ಸೌದಿಗೆ ಯುವತಿಯರ ಕಳ್ಳಸಾಗಣೆ: ನಾಲ್ವರ ಬಂಧನ
Team Udayavani, Dec 13, 2018, 12:36 PM IST
ಬೆಂಗಳೂರು: ನೇಪಾಳ ಯುವತಿಯರನ್ನು ಮಾನವ ಕಳ್ಳಸಾಗಾಣಿಕೆ ಮೂಲಕ ಕುವೈತ್, ಸೌದಿ ಅರೇಬಿಯಾ ರಾಷ್ಟ್ರಗಳಿಗೆ ಕಳುಹಿಸಿಕೊಡುತ್ತಿದ್ದ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಭೇದಿಸಿದ್ದು, 35 ಯುವತಿಯರನ್ನು ರಕ್ಷಿಸಿದ್ದಾರೆ.
ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿಸಿಕೊಂಡಿದ್ದ ನೇಪಾಳ ಮೂಲದ ಕಿಶನ್ ಗಾಲೆ, ರಾಕೇಶ್ ಶರ್ಮಾ, ಲಕ್ಷ್ಮಣ್ ಗಾಲೆ ತಾಗ್ ಬಹೂದ್ದೂರ್ ಎಂಬುವವರನ್ನು ಬಂಧಿಸಲಾಗಿದೆ. ಜಾಲದ ಪ್ರಮುಖ ಕಿಂಗ್ ಪಿನ್ಗಳಾದ ಆಂಧ್ರ ಮೂಲದ ವೆಂಕಟೇಶ್ವರ ರಾವ್, ನೇಪಾಳದ ನವರಾಜ್ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ಕೇಂದ್ರ ವಲಸೆ ವಿಭಾಗ (ಇಮಿಗ್ರೇಶನ್) ಹಾಗೂ ಪೊಲೀಸ್ ಇಲಾಖೆ ಹೆಸರಿನ ಆರು ನಕಲಿ ಸೀಲುಗಳು, 2 ಲ್ಯಾಪ್ಟಾಪ್, 1 ಪ್ರಿಂಟರ್, 6 ಫೋನ್ ಜಪ್ತಿ ಮಾಡಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಷ್ಟದಲ್ಲಿರುವ ಹೆಣ್ಣುಮಕ್ಕಳು ಟಾರ್ಗೆಟ್: ಕಿಂಗ್ ಪಿನ್ಗಳಾದ ವೆಂಕಟೇಶ್ವರ ರಾವ್ ಹಾಗೂ ನವಿರಾಜ್ ಹಲವು ವರ್ಷಗಳಿಂದ ಮಾನವ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿದ್ದು, ಉಳಿದ ಆರೋಪಿಗಳು ಅವರಿಗೆ ಸಹಕಾರ ನೀಡುತ್ತಿದ್ದರು. ನೇಪಾಳದ ಬಡ ಹೆಣ್ಣುಮಕ್ಕಳು, ಗಂಡನಿಂದ
ಪರಿತ್ಯಕ್ತ ಮಹಿಳೆಯರನ್ನು ಗುರುತಿಸಿ ಆರೋಪಿಗಳು, ಬಂಧಿತರಿಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಹೆಣ್ಣುಮಕ್ಕಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದುಬೈ, ಕುವೈತ್ ಹಾಗೂ ಸೌದಿ ಅರೆಬಿಯಾ ರಾಷ್ಟ್ರಗಳಲ್ಲಿ ಹೆಚ್ಚು ವೇತನ ನೀಡುವ ಕೆಲಸಕ್ಕೆ ಕಳುಹಿಸಿಕೊಡುತ್ತೇವೆ ಎಂದು ನಂಬಿಸಿ ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದರು. ಕಾಟನ್ ಪೇಟೆ ಮುಖ್ಯ ರಸ್ತೆಯ ಸಮೀಪ ಕಟ್ಟಡವೊಂದನ್ನು ಬಾಡಿಗೆಗೆ ಪಡೆದುಕೊಂಡು ಮೂರು ನಾಲ್ಕು ದಿನಗಳ ಕಾಲ ಕೂಡಿ ಹಾಕಿ, ಅವರು ವಿದೇಶಗಳಿಗೆ ತೆರಳಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಾಸ್ ಪೋರ್ಟ್ಗಳನ್ನು ತಯಾರಿಸುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಅನುಮಾನ ಬರಬಾರದೆಂದು ದಾಖಲೆಗಳ ಮೇಲೆ ನಕಲಿ ಸೀಲ್ಗಳನ್ನು ಹಾಕುತ್ತಿದ್ದರು. ಬಳಿಕ, ಎರಡು ಮೂರು ದಿನಕ್ಕೊಮ್ಮೆ ಹಂತ – ಹಂತವಾಗಿ ಯುವತಿಯರನ್ನು ವಿದೇಶಗಳಿಗೆ ಕಳುಹಿಸಿಕೊಡುತ್ತಿದ್ದರು. ಬಳಿಕ, ವಿದೇಶಿ ಏಜೆಂಟರುಗಳ ಬಳಿ ಲಕ್ಷಾಂತ ರೂ. ಹಣ ಪಡೆಯುತ್ತಿದ್ದರು.
ಸಾಕಷ್ಟು ಏಜೆಂಟರುಗಳು ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹೀಗಾಗಿ, ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಜತೆಗೆ, ಸಂತ್ರಸ್ತ ಯುವತಿಯರನ್ನು ನೇಪಾಳಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ