ವಿದ್ಯುತ್ ಚಾಲಿತ ಆಟೋಗೆ ಉತ್ತೇಜನ
Team Udayavani, Nov 11, 2019, 10:43 AM IST
ಬೆಂಗಳೂರು: ನಗರದಲ್ಲಿ ಕಾರ್ಯಾಚರಣೆಯಲ್ಲಿರುವ ಟು-ಸ್ಟ್ರೋಕ್ ಆಟೋಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ವಿದ್ಯುತ್ ಚಾಲಿತ ಆಟೋಗೆ ಉತ್ತೇಜನ ನೀಡಲು ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರ, ಈ ಹಿಂದಿದ್ದ ಸಬ್ಸಿಡಿ ಮೊತ್ತವನ್ನು ಐದು ಪಟ್ಟು ಹೆಚ್ಚಿಸಿ ಗರಿಷ್ಠಮಟ್ಟದ ಪ್ರೋತ್ಸಾಹಧನ ನೀಡಲು ಚಿಂತನೆ ನಡೆಸಿದೆ.
ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಚಾಲಕರಿಗೆ ಹೊಸ ಆಟೋ ಖರೀದಿಗೆ ಈ ಹಿಂದೆ 30 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪರಿಣಾಮ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಅದನ್ನು ಒಂದೂವರೆ ಲಕ್ಷ ರೂ.ಗೆ ಹೆಚ್ಚಿಸಲು ಚಿಂತನೆ ನಡೆದಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಹೊಸಆಟೋ ಕಡ್ಡಾಯವಾಗಿ ವಿದ್ಯುತ್ಚಾಲಿತ (ಎಲೆಕ್ಟ್ರಿಕ್) ಆಗಿರಬೇಕು ಎಂದೂ ಹೇಳಿದೆ. ಇದಲ್ಲದೆ, ಉಳಿದ ಆಟೋ ಚಾಲಕರಿಗೂ ಇನ್ನೆರಡು ಆಫರ್ಗಳನ್ನು ಸರ್ಕಾರ ನೀಡಲು ನಿರ್ಧರಿಸಿದೆ. ಆ ಪೈಕಿ ಒಂದು ಪ್ರಸ್ತುತ ಇರುವ ಎಲ್ಪಿಜಿ ಆಧಾರಿತ ನಾಲ್ಕು ಸ್ಟ್ರೋಕ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋ ಗಳಾಗಿ ಪರಿವರ್ತಿಸಲು 1 ಲಕ್ಷ ಹಾಗೂ ಹೊಸದಾಗಿ ಎಲೆಕ್ಟ್ರಿಕ್ ಆಟೋಗಳನ್ನು ಖರೀದಿಸುವವರಿಗೆ 1.25 ಲಕ್ಷ ರೂ. ಸಬ್ಸಿಡಿ ನೀಡಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಪ್ರಸ್ತಾವನೆ ಸಲ್ಲಿಕೆ: ಶೀಘ್ರ ಸರ್ಕಾರ ತೀರ್ಮಾನ - ನಗರದಲ್ಲಿ ಟು-ಸ್ಟ್ರೋಕ್ ಆಟೋಗಳು ಸಂಪೂರ್ಣ ಇಲ್ಲದಂತೆ ಮಾಡುವುದು ಇಲಾಖೆ ಗುರಿ. ಈ ಹಿನ್ನೆಲೆಯಲ್ಲಿ ಗರಿಷ್ಠ ಸಬ್ಸಿಡಿಗೆ ಉದ್ದೇಶಿಸಲಾಗಿದೆ. ಪ್ರಸ್ತುತ ಎಲ್ಪಿಜಿ ಆಧಾರಿತ ನಾಲ್ಕು ಸ್ಟ್ರೋಕ್ನ ಹಳೆಯ ಆಟೋಗಳೂ ಕಾರ್ಯಾಚರಣೆ ಮಾಡುತ್ತಿವೆ. ಇವು ಕೂಡ ವಾಯುಮಾಲಿನ್ಯದಲ್ಲಿ ಸಾಕಷ್ಟು ಕೊಡುಗೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಅಂತಹ ಆಟೋಗಳ ಕಾರ್ಯಾಚರಣೆಗೆ ಬ್ರೇಕ್ ಹಾಕಲು ಉದ್ದೇಶಿಸಿದ್ದು, ಅವುಗಳನ್ನು ಎಲೆಕ್ಟ್ರಿಕ್ಗೆ ಪರಿವರ್ತಿಸಲು ಚಾಲಕರಿಗೆ ಒಂದು ಲಕ್ಷ ರೂ. ನೀಡಲು ಚಿಂತನೆ ನಡೆದಿದೆ. ಸರ್ಕಾರ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ “ಉದಯವಾಣಿ’ಗೆ ತಿಳಿಸಿದರು.
ಈ ಮಧ್ಯೆ ಕೇಂದ್ರ ಸರ್ಕಾರ “ಫೇಮ್-2′ (ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನ್ಯುಫ್ಯಾಕ್ಚ ರಿಂಗ್ ಆಫ್ ಹೈಬ್ರಿಡ್ ಆಂಡ್ ಎಲೆಕ್ಟ್ರಿಕ್ ವೆಹಿಕಲ್ಸ್ ಇನ್ ಇಂಡಿಯಾ) ಯೋಜನೆ ಅಡಿ 60 ಸಾವಿರರೂ. ಪ್ರೋತ್ಸಾಹ ಧನ ನೀಡುತ್ತಿದೆ. ಹೊಸ ಎಲೆಕ್ಟ್ರಿಕ್ ಆಟೋಗೆ ಅಂದಾಜು ಮೂರೂವರೆ ಲಕ್ಷ ರೂ. ಆಗುತ್ತದೆ. ಉಳಿದ 1.40 ಲಕ್ಷ ಹಣವನ್ನು ಚಾಲಕರು ಭರಿಸಬೇಕಾಗುತ್ತದೆ. ಅದಕ್ಕೂ ಸಾಲ ಸೌಲಭ್ಯ ದೊರೆಯಲಿದೆ. ಹಾಗಾಗಿ, ಚಾಲಕರಿಗೆ ಅಷ್ಟೇನೂ ಹೊರೆ ಆಗದು ಎಂದು ಸಾರಿಗೆ ಇಲಾಖೆ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
106 ಚಾರ್ಜಿಂಗ್ ಪಾಯಿಂಟ್: “ನಗರದಲ್ಲಿ ಅಧಿಕೃತವಾಗಿ 1.75 ಲಕ್ಷ ನಾಲ್ಕು ಸ್ಟ್ರೋಕ್ ಆಟೋಗಳು ಹಾಗೂ ಅಂದಾಜು 20 ಸಾವಿರ ಟು-ಸ್ಟ್ರೋಕ್ ಆಟೋಗಳಿವೆ. ಅವುಗಳನ್ನು ಹಂತ-ಹಂತವಾಗಿ ವಿದ್ಯುತ್ ಚಾಲಿತ ಆಟೋಗಳಾಗಿ ಪರಿವರ್ತನೆ ಮಾಡಲಾಗುವುದು. ಮೊದಲ ವರ್ಷ ಐದು ಸಾವಿರ ಆಟೋಗಳ ಗುಜರಿಗೆ ಕಳುಹಿಸುವ ಗುರಿಯನ್ನು ಇಲಾಖೆ ಹೊಂದಿದೆ. ಪರ್ಯಾಯವಾಗಿ ಎಲೆಕ್ಟ್ರಿಕ್ ಆಟೋಗಳ ಪೂರೈಕೆ ಹಾಗೂ ಅದಕ್ಕೆ ಅಗತ್ಯ ಮೂಲಸೌಕರ್ಯಗಳನ್ನೂ ಒದಗಿಸಲಾಗುತ್ತಿದೆ. ಈಗಾಗಲೇ 106 ಕಡೆ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ.
ಈ ಬಾರಿ ಚಾಲಕರ ಮನವೊಲಿಸಿಯೇ ಸಬ್ಸಿಡಿ ನಿಗದಿಪಡಿಸಲಾಗಿದ್ದು, ಗೊಂದಲ ಅಥವಾ ನೀರಸ ಪ್ರತಿಕ್ರಿಯೆಗೆ ಅವಕಾಶ ಇರುವುದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆ ನಗರದಲ್ಲಿನ ಸುಮಾರು 20 ಸಾವಿರ ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಗುರಿ ಹೊಂದಲಾಗಿತ್ತು. ಇದಕ್ಕೆ ಬದಲಾಗಿ 30 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಇದಕ್ಕಾಗಿ ಪೀಣ್ಯ, ಗೊರಗುಂಟೆಪಾಳ್ಯ, ನೆಲಮಂಗಲದಲ್ಲಿ ಗುಜರಿ ಘಟಕಗಳನ್ನು ತೆರೆದು, ಮೊದಲ ವರ್ಷ ಸಬ್ಸಿಡಿಗಾಗಿ 30 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಬೆರಳೆಣಿಕೆಯಷ್ಟು ಮಾತ್ರ ಆಟೋ ಚಾಲಕರು ಇದಕ್ಕಾಗಿ ಮುಂದೆಬಂದಿದ್ದರು. ಹೀಗಾಗಿ, ಆ ಯೋಜನೆಯೇ ನಂತರದಲ್ಲಿ ಗುಜರಿ ಸೇರಿತ್ತು.
ಸಬ್ಸಿಡಿ ವಿಧಾನ ಸರಳವಾಗಲಿ: ಪರಿಸರ ಸ್ನೇಹಿ ದೃಷ್ಟಿಯಿಂದ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಅದು ನೀಡುವ ಸಬ್ಸಿಡಿ ಪಡೆಯಲು ಫಲಾನುಭವಿಗಳು ಹರಸಾಹಸ ಮಾಡಬೇಕಾಗುತ್ತದೆ. ಅಷ್ಟಕ್ಕೂ ಆ ಹಣ ಆಟೋ ತಯಾರಿಕೆ ಅಥವಾ ವಿತರಕನಿಗೆ ಹೋಗುತ್ತದೆ. ಉಳಿದ ಹಣ ತೆಗೆದುಕೊಂಡು ಹೋದಾಗ, ಫಲಾನುಭವಿಗೆ ಹೊಸ ಆಟೋ ಸಿಗುತ್ತದೆ. ಇದು ಸರಿಯಾದ ಕ್ರಮ ಅಲ್ಲ. ಸೌಲಭ್ಯ ಪಡೆಯುವ ವಿಧಾನ ಸರಳವಾಗಿರಬೇಕು. ನೇರವಾಗಿ ಫಲಾನುಭವಿ ಖಾತೆಗೆ ಜಮೆ ಆಗಬೇಕು. ಇದು ಹಂತ-ಹಂತವಾಗಿ ಹಾಗೂ ಪಾರದರ್ಶಕವಾಗಿ ಇದು ನಡೆಯಬೇಕು ಎಂದು “ನಮ್ಮ ಆಟೋ’ ಪ್ರಾಜೆಕ್ಟ್ ಮ್ಯಾನೇಜರ್ ಮಂಜು ಮೆನನ್ ತಿಳಿಸುತ್ತಾರೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ