ಪೌರಕಾರ್ಮಿಕರ ಪ್ರತಿಭಟನೆ
Team Udayavani, May 31, 2018, 11:35 AM IST
ಬೆಂಗಳೂರು: ಐದು ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಗುತ್ತಿಗೆ ಪೌರಕಾರ್ಮಿಕರು ಬುಧವಾರ ಪಾಲಿಕೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೌರಕಾರ್ಮಿಕರಿಗೆ ವೇತನ ಬಿಡುಗಡೆಗೊಳಿಸದ ಬಿಬಿಎಂಪಿ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪಾಲಿಕೆ ಸದಸ್ಯರು, ಅಧಿಕಾರಿಗಳನ್ನು ತರಾ
ಟೆಗೆ ತೆಗೆದುಕೊಂಡ ಘಟನೆ ಬುಧವಾರ ಕೌನ್ಸಿಲ್ ಸಭೆಯಲ್ಲಿ ನಡೆಯಿತು.
ಚುನಾವಣಾ ನೀತಿ ಸಂಹಿತೆ ನಡುವೆಯೂ ಮಳೆಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ತುರ್ತು ವಿಷಯಗಳ ಚರ್ಚೆಗೆ ಮೇಯರ್ ಆರ್.ಸಂಪತ್ರಾಜ್ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಪೌರಕಾರ್ಮಿಕರಿಗೆ ವೇತನ ಬಿಡುಗಡೆಗೊಳಿಸಿದ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. ಪರಿಣಾಮ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಪಾಲಿಕೆಯಿಂದ ನಿತ್ಯ 33 ಸಾವಿರ ಪೌರಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೆ, ಕೇವಲ 15 ಸಾವಿರ ಕಾರ್ಮಿಕರಿಗೆ ಮಾತ್ರ ವೇತನ ಬಿಡುಗಡೆಗೊಳಿಸಲಾಗಿದೆ. ಭಾರಿ ಅವ್ಯವಹಾರ ನಡೆದಿರುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ 2017ರ ಮಾರ್ಚ್ ವೇಳೆಗೆ ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆ ನೀಡಿತ್ತು. ಆನಂತರದಲ್ಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ನೀಡುವುದಾಗಿ ಘೋಷಿಸಿತ್ತು. ಅದರಂತೆ 15,474 ಮಂದಿಗೆ ಪ್ರತಿ ತಿಂಗಳು ಒಟ್ಟು 27 ಕೋಟಿ ರೂ. ವೇತನ ಪಾವತಿಸಲಾಗುತ್ತಿದೆ. ಆದರೆ, ಮಧ್ಯಾಹ್ನದ ಬಿಸಿಯೂಟ ವಿತರಣೆಯಲ್ಲಿ ಮಾತ್ರ 33 ಸಾವಿರ ಕಾರ್ಮಿಕರನ್ನು ತೋರಿಸಲಾಗಿದೆ.
ಒಂದೊಮ್ಮೆ ಲಾರಿ, ಆಟೋ, ಕಾಂಪ್ಯಾಕ್ಟರ್ ಚಾಲಕರು 8 ಸಾವಿರ ಸೇರಿ ಒಟ್ಟು 23 ಸಾವಿರ ಮಂದಿಯಾಗುತ್ತಾರೆ. ಆದರೆ, ಪಾಲಿಕೆಯಿಂದ ಹೆಚ್ಚುವರಿಯಾಗಿ 10 ಸಾವಿರ ಜನರಿಗೆ ನೀಡುತ್ತಿರುವ ಊಟದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಪ್ರತಿ 700 ಮಂದಿಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸಲಾಗಿರುತ್ತದೆ. ತಮ್ಮದೇ ವಾರ್ಡ್ನಲ್ಲಿ ಪೌರ ಕಾರ್ಮಿಕರ ಸಂಖ್ಯೆ ಯನ್ನು 165ರಿಂದ 119ಕ್ಕೆ ಇಳಿಸಿದ್ದಾರೆ. ಆದರೆ, 5 ತಿಂಗಳಿಂದ 119ರ ಪೈಕಿ ಕೇವಲ 61 ಮಂದಿಗಷ್ಟೇ ವೇತನ ನೀಡಲಾಗಿದೆ. ಉಳಿದ 58 ಮಂದಿಗೆ ವೇತನ ನೀಡಿಲ್ಲ. ನಗರದ ಹಲವು ವಾರ್ಡ್ಗಳಲ್ಲಿನ ಇದೇ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಬ್ಬಿ ಕಳವು, ತನಿಖೆಗೆ ಆದೇಶ: ನಗರದ ಪ್ರಮುಖ ರಸ್ತೆಗಳಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾದ ಕಸದ ಡಬ್ಬಿಗಳು ಕಳವಾಗಿವೆ. ಈ ಸಂಬಂಧ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಮತ್ತೆ 55 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಡಬ್ಬಿ ಖರೀದಿಗೆ ಮುಂದಾಗಿದ್ದು, ಕೌನ್ಸಿಲ್ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಸೇರಿದ ಹಲವರು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರ ಸಫ್ರಾಜ್ ಖಾನ್ ಅವ ರನ್ನು ಪ್ರಶ್ನಿಸುವ ವೇಳೆ ಮಧ್ಯ ಪ್ರವೇಶಿಸಿದ ಮೇಯರ್, ಕಸದ ಡಬ್ಬಿಗಳು ಮಾಯವಾಗಿರುವ ಕುರಿತು ಟಿವಿಸಿಸಿ ತನಿಖೆಗೆ ಸೂಚಿಸಲಾಗುವುದು ಎಂದರು.
ಮಳೆಗಾಲದಲ್ಲಿ ಎಚ್ಚರಿಕೆ ಅಗತ್ಯ: ಮುಂಗಾರು ಪೂರ್ವ ಮಳೆಗೆ ನಗರದಲ್ಲಿ ನೂರಾರು ಮರಗಳು ಧರೆಗುರುಳಿದ್ದು,
ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಅಧಿಕಾರಿಗಳು ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಬಾರಿ ಮಳೆಯಿಂದಾಗಿ ಸಾವು-ನೋವು ಸಂಭವಿಸಿದ್ದು, ಈ ಬಾರಿ ಯಾವುದೇ ಅನಾಹುತ ಸಂಭವಿಸದಂತೆ ಅಧಿಕಾರಿಗಳು ರೂಪಿಸಿರುವ ಕ್ರಿಯಾಯೋಜನೆ ವಿವರಗಳನ್ನು ಸಭೆಗೆ ನೀಡಬೇಕು. ಜತೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಇಲ್ಲಿ ಲವ್, ಅಲ್ಲಿ ಅರೇಂಜ್ ಮ್ಯಾರೇಜ್
ಪಾಲಿಕೆಯ ಕಾಂಗ್ರೆಸ್- ಜೆಡಿಎಸ್ ಲವ್ ಮ್ಯಾರೇಜ್ ಆಗಿದ್ದು, ವಿಧಾನಸಭೆಯಲ್ಲಿ ಅರೇಂಜ್ ಮಾಡಿಕೊಂಡಿದ್ದಾರೆ ಎಂದು ಪಾಲಿಕೆ ಸದಸ್ಯೆಯೂ ಆದ ಶಾಸಕಿ ಪೂರ್ಣಿಮಾ ಹಾಸ್ಯ ಚಟಾಕಿ ಹಾಕಿಸಿದರು. ವಿಧಾನಸಭೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುವ ವೇಳೆ ಈ ವಿಷಯ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪದ್ಮನಾಭರೆಡ್ಡಿ, ಅದು ಅರೇಂಜ್ ಮ್ಯಾರೇಜ್ ಅಲ್ಲ, ಆಕ್ಸಿಡೆಂಡ್ ಮ್ಯಾರೇಜ್ ಎಂದು ಕುಟುಕಿದರು. ಅದಕ್ಕೆ ತಿರುಗೇಟು ನೀಡಿದ ಮೇಯರ್ ಸಂಪತ್ರಾಜ್, ಯಾವ ಮ್ಯಾರೇಜ್ ಆದರೂ ಆಗಲಿ ಬಿಡಿ, ಒಟ್ಟಿನಲ್ಲಿ ಸಂಸಾರ ಚೆನ್ನಾಗಿ ನಡೆಯುತ್ತದೆ. ಅದರಲ್ಲಿ ಸಂಶಯ ಬೇಡ ಎಂದು ವಿಷಯಕ್ಕೆ ತೆರೆ ಎಳೆದರು.
ಇಎಸ್ಐ-ಪಿಎಫ್ ಪಾವತಿಸಿಲ್ಲ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರ ಇಎಸ್ಐ-ಪಿಎಫ್ ಖಾತೆಗೆ ತಿಂಗಳ
ವಂತಿಗೆ ಪಾವತಿಸದ ಹಿನ್ನೆಲೆಯಲ್ಲಿ ದಂಡ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಈಗಾಗಲೇ 2 ಕೋಟಿ ರೂ. ದಂಡ ಪಾವತಿಸಲಾಗಿದೆ. 6 ತಿಂಗಳವರೆಗೆ ವಂತಿಗೆ ಪಾವತಿಸದಿದ್ದರೆ ಶೇ.37ರಷ್ಟು ಡ್ಯಾಮೇಜ್ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ ಕೂಡಲೇ ಇಎಸ್ಐ, ಪಿಎಫ್ ವಂತಿಗೆ ಪಾವತಿಗೆ ಮುಂದಾಗಬೇಕು ಎಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.
ವೇತನಕ್ಕಾಗಿ ಪ್ರತಿಭಟನೆ
ಐದು ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಗುತ್ತಿಗೆ ಪೌರಕಾರ್ಮಿಕರು ಬುಧವಾರ ಪಾಲಿಕೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವೇತನ ಪಾವತಿಸದಿರುವುದರಿಂದ ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದು, ಮಕ್ಕಳ ಶಾಲಾ ಶುಲ್ಕ ಪಾವತಿಸಬೇಕಾಗಿದೆ.
ಹೀಗಾಗಿ ಕೂಡಲೇ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಜಂಟಿ ಆಯುಕ್ತ ಸಫ್ರಾಜ್ ಖಾನ್, ಎಲ್ಲ ಗುತ್ತಿಗೆ ಪೌರಕಾರ್ಮಿಕರಿಗೆ ಕೂಡಲೇ ವೇತನ ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಲಾಗಿದ್ದು,
ಶೀಘ್ರವೇ ವೇತನ ಪಾವತಿಯಾಗಲಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ಸ್ಥಳಕ್ಕೆ ಬಂದ ಮೇಯರ್
ಸಂಪತ್ರಾಜ್, ಪೌರಕಾರ್ಮಿಕರಿಗೆ ಶೀಘ್ರ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಎರಡು ಮೂರು ತಿಂಗಳು ಕೆಲಸ ಮಾಡಿದ ಪೌರಕಾರ್ಮಿಕರಿಗೂ ವೇತನ ಬಿಡುಗಡೆಗೊಳಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!