ಮುಂದಿನ ವರ್ಷದಿಂದ ಪಿಒಪಿ ಬ್ಯಾನ್
Team Udayavani, Sep 15, 2018, 12:05 PM IST
ಬೆಂಗಳೂರು: ನಿರಂತರ ಜಾಗೃತಿ ಅಭಿಯಾನದಿಂದ ರಾಜಧಾನಿ ಬೆಂಗಳೂರಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಪ್ರತಿಷ್ಠಾಪನೆ ಈ ಬಾರಿ ಕಡಿಮೆಯಾಗಿದೆ. ಮುಂದಿನ ವರ್ಷದಿಂದ ಪಿಒಪಿ ಗಣೇಶ ಮೂರ್ತಿಗಳ ನಿಯಂತ್ರಣಕ್ಕೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡ ಜಾಗೃತಿ ಅಭಿಯಾನಗಳು ಯಶಸ್ವಿಯಾಗಿದ್ದು, ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದೇ ವೇಳೆ ನಗರದ ಎಂಟು ವಲಯಗಳಲ್ಲಿ ಗುರುವಾರ ಒಟ್ಟು 1.69 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆಯಾಗಿದ್ದು, ಆ ಪೈಕಿ ಕೇವಲ 7,245 ಪಿಒಪಿ ಮೂರ್ತಿಗಳಿದ್ದವು.
ಗಣೇಶ ಹಬ್ಬದ ಮೊದಲ ದಿನವೇ ಪಾಲಿಕೆ ವ್ಯಾಪ್ತಿಯ 22 ಕೆರೆಗಳ ಕಲ್ಯಾಣಿಗಳು ಹಾಗೂ ಮೊಬೈಲ್ ಟ್ಯಾಂಕರ್ಗಳಲ್ಲಿ ಬರೋಬ್ಬರಿ 1,69,394 ಮೂರ್ತಿಗಳು ವಿಸರ್ಜನೆಯಾಗಿವೆ. 3ನೇ ದಿನ ಹಾಗೂ 11ನೇ ದಿನ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೂರ್ತಿಗಳ ವಿಸರ್ಜನೆಯಾಗಲಿದ್ದು, ಪಿಒಪಿ ಮೂರ್ತಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ವರ್ಷ ನಗರದಲ್ಲಿ ವಿಸರ್ಜನೆಯಾದ 5 ಲಕ್ಷ ಮೂರ್ತಿಗಳಲ್ಲಿ ಶೇ.40ರಷ್ಟು ಪಿಒಪಿ ಮೂರ್ತಿಗಳಿದ್ದವು. ಆದರೆ, ಈ ಬಾರಿ ಆ ಪ್ರಮಾಣ ಕಡಿಮೆಯಾಗಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಒಪಿ ಗಣೇಶ ಬ್ಯಾನ್: ಮುಂದಿನ ವರ್ಷದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಯಾಗಿರುವ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಸಾಯನಿಕ ಮಿಶ್ರಿತ ಹಾಗೂ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸದಂತೆ ಹಲವು ಬಾರಿ ಮನವಿ ಮಾಡಿದರೂ ಸಾರ್ವಜನಿಕರು ತಮ್ಮ ಧೋರಣೆ ಬದಲಿಸಿಲ್ಲ. ಹೀಗಾಗಿ ಪಿಒಪಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದರು.
ಗಣೇಶ ಚತುರ್ಥಿಗೆ ಒಂದು ತಿಂಗಳು ಬಾಕಿ ಇರುವಾಗಲೇ ಕಾರ್ಯಾಚರಣೆ ನಡೆಸಿ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಬಣ್ಣದ ಹಾಗೂ ಪಿಒಪಿ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಆದರೂ, ನಗರದ ಜನರು ಅದಕ್ಕೆ ಸ್ಪಂದಿಸದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆರೆ, ಕಲ್ಯಾಣಿಗಳಲ್ಲಿ ವಿಸರ್ಜನೆಯಿಲ್ಲ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಸಾರ್ವಜನಿಕರು ಸ್ಪಂದಿಸದ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ, ಅಂತಹ ಮೂರ್ತಿಗಳನ್ನು ಪಾಲಿಕೆಯ ಕೆರೆಗಳಲ್ಲಿ ಹಾಗೂ ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜಿಸಲು ಅವಕಾಶ ನೀಡುವುದಿಲ್ಲ. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಿಸರ ಸ್ನೇಹಿ ಹಬ್ಬಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
ಹೆಚ್ಚು ಹಸಿ ತ್ಯಾಜ್ಯ ಉತ್ಪತ್ತಿ: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕೆರೆ, ಮೊಬೈಲ್ ಟ್ಯಾಂಕರ್ಗಳ ಬಳಿ ಹೂವು, ಬಾಳೆಕಂದು ಸೇರಿ ಇನ್ನಿತರ ಹಸಿ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿದೆ. ಹಬ್ಬದ ಮೊದಲ ದಿನವೇ ನಗರದ ಎಂಟು ವಲಯಗಳಲ್ಲಿ 216 ಟನ್ ತ್ಯಾಜ್ಯ ಉತ್ಪತ್ತಿಯಾಗಿದ್ದು, ಪೌರಕಾರ್ಮಿಕರು ವಿಲೇವಾರಿಯಲ್ಲಿ ತೊಡಗಿಕೊಂಡಿದ್ದಾರೆ.
ಹಸಿ ತ್ಯಾಜ್ಯ ರೈತರಿಗೆ: ಹಸಿ ತ್ಯಾಜ್ಯವನ್ನು ನಗರದ ಸುತ್ತಮುತ್ತಲಿನ ರೈತರಿಗೆ ನೀಡಲಾಗುತ್ತಿದೆ. ಗಣೇಶ ಮೂರ್ತಿ ವಿಲೇವಾರಿ ಸ್ಥಳಗಳಿಗೆ ರೈತರು ಬಂದು ಹಸಿ ತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಾಲಿಕೆಯ ವಾಹನಗಳನ್ನು ಬಳಸಿ ತ್ಯಾಜ್ಯವನ್ನು ರೈತರ ಸ್ಥಳಗಳಿಗೆ ಪೂರೈಕೆ ಮಾಡಲು ಪಾಲಿಕೆ ನಿರ್ಧರಿಸಿದೆ. ಜತೆಗೆ ಗಣೇಶ ಮೂರ್ತಿಗೆ ಬಳಸಿದ ಮರದ ಪೀಠಗಳನ್ನು ಸಹ ರೈತರಿಗೆ ನೀಡಲಾಗುತ್ತಿದೆ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾವಿರ ಪೇಪರ್ ಗಣೇಶ: ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸಿ ಕೆಲವರು ಹಬ್ಬ ಆಚರಿಸಿದರೆ, ಇನ್ನು ಕೆಲವರು ಪೇಪರ್ ಗಣೇಶನನ್ನು ಪೂಜಿಸಿದ್ದಾರೆ. ನಗರದ ಹಲಸೂರು ಕೆರೆ ಸೇರಿದಂತೆ ನಗರದ ವಿವಿಧ ಕಲ್ಯಾಣಿಗಳಿಗೆ ಈ ಬಾರಿ ಸಾವಿರಕ್ಕೂ ಹೆಚ್ಚಿನ ಪೇಪರ್ ಗಣೇಶ ಮೂರ್ತಿಗಳು ಬಂದಿರುವುದು ವಿಶೇಷ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ವಿಚಾರವಾಗಿರುವ ಕಾರಣ, ಕಠಿಣ ನಿರ್ಧಾರಗಳನ್ನು ಕೈಗೊಂಡರೆ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದಂತಾಗುತ್ತದೆ. ಜಾಗೃತಿ ಮೂಲಕ ಪಿಒಪಿ ಗಣೇಶ ಬಳಕೆ ನಿಯಂತ್ರಣಕ್ಕೆ ಬರುತ್ತಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಪಿಒಪಿ ಗಣೇಶ ಮೂರ್ತಿ ಬಳಕೆ ಕಡಿಮೆಯಾಗಿದೆ.
-ಲಕ್ಷ್ಮಣ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಮೂರ್ತಿಗಳ ವಿಸರ್ಜನೆ ವಿವರ
ವಲಯ ಮೂರ್ತಿಗಳ ಸಂಖ್ಯೆ
-ಪಶ್ಚಿಮ 48,586
-ಪೂರ್ವ 32,558
-ದಕ್ಷಿಣ 65,325
-ಮಹದೇವಪುರ 3,617
-ಯಲಹಂಕ 6,307
-ರಾ.ರಾ.ನಗರ 8,756
-ದಾಸರಹಳ್ಳಿ 895
-ಬೊಮ್ಮನಹಳ್ಳಿ 3,350
-ಒಟ್ಟು 1,69,394
ಕೆರೆ ಮೂರ್ತಿಗಳ ಸಂಖ್ಯೆ
-ಸ್ಯಾಂಕಿ 30,845
-ಹಲಸೂರು 30,149
-ಯಡಿಯೂರು 52 ಸಾವಿರ
-ಒಟ್ಟು 1,12,994
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ