ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯ್ತಿಗೆ ಕತ್ತರಿ
Team Udayavani, Nov 4, 2019, 10:39 AM IST
ಬೆಂಗಳೂರು: “ಸ್ಮಾರ್ಟ್ ಕಾರ್ಡ್’ ಹೊಂದಿರುವ ಮೆಟ್ರೋ ಪ್ರಯಾಣಿಕರಿಗೊಂದು ಕಹಿ ಸುದ್ದಿ. ಕನಿಷ್ಠ 50 ರೂ. ಠೇವಣಿ ಹೊಂದಿರಬೇಕು ಎಂಬ ನಿಯ ಮದ ಬೆನ್ನಲ್ಲೇ ರಿಯಾಯಿತಿಗೆ ಕತ್ತರಿ ಹಾಕುವ ಚಿಂತನೆ ನಡೆದಿದೆ.
ಪ್ರಸ್ತುತ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಪ್ರಯಾಣ ದರದಲ್ಲಿ ಶೇ. 15ರಷ್ಟು ರಿಯಾಯಿತಿ ನೀಡಲಾಗಿದೆ. ಈ ಪ್ರಮಾಣವನ್ನು ಕೇವಲ ಶೇ. 5ಕ್ಕೆ ಸೀಮಿತಗೊಳಿಸುವ ಪ್ರಸ್ತಾವ ಬೆಂಗಳೂರು ಮೆಟ್ರೋ ರೈಲು ನಿಗಮದ ಮುಂದಿದೆ. ತನ್ನ ಆದಾಯ ಹೆಚ್ಚಿಸಿ ಕೊಳ್ಳಲು ಈ ಐಡಿಯಾ ಮಾಡಿದೆ. ಆದರೆ, ಮತ್ತೂಂದೆಡೆ ಲಕ್ಷಾಂತರ ಪ್ರಯಾಣಿಕರಿಗೆ ಇದರಿಂದ ಹೊರೆ ಬೀಳಲಿದೆ. ನಿತ್ಯ ಸುಮಾರು 4.20 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಅರ್ಧಕ್ಕರ್ಧ ಶೇ. 68ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಒಂದು ವೇಳೆ ರಿಯಾಯಿತಿಗೆ ಶೇ. 10ರಷ್ಟು ಕತ್ತರಿ ಹಾಕಿದರೆ, ಕಾರ್ಯಾಚರಣೆಯಿಂದ ಪ್ರತಿ ದಿನ 7ರಿಂದ 8 ಲಕ್ಷ ರೂ. ಹೆಚ್ಚುವರಿ ಆದಾಯ ಅನಾಯಾಸವಾಗಿ ಹರಿದುಬರಲಿದೆ. ಮಾಸಿಕ ಇದು 2 ಕೋಟಿ ರೂ. ಆಗಲಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ.
ಪ್ರಯಾಣಿಕರನ್ನು ಸ್ಮಾರ್ಟ್ ಕಾರ್ಡ್ನತ್ತ ಸೆಳೆಯಲು ವಾಣಿಜ್ಯ ಸೇವೆ ಆರಂಭಗೊಂಡ ದಿನದಿಂದ ಅಂದರೆ 2011ರ ಸೆಪ್ಟೆಂಬರ್ನಿಂದಲೇ ಕಾರ್ಡ್ ಹೊಂದಿದವರಿಗೆ ಬಿಎಂಆರ್ಸಿಎಲ್ ಶೇ. 15ರಷ್ಟು ರಿಯಾಯಿತಿ ಕಲ್ಪಿಸಿತ್ತು. ಈಗ ಬಹುತೇಕರು ಈ ಕಾರ್ಡ್ ಬಳಕೆ ಮಾಡುವುದರ ಜತೆಗೆ ಮೆಟ್ರೋ ಸೇವೆಗೆ ಹೊಂದಿ ಕೊಂಡಿದ್ದಾರೆ.
ಇದು ರಿಯಾಯಿತಿ ಕತ್ತರಿಗೆ ಸಕಾಲ ಎಂಬ ಅಭಿಪ್ರಾಯ ನಿಗಮದ ಉನ್ನತ ಮಟ್ಟದ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ. ಇದಕ್ಕೆ ಮುನ್ನುಡಿ ಯಾಗಿ ಈಚೆಗೆ ಕನಿಷ್ಠ 50 ರೂ. ಠೇವಣಿ ಇಡುವುದನ್ನು ಕಡ್ಡಾಯಗೊಳಿಸುವ ಪ್ರಯೋಗ ಮಾಡಲಾಯಿತು. ಇದರಿಂದ ಕೋಟ್ಯಂತರ ರೂ. ಹರಿದುಬಂದಿರುವುದನ್ನು ಇಲ್ಲಿ ಗಮನಿಸಬಹುದು. “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ತಿಂಗಳಿಗೆ ಸುಮಾರು 1.25 ಕೋಟಿ ಜನ ಪ್ರಯಾಣಿಸುತ್ತಿದ್ದು, 33.40 ಕೋಟಿ ರೂ. ಆದಾಯ ಹರಿದುಬರುತ್ತದೆ. ಇದರಲ್ಲಿ ಶೇ. 68ರಷ್ಟು ಸ್ಮಾರ್ಟ್ ಕಾರ್ಡ್ ಬಳಕೆ ದಾರರು ಹಾಗೂ ಉಳಿದದ್ದು ಸ್ಮಾರ್ಟ್ ಟೋಕನ್ಗಳ ರೂಪದಲ್ಲಿ ಬರುತ್ತದೆ. ದಿನಕ್ಕೆ ಇದು ಕ್ರಮವಾಗಿ 4.20 ಲಕ್ಷ ಪ್ರಯಾಣಿಕರು ಹಾಗೂ 1.11 ಕೋಟಿ ರೂ. ಆದಾಯ ಆಗುತ್ತದೆ.
50 ರೂ. ದಂಡ : ಟಿಕೆಟ್ ಪಡೆದು ಪ್ರಯಾಣಿಸು ವವರು ನಿಗದಿತ ನಿಲ್ದಾಣದ ಬದಲಿಗೆ ಮುಂದಿನ ನಿಲ್ದಾಣಕ್ಕೆ ಇಳಿದರೆ, ಅಂತಹವರಿಗೆ 50 ರೂ. ದಂಡ ವಿಧಿಸಲೂ ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿಯೂ ಚಿಂತನೆ ಇದೆ. ಆದರೆ, ಅಂತಿಮವಾಗಿಲ್ಲ. ಅಷ್ಟಕ್ಕೂ ಇದನ್ನು ಹೊಸದಾಗಿ ಪರಿಚಯಿಸುತ್ತಿಲ್ಲ. ಮೆಟ್ರೋ ಕಾಯ್ದೆ ಪ್ರಕಾರ ಹೀಗೆ ನಿಗದಿತ ನಿಲ್ದಾಣದ ಬದಲಿಗೆ ಮುಂದಿನ ನಿಲ್ದಾಣದಲ್ಲಿ ಇಳಿಯುವವರಿಗೆ ದಂಡ ವಿಧಿಸಲು ಅವಕಾಶ ಇದೆ. ದಂಡ ಪಾವತಿಸದವರನ್ನು ನ್ಯಾಯಾ ಲಯಕ್ಕೂ ಹಾಜರುಪಡಿಸುವ ಅಧಿಕಾರವೂ ಇದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಇಂತಹ ಹಲವಾರು ಪ್ರಸ್ತಾವನೆಗಳು ಬಂದಿರುತ್ತವೆ. ಆದರೆ, ಸ್ಮಾರ್ಟ್ ಕಾರ್ಡ್ಗೆ ಇರುವ ರಿಯಾಯಿತಿ ಪ್ರಮಾಣ ಕಡಿತದ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸೂಕ್ತ ನಿರ್ಧಾರದ ನಂತರ ತಿಳಿಸಲಾಗುವುದು. -ಅಜಯ್ ಸೇಠ್ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು
-ವಿಜಯಕುಮಾರ್ ಚಂದರಗಿ