“ಪಾಕ್, ಉಗ್ರರನ್ನು ಸೃಷ್ಟಿಸುವ ಕೈಗಾರಿಕಾ ಕೇಂದ್ರ
Team Udayavani, Feb 18, 2019, 12:30 AM IST
ಬೆಂಗಳೂರು: ಪಾಕಿಸ್ತಾನವು ಭಯೋತ್ಪಾದಕರನ್ನು ಸೃಷ್ಟಿಸುವ ಕೈಗಾರಿಕಾ ಕೇಂದ್ರವಾಗಿದ್ದು, ಎಲ್ಲಾ ರಾಷ್ಟ್ರಗಳು ಒಂದಾಗಿ
ಪಾಕಿಸ್ತಾನಕ್ಕೆ ಆರ್ಥಿಕ ದಿಗ್ಬಂಧನ ಹೇರಲು ಮುಂದಾಗಿರುವುದು ಸ್ವಾಗತಾರ್ಹ.
ಉಗ್ರರ ದಾಳಿಗೆ ಭಾರತ ತಕ್ಕ ಉತ್ತರ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ,ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸೇವೆ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ಭಯೋತ್ಪಾದನೆಯನ್ನು ಖಂಡಿಸಿ ಭಾನುವಾರ ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಎದುರು ಬಿಜೆಪಿ ವತಿಯಿಂದ ನಡೆದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಜಗತ್ತಿನ ಶಕ್ತಿಗಳ ಬೆಂಬಲದಿಂದ ಪಾಕಿಸ್ತಾನದ ಹುಟ್ಟಡಗಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಶೀಘ್ರದಲ್ಲೇ ಇದರಲ್ಲಿ ಯಶಸ್ಸು ಸಿಗುವ ವಿಶ್ವಾಸವಿದೆ.
ದಾಳಿಯಲ್ಲಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿ ಕೋರಲು ಹಾಗೂ ಭಯೋತ್ಪಾದನೆ ವಿರುದ್ಧ ದೇಶಾದ್ಯಂತ ಭಾನುವಾರ
ಪ್ರತಿಭಟನೆ ನಡೆದಿದೆ ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಿಆರ್ಪಿಎಫ್ನ 44 ಮಂದಿ ಯೋಧರು ಹುತಾತ್ಮರಾಗಿದ್ದು, ಅತ್ಯಂತ ನೋವಿನ ಮನಸ್ಸುಗಳ ನಡುವೆ ನಾವಿದ್ದೇವೆ. ಹುತಾತ್ಮ ಗುರು ಅವರ ಕುಟುಂಬವನ್ನು ಕಂಡು ತೀವ್ರ ದುಃಖವಾಯಿತು. ಭಾರತದ ವಿರುದ್ಧ ಘೋಷಣೆ ಕೂಗಿದವರ ವಿರುದ್ಧವೂ ಕ್ರಮ ಜರುಗಿಸಿ ಕೂಡಲೇ ಬಂಧಿಸಬೇಕು ಎಂದರು. ಸಂಸದ ಪಿ.ಸಿ.ಮೋಹನ್,
ಶಾಸಕರಾದ ವೈ.ಎ.ನಾರಾಯಣ ಸ್ವಾಮಿ,ಎಂ.ಕೃಷ್ಣಪ್ಪ, ಲೆಹರ್ ಸಿಂಗ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ,
ಮುಖಂಡರಾದ ಚಿ.ನಾ.ರಾಮು,ಮುನಿರಾಜು ಇತರರು ಉಪಸ್ಥಿತರಿದ್ದರು.
ಸೂರ್ಯ, ಚಂದ್ರರಿರುವವರೆಗೆ ಕಾಶ್ಮೀರ ನಮ್ಮದೇ. ಕಾಶ್ಮೀರಕ್ಕೆವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕು. ಭಯೋತ್ಪಾದಕ ಬೀಜಗಳನ್ನು ನಮ್ಮ ದೇಶ ಹಾಗೂ ಪಾಕಿಸ್ತಾನದಲ್ಲಿ ನಾಶಪಡಿಸಬೇಕಿದೆ. ಬಾಂಬ್ ಸ್ಫೋಟ ಪರ ಸಾಮಾಜಿಕ ಜಾಲತಾಣದಲ್ಲಿ “ಪೋಸ್ಟ್’ ಹಾಕುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು.
– ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ
ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ.
ನನ್ನ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬ ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಎಂದು ಟ್ವೀಟ್ ಮಾಡಿದ್ದ. ಪೊಲೀಸರು ಪ್ರಕರಣ ದಾಖಲಿಸಿದ್ದು, ಸದ್ಯ ಆತ ಓಡಿ ಹೋಗಿದ್ದಾನೆ. ಕೂಡಲೇ ಆತನನ್ನು ಬಂಧಿಸಬೇಕು. ಕಾರ್ಯಕ್ರಮವೊಂದರಲ್ಲಿ ಮೌನಾಚರಣೆ ನಡೆಯುತ್ತಿದ್ದರೆ ರಾಹುಲ್ ಗಾಂಧಿ ಮೊಬೈಲ್ ನೋಡುತ್ತಿದ್ದರು. ಇದು ಕಾಂಗ್ರೆಸ್ನ ರೀತಿ, ನೀತಿ.
– ಅರವಿಂದ ಲಿಂಬಾವಳಿ, ಶಾಸಕ.
ಪಾಕಿಸ್ತಾನವು ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಸಮಸ್ಯೆ ಸೃಷ್ಟಿಸುತ್ತಿದೆ. ನಮ್ಮ
ದೇಶಕ್ಕೆ ಇಂದು ಪ್ರಬಲ ನಾಯಕತ್ವ ಅಗತ್ಯವಿದ್ದು, ವಿಶ್ವದ ಭೂಪಟದಲ್ಲಿ ಪಾಕಿಸ್ತಾನವನ್ನು ನಿರ್ನಾಮ ಮಾಡಲು
ತೀರ್ಮಾನಿಸಬೇಕಾದ ಅಗತ್ಯವಿದೆ.
– ಅಬ್ದುಲ್ ಅಜೀಂ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ.