ಯುವತಿಯರಿಂದ ಕಾಲ್ ಮಾಡಿಸಿ ಜಾಬ್ ಕೊಡಿಸುವ ನೆಪದಲ್ಲಿ ನೂರಾರು ಜನರಿಗೆ ವಂಚನೆ: ಇಬ್ಬರ ಬಂಧನ
Team Udayavani, Jun 4, 2022, 1:23 PM IST
ಬೆಂಗಳೂರು: ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಗೆ ಯುವತಿಯರ ಮೂಲಕ ಫೋನ್ ಮಾಡಿಸಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ವಂಚಕರು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಜರಾಜೇಶ್ವರಿನಗರದ ಚರಘು ಅಲಿಯಾಸ್ ನವನೀತ್(27) ಮತ್ತು ಗಾಯತ್ರಿ ನಗರದ ಸಾಯಿಕಿರಣ್ (25) ಬಂಧಿತರು. ಆರೋಪಿಗಳಿಂದ11 ಮೊಬೈಲ್, 2 ಸಿಪಿಯು, 1ಲ್ಯಾಪ್ಟಾಪ್ ಹಾಗೂ 43ಸಾವಿರ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪಿಯುಸಿ ಓದಿದ್ದು, ಅಕ್ರಮವಾಗಿ ಹಣ ಸಂಪಾದಿಸುವ ಕುರಿತು ಆನ್ಲೈನ್ ಹಾಗೂ ಬೇರೆ ಬೇರೆ ಮಾರ್ಗಗಳ ಮೂಲಕ ಶೋಧಿಸಿದ್ದರು. ಈ ವೇಳೆ ವಂಚನೆ ಮಾಡಿದರೆ ಶಿಕ್ಷೆಯೂ ಕಡಿಮೆ, ಯಾರಿಗೂ ಗೊತ್ತಾಗುವುದಿಲ್ಲ ಎಂದು ವಂಚನೆಗಿಳಿದಿದ್ದಾರೆ.
ಇತ್ತೀಚೆಗೆ ಎಚ್ಎಸ್ಆರ್ ಲೇಔಟ್ನಲ್ಲಿರುವ ಅಲ್ಕಾನ್ ಲ್ಯಾಬೋರೇಟರಿಸ್ ಇಂಡಿಯಾ ಪ್ರೈವೇಟ್.ಲಿಮಿಡೆಟ್ ಕಂಪನಿ ಹೆಸರು ಮತ್ತು ಲೋಗೋ ಬಳಸಿಕೊಂಡು ಕಚೇರಿ ತೆರೆದು, ಕಂಪನಿ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ತೆರೆದು ಯುವತಿಯರ ಮೂಲಕ ಕರೆ ಮಾಡಿಸಿ, ಸಂದರ್ಶನ ಮತ್ತು ಪರೀಕ್ಷೆಗಳನ್ನು ಬರೆಸಿ, ನಂತರ ವಿವಿಧ ಶುಲ್ಕದ ಹೆಸರಿ ನಲ್ಲಿ ದೂರುದಾರರಿಗೆ ಕಳೆದ ಡಿಸೆಂಬರ್ 23ರಿಂದ 29ರವರೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ 10 ಸಾವಿರ ರೂ. ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಅಲ್ಲದೆ, ಕಳೆದ 3 ವರ್ಷಗಳಿಂದ ವಂಚನೆಯನ್ನೇ ಕಾಯಕ ಮಾಡಿಕೊಂಡಿರುವ ಆರೋಪಿಗಳು,ವಿವಿಧ ಕಂಪನಿಗಳ ಹೆಸರಿನಲ್ಲಿ ಕಚೇರಿಗಳನ್ನು ತೆರೆಯು ತ್ತಿದ್ದರು. ಜಾಬ್ವೆಟ್ಸೈಟ್ ಪೋರ್ಟ್ಲ್ಗಳಲ್ಲಿ ಕಚೇರಿಯಲ್ಲಿ ಎಚ್ಆರ್ ಕೆಲಸ ಖಾಲಿ ಇದೆ ಎಂದು ಯುವತಿಯರನ್ನು ನೇಮಿಸಿಕೊಳ್ಳುತ್ತಿದ್ದರು. ತಾವು ಹೇಳಿದಂತೆ ಕೇಳಬೇಕು ಎಂದು ತಾಕೀತು ಮಾಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.
ಸಾವಿರಾರು ನಿರುದ್ಯೋಗಿಗಳಿಗೆ ವಂಚನೆ: ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರು ಸೇರಿ ಕರ್ನಾಟಕದ ಸಾವಿರಾರು ನಿರುದ್ಯೋಗಿಗಳಿಗೆ ವಂಚಿಸಿ ದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳ ವಿರುದ್ಧಬ್ಯಾಡರಹಳ್ಳಿ, ಬಸವೇಶ್ವರನಗರ, ಅನ್ನಪೂರ್ಣೇಶ್ವರಿನಗರ ಹಾಗೂ ಸುಬ್ರಹ್ಮಣ್ಯನಗರ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ರಾಮ್ ಮತ್ತು ತಂಡ ನಡೆಸಿದೆ.
ಹೇಗೆ ವಂಚನೆ? :
ನಿರುದ್ಯೋಗಿಗಳ ವಿವರಗಳನ್ನು ಜಾಬ್ವೆಬ್ಸೈಟ್ಗಳಲ್ಲಿ ಪಡೆದುಕೊಂಡು ಯುವತಿಯರ ಮೂಲಕ ಕರೆ ಮಾಡಿಸುತ್ತಿದ್ದರು. ಬಳಿಕ ಅಪ್ಲಿಕೇಷನ್ ಶುಲ್ಕ ಎಂದು 250 ರೂ. ನಂತರ ಮೊದಲ ಸುತ್ತಿನ ಸಂದರ್ಶನ ಮತ್ತು ಪರೀಕ್ಷೆಗೆ ಆಯ್ಕೆಯಾಗಿದ್ದಿರಾ ಎಂದು 2,500 ರೂ.
ಪಡೆಯುತ್ತಿದ್ದರು. ಆನ್ಲೈನ್ ಅಥವಾ ನೇರ ಸಂದರ್ಶನ ನಡೆಸಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಿರಾ ಎಂದು 7,500 ರೂ. ಎಂದು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಬಳಿಕ ಕೆಲಸ ಕೊಡದೆ ವಂಚಿಸುತ್ತಿದ್ದರು ಎಂಬುದುಗೊತ್ತಾಗಿದೆ. ಇದೇ ವೇಳೆ ಎಚ್.ಆರ್. ಕೆಲಸಕ್ಕೆ ಸೇರಿಸಿಕೊಂಡಿದ್ದ ಯುವತಿಯರಿಗೆ ವಂಚನೆ ಬಗ್ಗೆಗೊತ್ತಾಗುವ ಮೊದಲೇ ಎರಡು ತಿಂಗಳು ಕೆಲಸಮಾಡಿಸಿಕೊಂಡು ಏಕಾಏಕಿ ಸಂಬಳವನ್ನು ಕೊಡದೆ ವಿನಾಕಾರಣಗಳನ್ನು ನೀಡಿ ತೆಗೆದು ಹಾಕುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಕಾವೇರಿ ಗಲಾಟೆಯಲ್ಲಿ ಆರೋಪಿಗಳು ಭಾಗಿ :
ಬೆಂಗಳೂರಿನಲ್ಲಿ 2017ರಲ್ಲಿ ನಡೆದ ಕಾವೇರಿ ಗಲಾಟೆಯಲ್ಲಿ ಆರೋಪಿಗಳು ಪ್ರಮುಖ ಪಾತ್ರವಹಿಸಿ ದ್ದರು. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬಸ್ಗಳು ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚುವುದು ಹಾಗೂ ಗಲಾಟೆಗೆ ಪ್ರಚೋದನೆ ನೀಡುವ ಕೆಲಸಮಾಡುತ್ತಿದ್ದರು ಎಂದು ಬಂಧಿಸಲಾಗಿತ್ತು. ನಂತರಜಾಮೀನು ಪಡೆದು ಬಿಡುಗಡೆಯಾಗಿ ವಂಚನೆ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಹೇಳಿದರು.