“ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಲಿ’
Team Udayavani, Dec 18, 2018, 6:00 AM IST
ಬೆಂಗಳೂರು: 1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ನ ಸಜ್ಜನ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವುದು ಐತಿಹಾಸಿಕವೆನಿಸಿದೆ. ಇದು ಕೇವಲ ಸಜ್ಜನ್ ಕುಮಾರ್ ಅವರಿಗೆ ಮಾತ್ರವಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ನೀಡಿದ ಶಿಕ್ಷೆಯಂತಾಗಿದೆ. ರಾಹುಲ್ಗಾಂಧಿಯವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ಇದೊಂದು ಮಹತ್ವದ ತೀರ್ಪು. ಪ್ರಕರಣದಲ್ಲಿ ನ್ಯಾಯ ದಾನವನ್ನು ಇಷ್ಟು ಸುದೀರ್ಘ ಕಾಲ ಏಕೆ ಮುಚ್ಚಿಡಲಾ
ಗಿತ್ತು ಎಂದು ಪ್ರಶ್ನಿಸಿದರು. ರಾಹುಲ್ಗಾಂಧಿಯವರು ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಇಷ್ಟು ವರ್ಷ ನ್ಯಾಯವನ್ನು ಮುಚ್ಚಿಟ್ಟಿದ್ದು ಏಕೆ ಎಂಬುದನ್ನು ಅವರು ಬಹಿರಂಗಪಡಿಸಲಿ ಎಂದು ಹೇಳಿದರು. ಬರೋಬ್ಬರಿ 34 ವರ್ಷಗಳ ಬಳಿಕ ನ್ಯಾಯ ಹೊರಬಿದ್ದಿದೆ. 10 ವರ್ಷ ಸಿಖ್ ಸಮುದಾಯದವರೇ ಪ್ರಧಾನಿಯಾಗಿದ್ದರೂ ನ್ಯಾಯ ಸಿಕ್ಕಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನ್ಯಾಯ ದೊರೆತಿದೆ ಎಂದು ತಿರುಗೇಟು ನೀಡಿದರು.
ಆತ್ಮಸಾಕ್ಷಿಯಲ್ಲಿ ಬಂಧಿತರಾಗಿದ್ದಾರೆ: ಒಮ್ಮೆ ರಾಹುಲ್ ಗಾಂಧಿಯವರು ಸಂದರ್ಶನವೊಂದರಲ್ಲಿ ಈ ಘಟನೆಗೆ ಕೆಲ ಕಾಂಗ್ರೆಸ್ಸಿಗರು ಹೊಣೆಯಾಗಿದ್ದಾರೆ ಎಂದು ಹೇಳಿದ್ದರು. ಆಗ, ಸೋನಿಯಾಗಾಂಧಿಯವರು ಈ ಬಗ್ಗೆ ಒಂದೂ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲ ತಿಂಗಳ
ಬಳಿಕ ಲಂಡನ್ನಲ್ಲಿ ಸಂದರ್ಶನವೊಂದರಲ್ಲಿ ಸಿಖರ ವಿರುದ್ಧದ ದಂಗೆಗೂ, ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ರಾಹುಲ್ಗಾಂಧಿ ತದ್ವಿರುದ್ಧ ಹೇಳಿಕೆ ನೀಡಿದ್ದರು. ಈಗ ರಾಹುಲ್ ಹಾಗೂ ಗಾಂಧಿ ಕುಟುಂಬದವರ ಸುಳ್ಳು ಬಯಲಾಗಿವೆ. ಇದು ವೈಯಕ್ತಿಕವಾಗಿ ವ್ಯಕ್ತಿಗೆ ನೀಡಿದ ಶಿಕ್ಷೆಯಲ್ಲ, ಪಕ್ಷಕ್ಕೆ ನೀಡಿರುವ ತೀರ್ಪು. ರಾಹುಲ್ ಗಾಂಧಿಯವರು ಆತ್ಮಸಾಕ್ಷಿಯಲ್ಲಿ ಬಂಧಿತರಾಗಿದ್ದಾರೆ ಎಂದರು.
ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿ ಕಮಲ್ನಾಥ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಆದರೆ, ಸಿಖರ ವಿರೋಧಿ ದಂಗೆಯ ತನಿಖೆಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೇಮಕ ಮಾಡಿದ್ದ ನಾನಾವತಿ ಆಯೋಗದಲ್ಲಿ ಸಾಕ್ಷ್ಯ ಸಮೇತ ಕಮಲನಾಥ್ ಅವರ ಹೆಸರು ಉಲ್ಲೇಖವಾಗಿತ್ತು. ಅಂತಹ ವ್ಯಕ್ತಿಯನ್ನು ಮಧ್ಯ ಪ್ರದೇಶದ ಮುಖ್ಯ ಮಂತ್ರಿಯನ್ನಾಗಿ ಮಾಡುವ
ಮೂಲಕ ರಾಹುಲ್ ಗಾಂಧಿಯವರು ಯಾವ ಸಂದೇಶ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ನ ದ್ವಂದ್ವ ನಿಲುವನ್ನು ತೋರಿಸುತ್ತದೆ. ಕೂಡಲೇ ನಿರ್ಧಾರ ಬದಲಾಯಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ, ಮುಖಂಡರಾದ ವಾಮಾನಾಚಾರ್ಯ, ಮಾಳವಿಕಾ ಇತರರು ಉಪಸ್ಥಿತರಿದ್ದರು.
ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿತ್ತು. ಆದರೆ, ಸುಪ್ರೀಂಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೀಠ ಯುದ್ದವಿಮಾನಗಳ ಬೆಲೆ, ಖರೀದಿ ಪ್ರಕ್ರಿಯೆ ಹಾಗೂ ವ್ಯಾವಹಾರಿಕ ಸಹಾಯ ಕುರಿತಂತೆ ಪ್ರಸ್ತಾಪಿಸಲಾಗಿದ್ದ ಅಂಶಗಳನ್ನು ತಳ್ಳಿ ಹಾಕಿದೆ. ಈ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ರಾಜಕೀಯ ಪ್ರೇರಿತ ಅರ್ಜಿಗಳೆಂದು ನಾನು ಹೇಳ ಬಯಸುತ್ತೇನೆ.
● ಸಂಬೀತ್ ಪಾತ್ರಾ, ಬಿಜೆಪಿ ರಾಷ್ಟ್ರೀಯ ವಕ್ತಾರ