ವನ್ಯಜೀವಿ ಸಂರಕ್ಷಣೆಗೆ ಜೀವನಾನುಭವವೇ ಸೆಲೆ
Team Udayavani, Jan 15, 2018, 6:10 AM IST
ಬೆಂಗಳೂರು: ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗೆ ವಿಜ್ಞಾನವಿದೆ. ಆದರೆ, ಪಠ್ಯವಿಲ್ಲ. ಆದ್ದರಿಂದ ಜೀವನಾನುಭವ ಮತ್ತು ಹಿರಿಯರಿಂದ ಕಲಿತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಕಟಿಬದಟಛಿರಾಗಬೇಕು ಎಂದು ವನ್ಯಜೀವಿ ತಜ್ಞ ಹಾಗೂ “ಉದಯವಾಣಿ’ ಅಂಕಣಕಾರ ಸಂಜಯ್ ಗುಬ್ಬಿ ಕರೆ ನೀಡಿದ್ದಾರೆ.
ತಮ್ಮ ಮೊದಲ ಆಂಗ್ಲ ಕೃತಿ “ದಿ ಸೆಕೆಂಡ್ ನೇಚರ್: ಸೇವಿಂಗ್ ಟೈಗರ್ ಲ್ಯಾಂಡ್ಸ್ಕೇಪ್ ಇನ್ ಟ್ವೆಂಟಿ ಫಸ್ಟ್ ಸೆಂಚುರಿ’ ಲೋಕಾರ್ಪಣೆ ಬಳಿಕ ಅಜೀಂ ಪ್ರೇಂಜಿ ವಿವಿಯ ಪ್ರಾಧ್ಯಾಪಕಿ ಡಾ.ಹರಿಣಿ ನಾಗೇಂದ್ರ ಅವರೊಂದಿಗಿನ ಸಂಭಾಷಣೆ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಜಯ್ಗುಬ್ಬಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ವಿಜ್ಞಾನವಿದೆ. ಆದರೆ, ಸಂರಕ್ಷಕರಾಗುವ ಬಗ್ಗೆ ಪಠ್ಯ ರೂಪದ ಸಿದಟಛಿ ಆಕರಗಳಿಲ್ಲ. ಅದನ್ನು ನಮ್ಮ ಜೀವನ ಮತ್ತು ಹಿರಿಯರಿಂದ ಕಲಿಯಬೇಕು ಎಂದರು.
ಸೇಂಟ್ಮಾರ್ಕ್ಸ್ ರಸ್ತೆಯ ದಿ.ಆರ್ಟ್ಸ್ ವಿಲೇಜ್ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಪುಸ್ತಕ ಬಿಡುಗಡೆ ಮಾಡಿದರು. ಜರ್ಮನ್ ಕಾನ್ಸುಲೆಟ್ ಜನರಲ್ ಮಾರ್ಗಿಟ್ ಹೆಲ್ವಿಗ್ ಬೊಟೆ, ಹಿರಿಯ ವಿಜ್ಞಾನಿ ಜಾನ್ಸಿಂಗ್, ನಿವೃತ್ತ ಐಎಫ್ಎಸ್ ಅಧಿಕಾರಿ ಬಿ.ಕೆ.ಸಿಂಗ್ ಪುಸ್ತಕ ಬಿಡುಗಡೆಗೆ ಸಾಕ್ಷಿಯಾದರು. ಈ ವೇಳೆ, ನಡೆದ ಸಂಭಾಷಣೆಯಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ತಮ್ಮ ಮೂರು ದಶಕಗಳ ತಮ್ಮ ಅನುಭಗಳನ್ನು ಸಂಜಯ್ ಗುಬ್ಬಿ ಹಂಚಿಕೊಂಡರು.
ವಿದ್ಯಾರ್ಥಿ ದೆಸೆಯಿಂದಲೇ ವನ್ಯಜೀವಿ ಸಂರಕ್ಷಣೆ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಂದಿದ್ದೇನೆ. 30 ವರ್ಷಗಳ ನನ್ನ ಈ ಪಯಣದಲ್ಲಿ ಸರ್ಕಾರ, ಅಧಿಕಾರಿಗಳು ಮತ್ತು ಸಾಮಾನ್ಯ ಜನರೊಂದಿಗೆ ಕೆಲಸ ಮಾಡಿದ್ದೇನೆ. ಸಿಹಿ-ಕಹಿ ಎರಡೂ ಸನ್ನಿವೇಶಗಳನ್ನು ಎದುರಿಸಿದ್ದೇನೆ. ನಿರಂತರ ಕೆಲಸ ಮತ್ತು ಮಾನವೀಯ ಕಳಕಳಿ ಗುರಿ ಸಾಧನೆಯನ್ನು ಸುಲಭ ಮಾಡಲಿದೆ. ಸಂಶೋಧನೆ ಬಗ್ಗೆ ಆಸಕ್ತಿ ಇದೆ.
ಆದರೆ, ವನ್ಯಜೀವಿ ಸಂರಕ್ಷಣೆ ನನ್ನ ಆದ್ಯತೆ. ಯುವಪೀಳಿಗೆಗೆ ಪರಂಪರೆ ಬಿಟ್ಟು ಹೋಗಬೇಕು ಅನ್ನುವುದು ನನ್ನ ಆಸೆ. ವನ್ಯಜೀವಿ ಸಂರಕ್ಷಣೆ ಸಂದರ್ಭದಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು ಎಂದು ಸಂಜಯ್ ಗುಬ್ಬಿ
ಸಂಭಾಷಣೆಯಲ್ಲಿ ಅಭಿಪ್ರಾಯಪಟ್ಟರು. ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅವರದೇ ಆದ ಒತ್ತಡ ಮತ್ತು ಇತಿಮಿತಿಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಇರುವಂತೆ ಸಂರಕ್ಷಕರಿಗೂ ತೊಡಕುಗಳು ಇರುತ್ತವೆ. ತೊಡಕುಗಳನ್ನು ನಿವಾರಿಸಿ ಮನವವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮದು. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಬೇಕು. ನಾವು ಸಾಮಾನ್ಯ ಜನರಿಗೆ ತಲುಪಬೇಕಾದರೆ ಸ್ಥಳೀಯ ಭಾಷೆ ಮುಖ್ಯ.
ಗ್ರಾಮೀಣ ಭಾಗದಿಂದ, ಕಾಡಂಚಿನ ಗ್ರಾಮಗಳು ಮತ್ತು ಕಾಡಿನೊಳಗೆ ವಾಸ ಮಾಡುವ ಅನೇಕ ಯುವಕರು ವನ್ಯಜೀವಿ ಸಂರಕ್ಷಣೆಗೆ ಮುಂದೆ ಬರುತ್ತಿದ್ದಾರೆ. ವನ್ಯಜೀವಿ ಸಂರಕ್ಷಣೆ ಬಗೆಗಿನ ದೃಷ್ಟಿಕೋನಕ್ಕೆ ಆಯಾಮ, ಅರ್ಥ ಕೊಡುವ ಅವಶ್ಯಕತೆ ಇದೆ. ಮಕ್ಕಳನ್ನು ಪರಿಸರ ಪ್ರೇಮಿಗಳನ್ನಾಗಿ ಮಾಡುವ ವ್ಯವಸ್ಥೆ ಶಾಲಾ ಹಂತಗಳಲ್ಲಿ ಬರಬೇಕು ಎಂದು ಸಂಜಯ್ ಗುಬ್ಬಿ ಇದೇ ವೇಳೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಕೆ.ಸಿಂಗ್, ದೀಪಕ್ ಶರ್ಮಾ,
ಕೆ.ಎಸ್.ಸುಗಾರ, ಬಿಸ್ವಜಿತ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ಕುಮಾರ್ ಗೋಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.
ನಾನೊಬ್ಬ ಆಶಾವಾದಿ ವನ್ಯಜೀವಿ ಸಂರಕ್ಷಕ; ನನ್ನ ಪುಸ್ತಕ ಸಹ ಸಂರಕ್ಷಣೆಗೆ ಮಿಡಿಯುವ ಮನಸ್ಸುಗಳಲ್ಲಿ ಆಶಾವಾದ ಮೂಡಿಸಲಿದೆ. ವನ್ಯಜೀವಿ ಸಂರಕ್ಷಣೆಯ ಮೂರು ದಶಕಗಳ ಪಯಣದಲ್ಲಿ ನನ್ನ ಕುಟುಂಬ ಬೆಂಬಲಿಸಿದೆ. ಕೆಟ್ಟ ಮತ್ತು ಒಳ್ಳೆಯ ಎರಡೂ ಸಂದರ್ಭದಲ್ಲಿ ನನ್ನೊಂದಿಗೆ ನಿಂತಿದೆ. ಜೊತೆಗೆ ರಾಜಕಾರಣಿಗಳು, ಅಧಿಕಾರಿಗಳು,ಮಾಧ್ಯಮ ಸ್ನೇಹಿತರು, ಸ್ವಯಂಸೇವಾ ಸಂಸ್ಥೆಗಳು, ಯುವಕರು, ಹಿತೈಷಿಗಳ ಬೆಂಬಲ, ಪ್ರೋತ್ಸಾಹಕ್ಕೆ ನಾನು ಯಾವತ್ತೂ ಋಣಿಯಾಗಿದ್ದೇನೆ.’
– ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ.