದ್ದ ಜತೆಗೆ ಭಾರತಕ್ಕೆ ಬಂದ ಬಳಿಕ ಮದುವೆ ಆಗುವುದಾಗಿ ಹೇಳಿದ್ದ. ಜತೆಗೆ ಲಂಡನ್ನಿಂದ ದುಬಾರಿ ಮೌಲ್ಯದ ಉಡುಗೊರೆಕಳುಹಿಸಿದ್ದು ಅದನ್ನು ಸ್ವೀಕರಿಸುವಂತೆಕೇಳಿಕೊಂಡಿದ್ದ.
ಕೆಲದಿನಗಳ ಹಿಂದೆ ತಾವು ಕೊರಿಯರ್ನವರು ಎಂದು ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಮಗೆ ಲಂಡನ್ನಿಂದ ಪಾರ್ಸೆಲ್ ಬಂದಿದ್ದು ಅದನ್ನು ನೀಡಲು ಶುಲ್ಕ ಕಟ್ಟಬೇಕು ಎಂದು ತಿಳಿಸಿ ಆರಂಭದಲ್ಲಿ 34,500 ರೂ. ಅಕೌಂಟ್ಗೆ ಹಾಕಿಸಿಕೊಂಡಿದ್ದ. ಇದೇ ರೀತಿ ಹಂತ ಹಂತವಾಗಿ ಒಟ್ಟು 1.25 ಲಕ್ಷ ರೂ. ಕಟ್ಟಿಸಿಕೊಂಡು ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇತ್ತ ಮುಖೇಶ್ ಮುಖರ್ಜಿ ಅಕೌಂಟ್ ಬ್ಲಾಕ್ ಮಾಡಿದ್ದಾನೆ. ಈ ಬೆಳವಣಿಗೆಗಳಿಂದ ತಾನು ಸೈಬರ್ ವಂಚಕರಿಂದ ಮೋಸ ಹೋಗಿರುವುದನ್ನು ಅರಿತ ಯುವತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
………………………………………………………………………………………………………………………………………………………
ಮನೆಗಳವು: ಆರೋಪಿ ಬಂಧನ : ಬೆಂಗಳೂರು: ಮನೆಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸಂಜಯ್ ನಗರ ಠಾಣೆ ಪೊಲೀಸರುಬಂಧಿಸಿದ್ದಾರೆ. ಗಂಗಗೊಂಡನಹಳ್ಳಿಯ ಸಯ್ಯದ್ ಸಾದಿಕ್ ಸಲೀಂ (33) ಬಂಧಿತ. ಆರೋಪಿ ಬಳಿ 6.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ನಾಗಶೆಟ್ಟಿಹಳ್ಳಿಯಲ್ಲಿ ನಡೆದಿದ್ದ ಮನೆಕಳವು ಪ್ರಕರಣದ ತನಿಖೆ ನಡೆಸಿ ಆರೋಪಿ ಸಯ್ಯದ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಒಂದು ಬೈಕ್ ಕಳವು ಹಾಗೂ ಗ್ರಾಮಾಂತರ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ ಎರಡು ಸರಕಳವು ಪ್ರಕರಣಗಳ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ. ಆರೋಪಿ ಹಲವು ಠಾಣಾ ವ್ಯಾಪ್ತಿಗಳ ಪ್ರಕರಣಗಳಲ್ಲಿ ಆರೋಪಿಯಾಗಿದ್ದು,2 ವರ್ಷ ಜೈಲಿನಲ್ಲಿದ್ದ ಎಂದು ಪೊಲೀಸರು ಹೇಳಿದರು.