ರಾಜ್ಯ ನಾಯಕರ ಬಗ್ಗೆ ರಮ್ಯಾ ಮುನಿಸು
Team Udayavani, Feb 1, 2018, 6:15 AM IST
ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿಯ ಮೊದಲ ಸಭೆಗೆ ಆಗಮಿಸಿದ್ದ ಮಾಜಿ ಸಂಸದೆ ಹಾಗೂ ಎಐಸಿಸಿ ಸೋಶಿಯಲ್ ಮಿಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ.
ಪ್ರಚಾರ ಸಮಿತಿಯ ಮೊದಲ ಸಭೆಗೆ ಆಗಮಿಸಿದ್ದ ರಮ್ಯಾರನ್ನು ವೇದಿಕೆಯಲ್ಲಿ ಕೂರಲು ಅವಕಾಶ ಕಲ್ಪಿಸದೇ ಪ್ರಚಾರ ಸಮಿತಿಯಲ್ಲಿರುವ ಸಿನಿಮಾ ನಟರ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅದರಿಂದ ಬೇಸರಗೊಂಡಿದ್ದ ರಮ್ಯಾ ತಮಗೆ ನಿಗದಿಪಡಿಸಿದ್ದ ಆಸನದಲ್ಲಿ ಕೂರದೇ ಹಿಂದಿನ ಸಾಲಿನಲ್ಲಿ ಹೋಗಿ ಕುಳಿತರು.
ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಹಳೆ ಊದಲು ವೇದಿಕೆಗೆ ಬರುವಂತೆ ರಮ್ಯಾಗೆ ಆಹ್ವಾನ ನೀಡಿದರೂ, ಬರದೇ ಸುಮ್ಮನೇ ಕುಳಿತಿದ್ದರು. ಕಡೆಗೆ ಮೂರು ಸಾರಿ ಬಾರಮ್ಮ ಹಿಂಜರಿಕೆ ಏಕೆ ಎಂದು ಕರೆದಾಗ ವೇದಿಕೆಗೆ ಹೋದರೂ, ಕಹಳೆ ಊದದೇ ಕೆಳಗಿಳಿದು ಬಂದಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮುಗಿಸುತ್ತಿದ್ದಂತೆ ಫ್ಲೈಟ್ ಇದೆ ಎಂದು ಕಾರಣ ಹೇಳಿ ಸಭೆಯಿಂದ ಅರ್ಧಕ್ಕೇ ಎದ್ದು ಹೋಗಿದ್ದಾರೆ.