ನಿವೃತ್ತ ಡಿಜಿಪಿ ಸಿ. ದಿನಕರನ್ ನಿಧನ
Team Udayavani, Oct 5, 2018, 6:40 AM IST
ಬೆಂಗಳೂರು:ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸಿ.ದಿನಕರನ್(77) ಬುಧವಾರ ತಡರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ದಿನಕರನ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಕಲ್ಪಳ್ಳಿ ರುದ್ರಭೂಮಿಯಲ್ಲಿ ಮೃತರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಿನಕರನ್ ಕಾನೂನು ಹೋರಾಟ ನಡೆಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಪಡೆದುಕೊಂಡಿದ್ದರು. ಅಲ್ಲದೆ, ರಾಷ್ಟ್ರಪತಿ ಪದಕವನ್ನು ಸಹ ನ್ಯಾಯಾಲಯದ ಮೊರೆ ಹೋಗಿ ಪಡೆದುಕೊಂಡಿದ್ದರು.
ತಮಿಳುನಾಡು ಮೂಲದ ಸಿ.ದಿನಕರನ್ 1963ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಕೇಂದ್ರ ಸೇವೆಗೆ ತೆರಳಿದ್ದ ದಿನಕರನ್ ವಾಪಸ್ ಮರಳಿ ಸಿಐಡಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಅನಂತರ ಕಾನೂನು ಹೋರಾಟ ನಡೆಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆ ಪಡೆದಿದ್ದರು.
ನೇರ ನುಡಿ, ಪ್ರಮಾಣಿಕ ಅಧಿಕಾರಿಯಾಗಿದ್ದ ದಿನಕರನ್ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುತ್ತಿದ್ದರು. ಹೀಗಾಗಿಯೇ ಬಹಳ ವರ್ಷಗಳ ಕಾಲ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಜತೆಗೆ ಎಲ್ಎಲ್ಎಂ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದ ಸಿ.ದಿನಕರನ್ ನಿವೃತ್ತಿ ಬಳಿಕ ವಕೀಲರಾಗಿಯೂ ಕೆಲಸ ಮಾಡಿದ್ದರು.
ದಿನಕರನ್ ಅವರು ವರನಟ ಡಾ ರಾಜ್ಕುಮಾರ್ ಅಪಹರಣಕ್ಕೆ ಸಂಬಂಧಿಸಿದಂತೆ ಕಾಡುಗಳ್ಳ ವೀರಪ್ಪನ್ ಕುರಿತಾದ “ವೀರಪ್ಪನ್ ಪ್ರೈಜ್ ಕ್ಯಾಚ್’ ಎಂಬ ಪುಸ್ತಕ ಬರೆದು ವಿವಾದಕ್ಕೀಡಾಗಿದ್ದರು.ಈ ಪುಸ್ತಕದಲ್ಲಿ ಕಾಡುಗಳ್ಳ ವೀರಪ್ಪನ್ ಪ್ಪನ್ ಕಾರ್ಯಾಚರಣೆ ವೇಳೆ ಸರ್ಕಾರ ತೆಗೆದುಕೊಂಡ ತೀರ್ಮಾನಗಳು ಹಾಗೂ ಕಾರ್ಯ ಪಡೆಯಲ್ಲಿದ್ದ ಕೆಲ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಉಲ್ಲೇಖೀಸಿದ್ದು ತೀವ್ರ ಸಂಚಲನಕ್ಕೂ ಕಾರಣವಾಗಿತ್ತು.