ಎಸ್ಸಿ, ಎಸ್ಟಿ ಹಾಸ್ಟೆಲ್ಗಳ ದುರವಸ್ಥೆ ಕುರಿತು ವರದಿ ಬಿಡುಗಡೆ ಇಂದು
Team Udayavani, Mar 9, 2018, 6:15 AM IST
ಬೆಂಗಳೂರು: ಇತ್ತೀಚೆಗಷ್ಟೇ ಕೊಳಗೇರಿಗಳ ದುರವಸ್ಥೆ ಕುರಿತು ಅಧ್ಯಯನ ವರದಿ ಬಿಡುಗಡೆ ಮಾಡಿದ್ದ ಬಿಜೆಪಿ ಶುಕ್ರವಾರ (ಮಾ. 9) ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳ ದುಸ್ಥಿತಿ ಕುರಿತು ವರದಿ ಬಿಡುಗಡೆ ಮಾಡುತ್ತಿದೆ.
ರಾಜ್ಯದ 2,500ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳಾ ಹಾಸ್ಟೆಲ್ಗಳ ದುಸ್ಥಿತಿ ಕುರಿತು ಬಿಜೆಪಿ ಅಧ್ಯಯನ ನಡೆಸಿ ವರದಿ ಸಿದಟಛಿಪಡಿಸಿದ್ದು, ರಾಜ್ಯದ 15 ಜಿಲ್ಲೆಗಳಲ್ಲಿ ಪಕ್ಷದ ನಾಯಕರು ಏಕಕಾಲದಲ್ಲಿ ಇದನ್ನು ಬಿಡುಗಡೆ ಮಾಡುವರು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭೇಟಿ ನೀಡಿದ್ದ 2,500 ಹಾಸ್ಟೆಲ್ಗಳ ಪೈಕಿ 1,183 ಹಾಸ್ಟೆಲ್ಗಳಲ್ಲಿ ಮಕ್ಕಳಿಗೆ ಮಂಚ, ದಿಂಬು ಹೊದಿಕೆಗಳಿಲ್ಲ. 666 ಹಾಸ್ಟೆಲ್ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಅಂದರೆ 4 ಜನ ಇರಬೇಕಾದೆಡೆ 15 ವಿದ್ಯಾರ್ಥಿಗಳು ವಾಸವಿದ್ದಾರೆ. ಐದು ಜಿಲ್ಲೆಗಳಲ್ಲಿ ಹಾಸ್ಟೆಲ್ಗಳಿಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂದು ಅವರು ಹೇಳಿದ್ದಾರೆ.
2157.77 ಕೋಟಿ ರೂ ಲೂಟಿ: ಸಮಾಜ ಕಲ್ಯಾಣದ ಹೆಸರಿನಲ್ಲಿ 2157.77 ಕೋಟಿ ರೂ. ಹಗರಣ ನಡೆದಿದೆ ಎಂದು ವಿಧಾನ ಮಂಡಲ ಸಮಿತಿಯೇ ವರದಿ ನೀಡಿದೆ. ಆದರೆ ಈ ವರದಿಯನ್ನು ಎಲ್ಲಿ ಬಚ್ಚಿಡಲಾಗಿದೆ ಎಂದು ಪ್ರಶ್ನಿಸಿರುವ ರವಿಕುಮಾರ್, ಈ ಬಗ್ಗೆ ಸರ್ಕಾರ ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಧ್ಯಯನ ವರದಿಯನ್ನು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಸದಾನಂದಗೌಡ ಬೆಳಗ್ಗೆ 8 ಗಂಟೆಗೆ ಮಾಗಡಿ ರಸ್ತೆಯ ಕಾಸಿಯಾ ಸಭಾಂಗಣದಲ್ಲಿ ಬಿಡುಗಡೆ ಮಾಡುವರು. ಇದೇ ವೇಳೆ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್, ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸೇರಿ 15 ಕಡೆಗಳಲ್ಲಿ ವರದಿ ಬಿಡುಗಡೆ ಮಾಡಲಿದ್ದಾರೆಂದು ತಿಳಿಸಿದರು.