ಫೋನಿ ಚಂಡಮಾರುತ: ನಗರದಲ್ಲಿ ಮತ್ತೆ ಮಳೆ
Team Udayavani, May 1, 2019, 3:00 AM IST
ಬೆಂಗಳೂರು: ನಗರದಲ್ಲಿ ಮಂಗಳವಾರ ಫೋನಿ ಚಂಡಮಾರುತದ ಪರಿಣಾಮ ತುಸು ಜೋರಾಗಿತ್ತು. ಇದರಿಂದ ಗುಡುಗು-ಮಿಂಚು ಸಹಿತ ಮಳೆ ಸುರಿಯಿತು. ಇದರಿಂದ ಅಲ್ಲಲ್ಲಿ ಸಂಚಾರದಟ್ಟಣೆ ಉಂಟಾಗಿ ಜನ ಪರದಾಡಿದರು.
ಮಳೆ ಅಬ್ಬರ ಕಡಿಮೆ ಇತ್ತು. ಆದರೆ, ಅದರೊಂದಿಗೆ ಬಂದ ಗುಡುಗು-ಮಿಂಚು ನಗರವನ್ನು ನಲುಗಿಸಿತು. ಆರ್ಭಟಕ್ಕೆ ವಾಹನ ಸವಾರರು, ಉದ್ಯೋಗಿಗಳು ಗಡಿಬಿಡಿಯಿಂದ ಗೂಡು ಸೇರಲು ದೌಡಾಯಿಸುತ್ತಿರುವುದು ಕಂಡುಬಂತು.
ಆದರೆ, ಮಳೆ ಮತ್ತು ಅದರಿಂದ ಉಂಟಾದ ಸಂಚಾರದಟ್ಟಣೆ ಅದಕ್ಕೆ ಅವಕಾಶ ನೀಡಲಿಲ್ಲ. ಪ್ರಮುಖ ರಸ್ತೆಗಳು, ಅಂಡರ್ಪಾಸ್ಗಳು, ಜಂಕ್ಷನ್ಗಳಲ್ಲಿ ಕೆಲವೇ ಹೊತ್ತಿನಲ್ಲಿ ನೀರು ಆವರಿಸಿದ್ದರಿಂದ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತು.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?: ಶಾಂತಿನಗರ, ರಿಚ್ಮಂಡ್ ವೃತ್ತ, ವಿಲ್ಸನ್ ಗಾರ್ಡನ್, ಶಿವಾನಂದ ವೃತ್ತ, ಓಕಳೀಪುರ, ಮೆಜೆಸ್ಟಿಕ್ ಸುತ್ತ ಮಳೆ ಧಾರಾಕಾರವಾಗಿ ಸುರಿಯಿತು. ಈ ಭಾಗಗಳಲ್ಲಿ 2ರಿಂದ 8 ಮಿ.ಮೀ. ಅಂತರದಲ್ಲಿ ಮಳೆ ಬಿದ್ದಿದೆ.
ನಗರದ ಹೊರವಲಯದಲ್ಲಿ ಮಳೆ ಬಿರುಸಿನಿಂದ ಕೂಡಿತ್ತು. ಬೆಂಗಳೂರು ದಕ್ಷಿಣದ ಸೋಮನಹಳ್ಳಿಯಲ್ಲಿ ರಾತ್ರಿ 9ರ ಸುಮಾರಿಗೆ ಗಂಟೆಗೆ 68 ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
ಅದೇ ರೀತಿ, ಬನ್ನೇರುಘಟ್ಟ 14 ಮಿ.ಮೀ., ಅಂಜನಾಪುರ 14, ಗೊಟ್ಟಿಗೆರೆ 16.5, ಅರಕೆರೆ 15.5, ಬೇಗೂರು 19, ಕಗ್ಗಲೀಪುರ 16.5, ಹಿರಿಯೂರು 12, ಕೋರಮಂಗಲ 4.5 ಮಿ.ಮೀ. ಮಳೆಯಾಗಿದೆ ಎಂದು ಕೇಂದ್ರವು ತಿಳಿಸಿದೆ.
ಮಳೆಯ ಪರಿಣಾಮ ಹಲವೆಡೆ ಬಸ್ಗಳ ಕಾರ್ಯಾಚರಣೆಯಲ್ಲಿ ಕೊಂಚ ಏರುಪೇರು ಆಯಿತು. ಪ್ರಯಾಣಿಕರು ಬಸ್ಗಳಿಗಾಗಿ ಕಾದು ಸುಸ್ತಾದರು. ಕೆಲವರು ಆಟೋ, ಆ್ಯಪ್ ಆಧಾರಿತ ಕ್ಯಾಬ್ಗಳ ಮೊರೆಹೋದರು. ಮೆಟ್ರೋ ನಿಲ್ದಾಣಗಳಲ್ಲೂ ನೀರು ನುಗ್ಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಅದರಲ್ಲೂ ಎಂ.ಜಿ. ರಸ್ತೆಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಇದ್ದುದರಿಂದ ಜನದಟ್ಟಣೆ ಎಂದಿಗಿಂತ ತುಸು ಹೆಚ್ಚಿತ್ತು. ಅಲ್ಲಿನ ಸಿಬ್ಬಂದಿ ಮಳೆ ನೀರು ತುಂಬಿ ಹೊರಹಾಕುತ್ತಿರುವುದು ಕಂಡುಬಂತು. ಈ ಮಧ್ಯೆ ಬೆಳಿಗ್ಗೆಯಿಂದ ಎಂದಿನಂತೆ ಬಿಸಿಲಿನ ವಾತಾವರಣ ಇತ್ತು. ಸಂಜೆ ಮೋಡಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು.
ನಗರದಲ್ಲಿ ಬುಧವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣದ ಅಂಡಮಾನ್ನಲ್ಲಿ ಕಾಣಿಸಿಕೊಂಡ ಫೋನಿ ಚಂಡಮಾರುತವು ಒರಿಸ್ಸಾ ಕಡೆಗೆ ಹೊರಟಿದೆ. ಗಂಟೆಗೆ ಸುಮಾರು 120 ಕಿ.ಮೀ. ವೇಗದಲ್ಲಿದ್ದು,
ಮಂಗಳವಾರ ಅದು ಬೆಂಗಳೂರು, ಚೆನ್ನೈಗೆ ಹತ್ತಿರದಲ್ಲಿ ಹಾದುಹೋಗಿದ್ದರಿಂದ ನಗರದಲ್ಲಿ ಮಳೆ ಆಗಿದೆ. ಬುಧವಾರ ಬಹುತೇಕ ಕಡಿಮೆ ಆಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್