ಪಕ್ಷ ವಿರೋಧಿಗಳನ್ನು ಸಹಿಸಲ್ಲ: ದಿನೇಶ್
Team Udayavani, Jul 12, 2018, 6:20 AM IST
ಬೆಂಗಳೂರು: “ಕಾಂಗ್ರೆಸ್ನಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ
ಸಹಿಸುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಚಿವ ಸ್ಥಾನ, ನಿಗಮ ಮಂಡಳಿಯಲ್ಲಿ ಸ್ಥಾನ ಸಿಗಲಿಲ್ಲ ಎಂದು ಪಕ್ಷದ ವಿರುದಟಛಿ ಮಾತನಾಡುವವರನ್ನು ಸಹಿಸುವುದಿಲ್ಲ. ನಾಯಕರ ಹಿಂದೆ ತಿರುಗಾಡಿ ಅಧಿಕಾರ ಪಡೆಯುವವರಿಗೆ ಅವಕಾಶವಿಲ್ಲ. ತಳಮಟ್ಟದಲ್ಲಿ ಪಕ್ಷ ಕಟ್ಟಿದ ಕಾರ್ಯಕರ್ತರನ್ನು ಗುರುತಿಸಿ ಪಕ್ಷದಲ್ಲಿ ಜವಾಬ್ದಾರಿ ವಹಿಸಲಾಗುವುದು ಎಂದು ತಿಳಿಸಿದರು.
ಮೈತ್ರಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಾನು ಪಕ್ಷದ ಯಾವ ನಾಯಕರ ಪರವಾಗಿಯೂ ಇಲ್ಲ. ಪಕ್ಷ ಹಾಗೂ ಕಾರ್ಯಕರ್ತರ ಪರವಾಗಿದ್ದೇನೆ ಎಂದು ಹೇಳಿದರು.
ಕಳೆದ ಬಾರಿ ಚುನಾವಣೆಗಿಂತ ಶೇ.2ರಷ್ಟು ಹೆಚ್ಚು ಮತ ಪಡೆದಿದ್ದೇವೆ. ಬಿಜೆಪಿಯವರು ಕೆಲಸ ಮಾಡುವುದಿಲ್ಲ, ಪ್ರಚಾರ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರಚಾರ ವಿಭಿನ್ನವಾಗಿರಬೇಕು ಎಂದು ರಾಹುಲ್ ಸೂಚನೆ ನೀಡಿದ್ದಾರೆ ಎಂದರು.
ತಂದೆಯ ನೆನೆದ ದಿನೇಶ್: ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ರಾಹುಲ್ ಗಾಂಧಿ ಈ ಜವಾಬ್ದಾರಿ ವಹಿಸಿದ್ದಾರೆ. ನನ್ನ ತಾಯಿ ಆಶೀರ್ವಾದ ಮಾಡಿದ್ದಾರೆ. ಸ್ವರ್ಗದಲ್ಲಿರುವ ನನ್ನ ತಂದೆ ಇದನ್ನು ನೋಡಿ ಖುಷಿ ಪಡುತ್ತಿರಬಹುದು ಎಂದು ಹೇಳಿದರು.
ತುಂಬಿ ತುಳುಕಿದ ವೇದಿಕೆ
ಪದಗ್ರಹಣ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇನ್ನೂರಕ್ಕೂ ಹೆಚ್ಚು ಮುಖಂಡರು ಕುಳಿತು ಕುರ್ಚಿಗಾಗಿ ಪರದಾಡಿದ ಪ್ರಸಂಗ ನಡೆಯಿತು. ಮೊದಲ ಸಾಲಿನಲ್ಲಿಯೇ ಮೂವತ್ತಕ್ಕೂ ಹೆಚ್ಚು ನಾಯಕರು ಕುಳಿತುಕೊಂಡಿದ್ದರಿಂದ ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಮೂಲೆಯಲ್ಲಿ ಕೂರುವಂತಾಯಿತು. ಕೆಲವು ನಾಯಕರು ಇದ್ದ
ಕುರ್ಚಿಯನ್ನೇ ಹಂಚಿಕೊಂಡು ಕುಳಿತು ಸಮಾಧಾನ ಪಟ್ಟುಕೊಂಡರು.